ತಿರುಪತಿ ತಿಮ್ಮಪ್ಪನ ದರ್ಶನ ಮಿಸ್ ಮಾಡಿಕೊಂಡ ಭಕ್ತರಿಗೆ ಪರ್ಯಾಯ ವ್ಯವಸ್ಥೆ
ತಿರುಪತಿ, ನವೆಂಬರ್ 23: ಭಾರಿ ಮಳೆಯಿಂದಾಗಿ ತಿರುಪತಿ ತಿಮ್ಮಪ್ಪನ ದರ್ಶನವನ್ನು ಮಿಸ್ ಮಾಡಿಕೊಂಡ ಭಕ್ತರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತಿದೆ.
ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಟಿಕೆಟ್ ಕಾಯ್ದಿರಿಸಿ ಪ್ರವಾಹದಿಂದಾಗಿ ದರ್ಶನ ಮಿಸ್ ಮಾಡಿಕೊಂಡ ಭಕ್ತರಿಗಾಗಿ ತಿರುಪತಿ ತಿರುಮಲ ದೇವಸ್ಥಾನ ಮಂಡಳಿ ಪರ್ಯಾಯ ವ್ಯವಸ್ಥೆ ಮಾಡಿದ್ದು, ಬೇರೆ ಸಮಯ ನಿಗದಿ ಮಾಡಿದೆ.
ದೇವ್ರ ಊರಲ್ಲಿ ದೇವ್ರದ್ದೇ ಆಟ: ತಿರುಪತಿಗೆ ಎದುರಾದ ಇನ್ನೊಂದು ಭಾರೀ ಸಂಕಷ್ಟ
ಪ್ರವಾಹ ಏರ್ಪಟ್ಟ ನವೆಂಬರ್ 18 ಮತ್ತು 30 ರ ನಡುವೆ ತಮ್ಮ ದರ್ಶನದ ಟಿಕೆಟ್ಗಳನ್ನು ಕಾಯ್ದಿರಿಸಿದ್ದ ಮತ್ತು ತಿರುಮಲ ಮತ್ತು ತಿರುಪತಿಯಲ್ಲಿ ಪ್ರತಿಕೂಲ ಹವಾಮಾನದ ಕಾರಣ ಅದನ್ನು ಮಾಡಲು ಸಾಧ್ಯವಾಗದ ಯಾತ್ರಾರ್ಥಿಗಳಿಗೆ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿ ಪರ್ಯಾಯ ಟೈಮ್ ಸ್ಲಾಟ್ಗಳನ್ನು ಒದಗಿಸಿದೆ.
ಈ ಕುರಿತು ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಕೆಎಸ್ ಜವಾಹರ್ ರೆಡ್ಡಿ ನಿರ್ಧಾರ ಕೈಗೊಂಡಿದ್ದಾರೆ. ದರ್ಶನವನ್ನು ಕಳೆದುಕೊಂಡ ಯಾತ್ರಾರ್ಥಿಗಳು ಡಿಸೆಂಬರ್ನಿಂದ ಆರು ತಿಂಗಳೊಳಗೆ ಟಿಟಿಡಿ ಒದಗಿಸುವ ಪರ್ಯಾಯ ಸಮಯದ ಸ್ಲಾಟ್ಗಳನ್ನು ಪಡೆಯಬಹುದು. ಇದಕ್ಕಾಗಿ ಟಿಟಿಡಿ ವಿಶೇಷ ಸಾಫ್ಟ್ವೇರ್ ರೂಪಿಸಲಿದೆ ಎಂದು ಮಾಹಿತಿ ನೀಡಿದರು.
ಇದು ನವೆಂಬರ್ 30 ರಿಂದ ಲಭ್ಯವಿರುತ್ತದೆ. ತಿರುಮಲದಲ್ಲಿರುವ ಒಟ್ಟು 7,000 ಕೊಠಡಿಗಳಲ್ಲಿ ನಾರಾಯಣಗಿರಿ ವಿಶ್ರಾಂತಿ ಗೃಹದಲ್ಲಿ ಕೇವಲ ಎರಡು ಕೊಠಡಿಗಳು ಮಾತ್ರ ಪ್ರವಾಹದಿಂದಾಗಿ ಹಾನಿಗೊಳಗಾಗಿವೆ. ಉಳಿದೆಲ್ಲ ಕೊಠಡಿಗಳು ಸುಭದ್ರವಾಗಿವೆ ಎಂದು ಹೆಚ್ಚುವರಿ ಇಒ ತಿಳಿಸಿದ್ದಾರೆ. ಹಾನಿಗೊಳಗಾದ ಎರಡು ಕೊಠಡಿಗಳನ್ನು ಆದಷ್ಟು ಬೇಗ ದುರಸ್ತಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಇನ್ನು ತಿರುಮಲ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ, ತಿರುಪತಿಯನ್ನು ಬೆಂಗಳೂರು, ಚೆನ್ನೈ, ಹೈದರಾಬಾದ್, ವಿಜಯವಾಡಕ್ಕೆ ಸಂಪರ್ಕಿಸುವ ತಾತ್ಕಾಲಿಕ ರಸ್ತೆಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಸೋಮವಾರ ಅನ್ನಮಯ್ಯ ಭವನದಲ್ಲಿ ನಡೆದ ಪರಿಶೀಲನಾ ಸಭೆಯ ನಂತರ ಮಾತನಾಡಿದ ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮ ರೆಡ್ಡಿ ಯಾತ್ರಾರ್ಥಿಗಳು ತಮ್ಮ ಹಳೆಯ ಟಿಕೆಟ್ ಸಂಖ್ಯೆಯನ್ನು ಹೊಸ ಸಾಫ್ಟ್ವೇರ್ನಲ್ಲಿ ನಮೂದಿಸುವ ಮೂಲಕ ತಿರುಮಲಕ್ಕೆ ತಮ್ಮ ತೀರ್ಥಯಾತ್ರೆಯ ದಿನಾಂಕವನ್ನು ಮರು ನಿಗದಿಪಡಿಸಬೇಕಾಗಿದೆ.
ಇನ್ನು ತಿರುಮಲದಲ್ಲಿ ಭಕ್ತರ ದಂಡು ಮುಂದುವರಿದಿದ್ದು, ಸೋಮವಾರ 17,531 ಭಕ್ತಾದಿಗಳು ತಿರುಮಲ ಶ್ರೀಗಳ ದರ್ಶನ ಪಡೆದು, ನಮನ ಸಲ್ಲಿಸಿದರು. ತಿರುಮಲ ತಿರುಪತಿ ದೇವಸ್ಥಾನದ ಪ್ರಕಾರ ಶ್ರೀವಾರಿ ಹುಂಡಿ ಆದಾಯ ನಿನ್ನೆ 1.49 ಕೋಟಿ ರೂ ಗಳಾಗಿತ್ತು. ಅಂತೆಯೇ ನಿನ್ನೆ 8,483 ಭಕ್ತಾದಿಗಳು ಸ್ವಾಮಿಗೆ ಮುಡಿ ಅರ್ಪಿಸಿ, ನಮನ ಸಲ್ಲಿಸಿದ್ದಾರೆ ಎಂದು ಟಿಟಿಡಿ ಮಾಹಿತಿ ನೀಡಿದೆ.
ಭಾರೀ ಮಳೆಯಿಂದಾಗಿ ತಿರುಮಲಕ್ಕೆ ತೆರಳುವ ಎರಡು ಯಾತ್ರಾರ್ಥಿ ಮಾರ್ಗಗಳ ಪೈಕಿ ಶ್ರೀವಾರಿ ಮೆಟ್ಟು ಮಾರ್ಗವು ತೀರಾ ಹದಗೆಟ್ಟಿದೆ. ಆದರೆ ಅಲಿಪಿರಿ ಮಾರ್ಗಕ್ಕೆ ಯಾವುದೇ ತೊಂದರೆಯಾಗಿಲ್ಲ.
ಶ್ರೀವಾರಿ ಮೆಟ್ಟು ದುರಸ್ತಿ ಕಾರ್ಯಕ್ಕೆ ಸಮಯ ಹಿಡಿಯುವ ಕಾರಣ ತಾತ್ಕಾಲಿಕವಾಗಿ ಆ ರಸ್ತೆಯನ್ನು ಮುಚ್ಚಲಾಗಿದೆ. ಯಾತ್ರಾರ್ಥಿಗಳು ಈಗ ಯಾವುದೇ ಭಯವಿಲ್ಲದೆ ತಿರುಮಲಕ್ಕೆ ಭೇಟಿ ನೀಡಬಹುದು, ಏಕೆಂದರೆ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಟಿಟಿಡಿ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದರು.
ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಿಸಿದ ತಿರುಪತಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ತಿರುಪತಿ ಸಮೀಪವಿರುವ ರಾಮಚಂದ್ರಪುರಂನಲ್ಲಿರುವ ರಾಯಲ ಚೇವೂರು ಅಣೆಕಟ್ಟೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು ಪ್ರವಾಹ ಭೀತಿ ಎದುರಾಗಿದೆ. ಸತತ ಮಳೆಯಿಂದಾಗಿ ಅಣೆಕಟ್ಟಿಗೆ ನೀರಿನ ಹರಿವು ಹೆಚ್ಚಾಗಿದೆ.
ಈಗ ಮಳೆ ನಿಂತಿದ್ದರೂ ಬಿರುಕುಗಳಿಂದ ನೀರು ಸೋರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. 'ಅಣೆಕಟ್ಟೆಯಲ್ಲಿ ಬಿರುಕು ಮೂಡಿವೆ, ಯಾವ ಸಮಯದಲ್ಲಾದರೂ ಪ್ರವಾಹ ಉಂಟಾಗಬಹುದು.
ಹಾಗಾಗಿ ಎಲ್ಲ ಅಮೂಲ್ಯ ಕಾಗದ ಪತ್ರಗಳು ಹಾಗೂ ಅಗತ್ಯ ವಸ್ತುಗಳೊಂದಿಗೆ ಎತ್ತರದ ಪ್ರದೇಶಗಳಿಗೆ ತೆರಳಬೇಕು' ಎಂದು ಸುತ್ತಮುತ್ತಲ ಗ್ರಾಮದ ಜನರಿಗೆ ಎಚ್ಚರಿಕೆಯ ಸಂದೇಶ ನೀಡಲಾಗಿದೆ.
ಭಾರಿ ಮಳೆಯಿಂದಾಗಿ ತಿರುಮಲ ಬೆಟ್ಟಗಳಿಂದ ಹರಿದು ಬರುತ್ತಿರುವ ನೀರಿನಿಂದ ಸ್ವರ್ಣಮುಖಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಎಲ್ಲೆಡೆ ಪ್ರವಾಹ ಸ್ಥಿತಿ ಉಂಟಾಗಿದೆ. ಪ್ರವಾಹ ಪರಿಸ್ಥಿತಿಯ ವೀಕ್ಷಣೆಗಾಗಿ ಶನಿವಾರ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ವೈಮಾನಿಕ ಸಮೀಕ್ಷೆ ಕೈಗೊಂಡಿದ್ದರು.
ತಿರುಪತಿ ಮಹಾ ಪ್ರವಾಹ : ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ವಿಶ್ವದ ಅತ್ಯಂತ ಸಿರಿವಂತ ದೇವರಾದ ತಿರುಪತಿ ತಿಮ್ಮಪ್ಪನಿಗೂ ಸಂಕಷ್ಟ ತಂದಿಟ್ಟಿದೆ.
ವಾಯುಭಾರ ಕುಸಿತದ ಪರಿಣಾಮ ಬುಧವಾರ ರಾತ್ರಿಯಿಂದೀಚೆಗೆ ತಿರುಮಲ, ತಿರುಪತಿ ಸೇರಿದಂತೆ ಚಿತ್ತೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಎಲ್ಲೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ದೇಗುಲ ನಗರದಲ್ಲಿ ಇಂಥ ಮಳೆ ಅನಾಹುತ ಘಟಿಸಿದ್ದು 1996 ಭೀಕರ ಪ್ರವಾಹದ ಬಳಿಕ ಇದೇ ಮೊದಲು ಎನ್ನಲಾಗುತ್ತಿದೆ.
Recommended Video