ವಿಷಾಹಾರ ಸೇವನೆ; ಮಗು ಸಾವು, ಇಬ್ಬರು ಆಸ್ಪತ್ರೆಗೆ ದಾಖಲು
ಅಮರಾವತಿ, ಜೂ.12: ಚಿಕ್ಕ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಪೋಷಕರ ಪಾತ್ರ ಮುಖ್ಯವಾಗಿರುತ್ತದೆ. ಈ ಬಗ್ಗೆ ನಿತ್ಯ ಎಷ್ಟೇ ಕಾಳಜಿ ತೋರಿಸಿದರು ಸಾಲದು. ಚೂರು ಎಚ್ಚರ ತಪ್ಪಿದರು ಸಾಕು ಮಕ್ಕಳ ಪ್ರಾಣಕ್ಕೆ ಕುತ್ತು ಎದುರಾಗಿಬಿಡುತ್ತದೆ.
ಕರ್ನೂಲ್ನಲ್ಲಿಯ ಅಧೋನಿಯ ಕಂದಾಯ ವಿಭಾಗ ವ್ಯಾಪ್ತಿಯ ಕೊಸಗಿ ಮಂಡಲ್ನಲ್ಲಿಯೂ ಇಂತಹ ಘಟನೆ ನಡೆದಿದೆ. ಎರಡು ವರ್ಷದ ಮಗುವೊಂದು ವಿಷಪೂರಿತ ಆಹಾರ (ಹಣ್ಣು) ಸೇವಿಸಿ ಮೃತಪಟ್ಟಿದೆ.
ಈ ಕಂದಮ್ಮನ ಜೊತೆಗೆ ಇಬ್ಬರು ಮಕ್ಕಳು ಸೇರಿ ಮೂವರು ಅದೇ ಆಹಾರ ಸೇವಿಸಿದ್ದಾರೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಕಂದಮ್ಮ ಸಾವನ್ನಪ್ಪಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆಯಲ್ಲಿನ ಒಟ್ಟು ನಾಲ್ಕು ಮಕ್ಕಳು ಸುಮಾರು 2-4ವರ್ಷದೊಳಗಿನವರಾಗಿದ್ದಾರೆ. ಆಂಜಿ ಕಂದಮ್ಮ ಮತ್ತು ಹರ್ಷಾ ಈ ಘಟನೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟ ದುರ್ದೈವಿ ಸಹೋದರರು. ಶ್ರೀರಾಮುಲು ಎಂಬ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಬ್ಬ ಮಗುವಿನ ಹೆಸರು ತಿಳಿದು ಬಂದಿಲ್ಲ.
ಒಂದು ಮಗು ಸ್ಥಳದಲ್ಲೇ ಅಸುನೀಗಿದರೆ ಉಳಿದ ಮೂವರನ್ನು ಆಸ್ಪತ್ರೆ ಕರೆದೊಯ್ಯಲಾಗಿದೆ. ಆದರೆ ಹರ್ಷ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆಯೊಯ್ಯತ್ತಿದ್ದಂತೆ ಮೃತಪಟ್ಟಿದ್ದಾನೆ. ನಂತರ ಉಳಿದಿಬ್ಬರನ್ನು ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಾವಿಗೆ ಕಾರಣವೇನು?; ಕೀಟನಾಶದ ಬಳಕೆಗೆ ಉಪಯೋಗಿಸಿದ್ದ ಪ್ಲಾಸ್ಟಿಕ್ ಚೀಲದಲ್ಲೇ ಕೊಯ್ಲು ಮಾಡಿ ತಂದ ಹಣ್ಣುಗಳನ್ನು ಮನೆಯಲ್ಲಿ ಇಡಲಾಗಿತ್ತು. ಆ ಪ್ಲಾಸ್ಟಿಕ್ನಲ್ಲಿದ್ದ ಹಣ್ಣುಗಳನ್ನು ತಿಂದ ಕಂದಮ್ಮ ಮತ್ತು ಪುಟ್ಟ ಮಕ್ಕಳು ಅಸ್ವಸ್ಥರಾಗಿದ್ದಾರೆ. ತಿಂದವರೆಲ್ಲರಿಗೂ ವಾಂತಿ, ಭೇದಿ ಕಾಣಿಸಿಕೊಂಡಿದ್ದು, ಸ್ಥಳದಲ್ಲೇ ಬಿದ್ದು ಒದ್ದಾಡಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ರಾಜಾ ರೆಡ್ಡಿ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆಸ್ಪತ್ರೆಯಲ್ಲಿರುವ ಇಬ್ಬರು ಮಕ್ಕಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಶೀಘ್ರವೇ ಅವರು ಗುಣಮುಖರಾಗಲಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.