ಚಿರಂಜೀವಿಗಿಂತ ಹೀನಾಯ ಸ್ಥಿತಿ ತಲುಪಿದ ಪವನ್ ಕಲ್ಯಾಣ್
ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಜನಾಸೇನಾ ಪಕ್ಷ ಸ್ಥಾಪಿಸಿದಾಗ ಅಭಿಮಾನಿಗಳಲ್ಲಿ ಸಂಭ್ರಮವೋ ಸಂಭ್ರಮ. ಪವನ್ ಕಲ್ಯಾಣ್ ರಾಜ್ಯಕ್ಕೆ ಮುಖ್ಯಮಂತ್ರಿ ಆಗ್ತಾರೆ, ಆಂಧ್ರ ರಾಜಕಾರಣದಲ್ಲಿ ಏನೋ ಬದಲಾವಣೆ ಆಗುತ್ತೆ ಎಂಬ ಬೆಟ್ಟದಷ್ಟು ನಿರೀಕ್ಷೆಗಳು.
ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು
ತಮ್ಮ ರಾಜಕೀಯ ಜೀವನಕ್ಕಾಗಿ ಸಿನಿಮಾಗಳನ್ನ ಮಾಡೋದು ನಿಲ್ಲಿಸಿದರು. ಜನಯಾತ್ರೆ ಆರಂಭಿಸಿದರು. ಜನರ ಬಳಿ ಬಂದರು. ಅವರ ಕಷ್ಟಗಳನ್ನ ಆಲಿಸಿದರು. ರಾಜ್ಯಾದ್ಯಂತ ಪ್ರವಾಸ ಮಾಡಿದರು. ಸರ್ಕಾರದ ವಿಫಲಗಳನ್ನ ಎತ್ತಿ ತೋರಿಸಿದರು. ಜನರಲ್ಲಿ ಒಂದು ಆಶಾಕಿರಣ ಮೂಡಿಸಿದರು.
ಚಿರಂಜೀವಿ-ಪವನ್ ಕಲ್ಯಾಣ್ ಅಭಿಮಾನಿಗಳು ಕೇಳಲೇಬೇಕಾದ ವಿಷ್ಯವಿದು.!
ಪವನ್ ಕಲ್ಯಾಣ್ ಹೋದಲ್ಲಿ ಬಂದಲ್ಲಿ ಎಲ್ಲೇ ನೋಡಿದ್ರು ಜನವೋ ಜನ. ಇದೆಲ್ಲ ನೋಡಿದ್ಮೇಲೆ ಈ ಬಾರಿ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಜನಾಸೇನಾ ಪಕ್ಷ ಏನೋ ಮಾಡುತ್ತೆ. ಪವನ್ ಕಲ್ಯಾಣ್ ಇತಿಹಾಸ ನಿರ್ಮಿಸುತ್ತಾರೆ ಎಂಬ ಕುತೂಹಲದಿಂದ ನೋಡುವಂತಾಗಿತ್ತು. ಆದ್ರೆ, ಅಲ್ಲಿ ಆಗಿದ್ದೇ ಬೇರೆ. ಮೆಗಾಸ್ಟಾರ್ ಚಿರಂಜೀವಿಗಿಂತ ಶೋಚನಿಯ ಪರಿಸ್ಥಿತಿಗೆ ಪವನ್ ಕಲ್ಯಾಣ್ ತಲುಪಿದ್ದಾರೆ. ಮುಂದೆ ಓದಿ.....
ಒಂದು ಸೀಟು ಗೆದ್ದಿದ್ದೆ ಸಾಧನೆ
175 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಸಾರಥ್ಯದ ಜನಾಸೇನಾ ಪಕ್ಷದ ಅಭ್ಯರ್ಥಿಗಳು, 140 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ಉಳಿದ 35 ಕ್ಷೇತ್ರಗಳನ್ನ ತಮ್ಮ ಮೈತ್ರಿ ಪಕ್ಷ ಬಿಎಸ್ ಪಿ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದರು. ದುರಂತ ಅಂದ್ರೆ ಕೇವಲ ಒಂದು ಸೀಟು ಮಾತ್ರ ಜನಾಸೇನಾ ಪಕ್ಷದ ಪಾಲಾಗಿದೆ. ಇದು ಪವನ್ ಕಲ್ಯಾಣ್ ಗೆ ಭಾರಿ ಮುಖಭಂಗ ಉಂಟು ಮಾಡಿದೆ.
ಎರಡೂ ಕ್ಷೇತ್ರದಲ್ಲೂ ಸೋಲು
ಜನಾಸೇನಾ ಪಕ್ಷದ ಇತರೆ ಅಭ್ಯರ್ಥಿಗಳ ಸೋಲನ್ನ ಸಹಿಸಿಕೊಳ್ಳಬಹುದು. ಆದರೆ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಅವರ ಸೋಲನ್ನ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಭೀಮಾವರಂ ಮತ್ತು ಗಾಜುವಾಕ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಪವರ್ ಸ್ಟಾರ್ ಗೆ ಎರಡೂ ಕ್ಷೇತ್ರದಲ್ಲೂ ಗೆಲುವು ಸಿಗಲಿಲ್ಲ.
ಅಣ್ಣ-ತಮ್ಮನ ಮಹಾಸಂಗಮದಲ್ಲಿ ಬರಲಿದೆ 'ಬಿಗ್' ಬಜೆಟ್ ಸಿನಿಮಾ.!
ಅಂದು ಚಿರಂಜೀವಿ ಸ್ಥಿತಿ ಕೂಡ ಹಾಗೆ ಇತ್ತು
2009ರಲ್ಲಿ ಆಂಧ್ರಪ್ರದೇಶದ (ತೆಲಂಗಾಣ ಆಗಿರಲಿಲ್ಲ) ಒಟ್ಟು 295 ಕ್ಷೇತ್ರಗಳಿಗೆ ವಿಧಾನಸಭೆ ಚುನಾವಣೆ ನಡೆದಿತ್ತು. ಈ ಎಲೆಕ್ಷನ್ ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಸ್ಥಾಪಿಸಿದ್ದ ಪ್ರಜಾರಾಜ್ಯಂ ಪಕ್ಷ ಸ್ಪರ್ಧೆ ಮಾಡಿತ್ತು. ಭಾರಿ ಭರವಸೆಗಳೊಂದಿಗೆ ಅಖಾಡಕ್ಕೆ ಧುಮುಕಿದ್ದ ಚಿರಂಜೀವಿ ಬಹುಮತ ಪಡೆದು ಮುಖ್ಯಮಂತ್ರಿ ಆಗ್ತಾರೆ ಎಂದೇ ಹೇಳಲಾಗುತ್ತಿತ್ತು. ಆದ್ರೆ, ಅಂತಿಮವಾಗಿ 18 ಸೀಟು ಗೆಲ್ಲುವಲ್ಲಿ ಮಾತ್ರ ಚಿರಂಜೀವಿ ಯಶಸ್ವಿಯಾಗಿದ್ದರು.
ಒಂದರಲ್ಲಿ ಗೆದ್ದು, ಇನ್ನೊಂದರಲ್ಲಿ ಸೋಲು
ಅಂದು ಕೂಡ ಚಿರಂಜೀವಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ತಿರುಪತಿ ಮತ್ತು ಪಾಲಕೊಲ್ಲು ಕ್ಷೇತ್ರದಲ್ಲಿ ಚುನಾವಣೆ ಎದುರಿಸಿದ್ದ ಚಿರು, ತಿರುಪತಿಯಿಂದ ಗೆದ್ದು ಪಾಲಕೊಲ್ಲು ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಈಗ ಪವನ್ ಕಲ್ಯಾಣ್ ಎರಡೂ ಕಡೆ ಸೋತು, ಚಿರಂಜೀವಿಗಿಂತ ಶೋಚನೀಯ ಸ್ಥಿತಿ ತಲುಪಿದ್ದಾರೆ.
ಮುಂದಿನ ಹಾದಿ ಏನು?
ಈ ಕಡೆ ಎಂ.ಎಲ್.ಎ ಆಗಲಿಲ್ಲ. ಪಕ್ಷಕ್ಕೂ ನಿರೀಕ್ಷೆ ಸೀಟು ಸಿಗಲಿಲ್ಲ. ವಿರೋಧ ಪಕ್ಷದಲ್ಲಿ ಕೂರಲು ಅವಕಾಶ ಸಿಕ್ಕಿಲ್ಲ. ಗೌರವಕ್ಕಾದರೂ ಇಪ್ಪತ್ತು, ಮೂವತ್ತು ಸೀಟು ಸಿಕ್ಕಿದ್ದರೇ ಮುಂದಿನ ಚುನಾವಣೆಯಲ್ಲಿ ಯೋಚನೆ ಮಾಡಬಹುದಿತ್ತು. ಬಟ್, ಒಂದೇ ಒಂದು ಸೀಟು ಇಟ್ಕೊಂಡು ಏನು ಮಾಡೋದು ಎಂಬ ಯೋಚನೆ ಪವನ್ ಎದುರಿನಲ್ಲಿದೆ.
ಚಿರಂಜೀವಿಯಂತೆ ಮಾಡ್ತಾರಾ ಪವನ್?
'ಪ್ರಜಾರಾಜ್ಯಂ' ಕಟ್ಟಿ 18 ಸೀಟು ಗೆದ್ದಿದ್ದು ಚಿರಂಜೀವಿ 30 ತಿಂಗಳು ನಂತರ ಕಾಂಗ್ರೆಸ್ ಪಕ್ಷದ ಜೊತೆ ತಮ್ಮ ಪಕ್ಷವನ್ನ ವಿಲೀನ ಮಾಡಿಕೊಂಡಿದ್ದರು. ನಂತರ ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯ ಸಭೆ ಸದಸ್ಯನಾಗಿ ಆಯ್ಕೆಯಾಗಿ ಕೇಂದ್ರ ಸಚಿವರು ಆಗಿದ್ದರು. ಈಗ ಪವನ್ ಕಲ್ಯಾಣ್ ಏನು ಮಾಡುತ್ತಾರೆ? ಅಣ್ಣನ ರೀತಿ ರಾಷ್ಟ್ರೀಯ ಪಕ್ಷದ ಜೊತೆ ಕೈ ಜೋಡಿಸುತ್ತಾರಾ ಅಥವಾ ಮುಂದಿನ ಚುನಾವಣೆವರೆಗೂ ಕಾದುನೋಡುವ ತಂತ್ರ ಮಾಡ್ತಾರಾ?