ಗುಂಡು ತಗುಲಿದ್ದರೂ ಆಂಬುಲೆನ್ಸ್ನಲ್ಲಿ ಬಂದು ನಾಮಪತ್ರ ಸಲ್ಲಿಸಿದ ಟಿಡಿಪಿ ಅಭ್ಯರ್ಥಿ
ಕರ್ನೂಲು, ಮಾರ್ಚ್ 23: ಆಂಬುಲೆನ್ಸ್ನಲ್ಲಿ ಬಂದು, ಸ್ಟ್ರೆಚರ್ನಲ್ಲಿ ಕಚೇರಿ ಪ್ರವೇಶಿಸಿ ಅಭ್ಯರ್ಥಿಯೊಬ್ಬ ನಾಮಪತ್ರ ಸಲ್ಲಿಸಿರುವ ಘಟನೆ ನೆರೆಯ ಆಂಧ್ರ ಪ್ರದೇಶದ ಕರ್ನೂಲಿನಲ್ಲಿ ನಡೆದಿದೆ.
ಕರ್ನೂಲು ಜಿಲ್ಲೆಯ ಮಂತ್ರಾಲಯಂ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಟಿಡಿಪಿ ಅಭ್ಯರ್ಥಿ ತಿಕ್ಕಾ ರೆಡ್ಡಿ ಅವರು ಇಂದು ಬೆಳಿಗ್ಗೆ ನಾಮಪತ್ರ ಸಲ್ಲಿಸಲು ಆಂಬುಲೆನ್ಸ್ನಲ್ಲಿ ಬಂದರು, ನಡೆಯಲು ಸಾಧ್ಯವಾಗದಿದ್ದ ಅವರು ಸ್ಟ್ರೆಚರ್ನಲ್ಲಿಯೇ ಚುನಾವಣಾಧಿಕಾರಿಗಳ ಕಚೇರಿ ಪ್ರವೇಶಿಸಿ ನಾಮಪತ್ರ ಸಲ್ಲಿಸಿದರು.
ಕಳೆದ ವಾರ ಚುನಾವಣಾ ಪ್ರಚಾರದ ವೇಳೆ ತಿಕ್ಕಾ ರೆಡ್ಡಿ ಅವರ ಕಾಲಿಗೆ ಗುಂಡು ತಗುಲಿರುವ ಕಾರಣ ಅವರು ಗಾಯಗೊಂಡಿದ್ದಾರೆ. ಅವರಿಗೆ ನಡೆಯಲು ಆಗುತ್ತಿಲ್ಲ, ಚಿಕಿತ್ಸೆ ಇನ್ನೂ ನಡೆಯುತ್ತಿದೆ ಹಾಗಾಗಿ ಅವರು ಸ್ಟ್ರೆಚರ್ ನಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದಾರೆ.

ಕಳೆದ ವಾರ ಅವರು ಕಾಗಲ ಎಂಬ ಹಳ್ಳಿಯಲ್ಲಿ ಪ್ರಚಾರ ನಡೆಸಬೇಕಾದರೆ ವೈಎಸ್ಆರ್ ಕಾಂಗ್ರೆಸ್ನ ಮುಖಂಡ ಮತ್ತು ಆತನ ಮಗ ತಿಕ್ಕಾ ರೆಡ್ಡಿ ಅವರನ್ನು ತಡೆದಿದ್ದಾರೆ. ಆ ಸಂದರ್ಭ ಬಿಗುವಿನ ವಾತಾವರಣ ಏರ್ಪಟ್ಟು ಗಲಾಟೆ ನಡೆದಿದೆ. ಆ ಸಂದರ್ಭ ತಿಕ್ಕಾ ರೆಡ್ಡಿ ಅವರ ಗನ್ ಮ್ಯಾನ್ ತಿಕ್ಕಾ ರೆಡ್ಡಿ ಅವರನ್ನು ಕಾಪಾಡಲೆಂದು ಗಾಳಿಯಲ್ಲಿ ಗುಂಡು ಹಾರಿಸಲು ಯತ್ನಿಸಿದಾಗ ಅದು ಅಚಾನಕ್ ಆಗಿ ತಿಕ್ಕಾ ರೆಡ್ಡಿ ಅವರ ಕಾಲಿಗೆ ತಗುಲಿದೆ.
ಆಂಧ್ರ ಪ್ರದೇಶದ 175 ವಿಧಾನಸಭೆ ಮತ್ತು 25 ಲೋಕಸಭೆ ಕ್ಷೇತ್ರಗಳಿಗೆ ಒಟ್ಟಿಗೆ ಚುನಾವಣೆ ನಡೆಯುತ್ತಿದ್ದು, ಮತದಾನವು ಏಪ್ರಿಲ್ 11 ರಂದು ನಡೆಯಲಿದೆ. ಫಲಿತಾಂಶವು ಮೇ 23ರಂದು ಹೊರಬೀಳಲಿದೆ.












Click it and Unblock the Notifications