ಪ್ರತಿಭಟನಾಕಾರರನ್ನು ನಾಯಿಗೆ ಹೋಲಿಸಿದ ಸಿಎಂ; ತೆಲಂಗಾಣದಲ್ಲಿ ಭಾರೀ ವಿರೋಧ
ತೆಲಂಗಾಣ, ಫೆಬ್ರುವರಿ 11: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪ್ರತಿಭಟನಾನಿರತ ಗುಂಪನ್ನು ನಾಯಿಗೆ ಹೋಲಿಸಿರುವ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಮೇಲೆ ವಿರೋಧ ಪಕ್ಷಗಳು ಭಾರೀ ಆಕ್ರೋಶ ವ್ಯಕ್ತಪಡಿಸಿವೆ. ಈ ಬಗ್ಗೆ ಸಿಎಂ ಕ್ಷಮೆ ಕೇಳಲೇಬೇಕೆಂದು ಪಟ್ಟು ಹಿಡಿದಿವೆ.
ನಲಗೊಂದದ ನಾಗಾರ್ಜುನಾ ಸಾಗರದಲ್ಲಿ ಸರ್ಕಾರದ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ ನಂತರ ಸಾರ್ವಜನಿಕರನ್ನುದ್ದೇಶಿಸಿ ಸಿಎಂ ಚಂದ್ರಶೇಖರ್ ರಾವ್ ಮಾತನಾಡುತ್ತಿದ್ದರು. ಈ ಸಂದರ್ಭ, ಮಹಿಳೆಯರನ್ನು ಒಳಗೊಂಡಂತೆ ಗುಂಪೊಂದು ಕೈಯಲ್ಲಿ ಕಾಗದ ಹಿಡಿದು ಸಿಎಂ ತಮ್ಮ ಮಾತು ಕೇಳಬೇಕೆಂದು ಪ್ರತಿಭಟನೆ ನಡೆಸಲು ಆರಂಭಿಸಿತ್ತು. ಆಗ ತಾಳ್ಮೆ ಕಳೆದುಕೊಂಡ ಸಿಎಂ ಪ್ರತಿಭಟನಾಕಾರರ ಮೇಲೆ ಆಕ್ರೋಶದಿಂದ ಮಾತನಾಡಿದ್ದಾರೆ. ಮುಂದೆ ಓದಿ...

ಕೋಪದಿಂದ ಹರಿಹಾಯ್ದ ಕೆಸಿಆರ್
ಸಭೆಯಲ್ಲಿ ಗದ್ದಲ ಉಂಟಾಗುತ್ತಿದ್ದಂತೆ, ಪೊಲೀಸರನ್ನು ಕರೆಸಿ, ಅವರಿಂದ ಪತ್ರಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ, "ನೀವು ನೀಡಬೇಕಾದ ಪತ್ರವನ್ನು ನನಗೆ ನೀಡಿದ್ದೀರಿ. ಇಲ್ಲಿಂದ ತಕ್ಷಣವೇ ಹೊರಡಿ. ಇಲ್ಲೇ ಇರಬೇಕೆಂದರೆ ಗಲಾಟೆ ಮಾಡದೇ ಇರಿ. ನಿಮ್ಮ ಮೂರ್ಖತನದಿಂದ ಯಾರಿಗೂ ತೊಂದರೆಯಾಗದಿರಲಿ. ಅನವಶ್ಯಕವಾಗಿ ಹೊಡೆಸಿಕೊಳ್ಳಬೇಡಿ. ನಿಮ್ಮಂಥ ಸಾಕಷ್ಟು ಜನರನ್ನು ನೋಡಿದ್ದೇನೆ. ನಿಮ್ಮಂಥ ನಾಯಿಗಳು ಸಾಕಷ್ಟು ಇವೆ. ಇಲ್ಲಿಂದ ಮೊದಲು ಹೋಗಿ" ಎಂದು ಆಕ್ರೋಶದಿಂದ ನುಡಿದಿದ್ದರು.

ಕ್ಷಮೆ ಯಾಚಿಸುವಂತೆ ಪಟ್ಟು ಹಿಡಿದಿರುವ ಕಾಂಗ್ರೆಸ್
ಕೆಸಿಆರ್ ಹೇಳಿಕೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಮಣಿಕ್ಕಂ ಟ್ಯಾಗೋರ್, ಕೆಸಿಆರ್ ಕ್ಷಮೆ ಯಾಚಿಸಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

"ಅಲ್ಲಿ ನಿಂತಿದ್ದವರಿಂದಲೇ ನೀವಿಲ್ಲಿ ಕೂತಿರುವುದು"
"ಪ್ರತಿಭಟನೆ ನಡೆಸುತ್ತಿದ್ದವರಲ್ಲಿ ಮಹಿಳೆಯರೂ ಇದ್ದರು. ಮಹಿಳೆಯರನ್ನು ತೆಲಂಗಾಣ ಸಿಎಂ ನಾಯಿ ಎಂದು ಕರೆದಿದ್ದಾರೆ. ಇದು ಪ್ರಜಾಪ್ರಭುತ್ವ ಎಂಬುದನ್ನು ಮರೆಯಬೇಡಿ. ಅಲ್ಲಿ ನಿಂತಿದ್ದ ಮಹಿಳೆಯರಿಂದಲೇ ನೀವು ಈ ಸ್ಥಾನದಲ್ಲಿ ಕುಳಿತಿರುವುದು ಎಂಬುದನ್ನು ಮರೆಯಬೇಡಿ. ಅವರೆಲ್ಲಾ ನಮಗೆ ಬಾಸ್ ಗಳು, ಮೊದಲು ಅವರ ಕ್ಷಮೆ ಕೇಳಿ" ಎಂದು ಆಗ್ರಹಿಸಿದ್ದಾರೆ.

"ನಮ್ಮ ತಾಳ್ಮೆಗೂ ಒಂದು ಮಿತಿ ಇದೆ"
"ಈ ರೀತಿ ಕೆಲಸಗಳನ್ನು ಮಾಡಬೇಡಿ. ನಿಮಗೆ ಏನಾದರೂ ಹೇಳಲು ಇದ್ದರೆ, ನೀವು ಕೂಡ ಸಾರ್ವಜನಿಕ ಸಭೆ ನಡೆಸಿ. ಜನರು ನಿರ್ಧರಿಸುತ್ತಾರೆ. ಬೇರೆ ಪಕ್ಷಗಳ ಸಭೆಗೆ ಬಂದು ಅಲ್ಲಿ ಗಲಭೆ ಮಾಡುವುದು ಒಳ್ಳೆ ಸಂಸ್ಕೃತಿಯಲ್ಲ. ಯಾರೂ ಇದನ್ನು ಶ್ಲಾಘಿಸುವುದಿಲ್ಲ. ಮುಂದಿನ ದಿನಗಳಲ್ಲಿ ಜನರೇ ನಿಮಗೆ ಬುದ್ಧಿ ಕಲಿಸುತ್ತಾರೆ. ನಾನು ಎಚ್ಚರಿಕೆ ನೀಡುತ್ತಿದ್ದೇನೆ. ನಮ್ಮ ತಾಳ್ಮೆಗೂ ಒಂದು ಮಿತಿಯಿದೆ. ಅದನ್ನು ನೀವು ದಾಟಿದರೆ, ನಮಗೆ ಏನು ಮಾಡಬೇಕೆಂಬುದು ಗೊತ್ತಿದೆ" ಎಂದು ಹೇಳಿದರು.












Click it and Unblock the Notifications