ಬಿಜೆಪಿ ವಿರುದ್ಧದ ಟೋಳಿ ಗಟ್ಟಿಗೊಳಿಸಲು ದೆಹಲಿಗೆ ಹೊಂಟರು ನಾಯ್ಡು
ಅಮರಾವತಿ, ಜನವರಿ 7: ಆಂಧ್ರಪ್ರದೇಶದ ಮುಖ್ಯಮಂತ್ರಿ ಮಂಗಳವಾರದಂದು ದೆಹಲಿಗೆ ತೆರಳುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಮಹಾಘಟಬಂಧನ್ ಅನ್ನು ಬಲಪಡಿಸುವ ನಿಟ್ಟಿನಲ್ಲಿ ಇನ್ನಷ್ಟು ಬಲವಾದ ಪ್ರಯತ್ನ ಹಾಕಲಿದ್ದಾರೆ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಜತೆಗೆ ಸೇರದೆ ಸಮಾಜವಾದಿಪಕ್ಷ ಹಾಗೂ ಬಹುಜನ ಸಮಾಜವಾದ ಪಕ್ಷ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿವೆ.
"ಬಿಜೆಪಿ ವಿರೋಧಿ ವೇದಿಕೆಯನ್ನು ಸಿದ್ಧಪಡಿಸುವ ಉದ್ದೇಶದಿಂದ ಪ್ರಮುಖ ಪ್ರಾದೇಶಿಕ ಪಕ್ಷಗಳ ನಾಯಕರನ್ನು ಭೇಟಿ ಮಾಡಲು ನಾಳೆ ದೆಹಲಿಗೆ ತೆರಳುತ್ತಿದ್ದೇನೆ" ಎಂದು ತೆಲುಗು ದೇಶಂ ಪಕ್ಷದ ಅಧ್ಯಕ್ಷರೂ ಆಗಿರುವ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರನ್ನು ಭೇಟಿ ಆಗ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ನಾಯ್ಡು, ಅವರಿಗೆ ಸಮಯ ಇದೆಯೇ ಎಂಬುದನ್ನು ನೋಡಿಕೊಂಡು, ಸಾಧ್ಯವಾದರೆ ಭೇಟಿ ಆಗುತ್ತೇನೆ ಎಂದು ಉತ್ತರಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ, ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತಿತರರನ್ನು ಚಂದ್ರಬಾಬು ನಾಯ್ಡು ದೆಹಲಿಯಲ್ಲಿ ಭೇಟಿ ಆಗಲಿದ್ದಾರೆ.
ಆಂಧ್ರದ ಬಿಜೆಪಿ ನಾಯಕರ ಜತೆಗೆ ಈಚೆಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಬಾಬು ನಾಯ್ಡು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಪ್ರಧಾನಿ ಆಗಬೇಕು ಎಂಬ ಗುರಿ ಇರಿಸಿಕೊಂಡಿರುವ ನಾಯ್ಡು ತಮ್ಮ ರಾಜ್ಯದಲ್ಲಿ ಆಡಳಿತ ನಡೆಸಲು ವಿಫಲರಾಗಿದ್ದಾರೆ. ತಮ್ಮ ಮಗನ ಅಭ್ಯುದಯಕ್ಕಾಗಿ ಆಂಧ್ರವನ್ನು ಭ್ರಷ್ಟ ಆಡಳಿತದ ಕತ್ತಲೆಗೆ ದೂಡಿದ್ದಾರೆ ಎಂದು ಆರೋಪಿಸಿದ್ದರು.
ಇದೀಗ ಚಂದ್ರಬಾಬು ನಾಯ್ಡು ಪ್ರಯತ್ನಿಸುತ್ತಿರುವ ಮಹಾಘಟಬಂಧನ್ ಕುಟುಂಬಗಳು ಆಡಳಿತ ನಡೆಸುತ್ತಿರುವ ಪಕ್ಷಗಳ ಮೈತ್ರಿಕೂಟ ಎಂದು ವ್ಯಂಗ್ಯವಾಡಿದ್ದರು.












Click it and Unblock the Notifications