ವೈಕುಂಠ ಏಕಾದಶಿ; ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿಸುದ್ದಿ
ಅಮರಾವತಿ, ನವೆಂಬರ್ 29: ತಿರುಪತಿ ದೇವಾಲಯದ ಭಕ್ತರಿಗೆ ಆಡಳಿತ ಮಂಡಳಿ ಸಿಹಿಸುದ್ದಿ ನೀಡಿದೆ. ಇದೇ ಮೊದಲ ಬಾರಿಗೆ 10 ದಿನಗಳ ಕಾಲ ವೈಕುಂಠ ದ್ವಾರದ ಮೂಲಕ ಭಕ್ತರು ದೇವರ ದರ್ಶನವನ್ನು ಪಡೆಯಲು ಅವಕಾಶವನ್ನು ನೀಡಿದೆ.
ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿ (ಟಿಟಿಡಿ) ಅಧ್ಯಕ್ಷ ವೈ. ವಿ. ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಒಮ್ಮತದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಡಿಸೆಂಬರ್ 25ರಂದು ವೈಕುಂಠ ದ್ವಾರದ ಬಾಗಿಲು ತರೆಯಲಿದೆ.
ಪ್ರತಿವರ್ಷ ವೈಕುಂಠ ಏಕಾದಶಿ ಮತ್ತು ದ್ವಾದಶಿಯಂದು ಮಾತ್ರ ತಿರುಪತಿಯಲ್ಲಿ ವೈಕುಂಠ ದ್ವಾರದ ಮೂಲಕ ದೇವರ ದರ್ಶನ ಪಡೆಯಲು ವ್ಯವಸ್ಥೆ ಇರುತ್ತದೆ. ಹೆಚ್ಚುದಿನ ಭಕ್ತರಿಗೆ ಪ್ರವೇಶ ನೀಡಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇತ್ತು.

ಈ ಬಾರಿ ಡಿಸೆಂಬರ್ 25 ರಿಂದ 2021ರ ಜನವರಿ 3ರ ತನಕ ವೈಕುಂಠ ದ್ವಾರ ತೆರೆದಿರಲಿದೆ. ಭಕ್ತರು ಈ ದ್ವಾರದ ಮೂಲಕ ತೆರಳಿ ದೇವರ ದರ್ಶನ ಪಡೆಯಬಹುದಾಗಿದೆ. ವೈಕುಂಠ ಏಕಾದಶಿ ದಿನ ವಿವಿಧ ರಾಜ್ಯಗಳ ಸಾವಿರಾರು ಭಕ್ತರು ತಿರುಪತಿಗೆ ಆಗಮಿಸುತ್ತಾರೆ.
ತಮಿಳುನಾಡಿನಲ್ಲಿರುವ ಶ್ರೀರಂಗಂ ದೇವಾಲಯದಲ್ಲಿ 10 ದಿನಗಳ ಕಾಲ ವೈಕುಂಠ ದ್ವಾರ ತೆರೆದಿರುತ್ತದೆ. ಇದೇ ಮಾದರಿಯಲ್ಲಿ ತಿರುಪತಿಯಲ್ಲಿ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆ ಇತ್ತು. ಈ ವರ್ಷ ಅದು ಈಡೇರಿದೆ.
ಪುಷ್ಯ ಮಾಸದ ಶುಕ್ಲ ಪಕ್ಷದ ಏಕಾದಶಿ ವೈಕುಂಠ ಏಕಾದಶಿ ಎಂದೇ ಖ್ಯಾತಿ ಪಡೆದಿದೆ. ಈ ಶುಭದಿನದಲ್ಲಿ ವೆಂಕಟೇಶ್ವರ ಸ್ವಾಮಿ ದೇವಾಲಯಗಳಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಶ್ರೀಮನ್ನಾರಾಯಣ ಮೂರುಕೋಟಿ ದೇವಾನುದೇವತೆಗಳಿಗೆ ದರ್ಶನ ನೀಡುತ್ತಾನೆ ಎಂಬುದು ಭಕ್ತರ ನಂಬಿಕೆ.
ಈ ಶುಭದಿನದಂದು ದೇವಾಲಯಗಳಲ್ಲಿ ವೈಕುಂಠ ದ್ವಾರವನ್ನು ನಿರ್ಮಿಸಿ ಭಕ್ತರು ದರ್ಶನ ಪಡೆಯಲು ಅವಕಾಶ ನೀಡಲಾಗುತ್ತದೆ. ವೈಕುಂಠ ಏಕಾದಶಿ ದಿನ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆಯೂ ಇದೆ.
ಕೋವಿಡ್ ಸಂದರ್ಭದಲ್ಲಿ ತಿರುಪತಿಯಲ್ಲಿ ದೇವರ ದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು. ಕಳೆದ ಎರಡು ತಿಂಗಳಿನಿಂದ ಪುನಃ ದೇವಾಲಯದ ಬಾಗಿಲು ತೆರೆಯಲಾಗಿದೆ. ಸಾವಿರಾರು ಭಕ್ತರು ದೇವಾಲಯಕ್ಕೆ ಪುನಃ ಆಗಮಿಸುತ್ತಿದ್ದಾರೆ. ವಾರಂತ್ಯ, ಸರ್ಕಾರಿ ರಜೆ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ.












Click it and Unblock the Notifications