ವಿಶಾಖಪಟ್ಟಣಂನಲ್ಲಿ ವಿಷಾನಿಲ ಸೋರಿಕೆ: 8 ಬಲಿ, 5000ಕ್ಕೂ ಅಧಿಕ ಮಂದಿ ಅಸ್ವಸ್ಥ
ವೈಝಾಗ್, ಮೇ 7: ಅತ್ತ ಕೊರೊನಾ ವೈರಸ್ ನಿಂದ ಹಲವರು ಬಳಲುತ್ತಿದ್ದರೆ, ಇತ್ತ ವಿಶಾಖಪಟ್ಟಣಂನಲ್ಲಿ ಇಂದು ಮುಂಜಾನೆ ರಾಸಾಯನಿಕ ಸ್ಥಾವರದಿಂದ ವಿಷಾನಿಲ ಸೋರಿಕೆಯಾಗಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದು, 5000ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ.
ವರದಿಗಳ ಪ್ರಕಾರ, ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಗೋಪಾಲಪಟ್ಟಣಂ ಬಳಿ ಇರುವ ಆರ್.ಆರ್ ವೆಂಕಟಪುರಂ ನಲ್ಲಿನ ಎಲ್.ಜಿ ಪಾಲಿಮರ್ಸ್ ಇಂಡಸ್ಟ್ರಿಯಲ್ಲಿ ವಿಷಾನಿಲ ಸೋರಿಕೆಯಾಗಿದೆ. ಇದರಿಂದ 3 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಇರುವ ಸ್ಥಳೀಯರು ಆತಂಕಗೊಂಡಿದ್ದಾರೆ.

ವಿಷಾನಿಲ ಸೋರಿಕೆಯಾದ ಬೆನ್ನಲ್ಲೇ ರಸ್ತೆಯಲ್ಲೇ ಹಲವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದಾರೆ. ಕೆಲವರಿಗೆ ಉಸಿರಾಟದ ಸಮಸ್ಯೆಯಾಗಿದ್ದರೆ, ಇನ್ನೂ ಕೆಲ ಜನರಿಗೆ ದೇಹದ ಮೇಲೆ ದದ್ದುಗಳು ಎದ್ದಿವೆ. ಸದ್ಯ ಸ್ಥಳಕ್ಕೆ ಧಾವಿಸಿರುವ ಪೊಲೀಸರು, ಅಲ್ಲಿರುವ ಜನರನ್ನು ಸ್ಥಳಾಂತರಿಸಲು ಪ್ರಾರಂಭಿಸಿದ್ದಾರೆ.

ವೈಝಾಗ್ ಜಿಲ್ಲಾಧಿಕಾರಿ ವಿ.ವಿನಯ್ ಚಂದ್ ಕೂಡ ಸ್ಥಳಕ್ಕೆ ಧಾವಿಸಿ, ''ಎರಡು ಗಂಟೆಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗುವುದು. ಉಸಿರಾಟದ ತೊಂದರೆ ಎದುರಿಸುತ್ತಿರುವ ಜನರಿಗೆ ಆಕ್ಸಿಜನ್ ನೀಡಲಾಗುವುದು'' ಎಂದು ತಿಳಿಸಿದರು.
ಈ ಪ್ರದೇಶದಲ್ಲಿ ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಕೂಡ ಸ್ಥಳಕ್ಕೆ ಧಾವಿಸುತ್ತಿದ್ದಾರೆ.
ವಿಷಾನಿಲ ಸೋರಿಕೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಅಂದ್ಹಾಗೆ, ಪಾಲಿಸ್ಟೈರೀನ್ ಮತ್ತು ಕೋ-ಪಾಲಿಮರ್ಸ್ ತಯಾರಿಸಲು ವೈಝಾಗ್ ನಲ್ಲಿ ಎಲ್.ಜಿ.ಪಾಲಿಮರ್ಸ್ ಇಂಡಸ್ಟ್ರಿ 1961 ರಲ್ಲಿ 'ಹಿಂದೂಸ್ತಾನ್ ಪಾಲಿಮರ್' ಎಂದು ಸ್ಥಾಪಿಸಲಾಯಿತು. ಇದನ್ನು 1978ರಲ್ಲಿ ಯು.ಬಿ ಗ್ರೂಪ್ ನ ಮೆಕ್ ಡೋವೆಲ್ ಆಂಡ್ ಕಂಪನಿ ಲಿಮಿಟೆಡ್ ನೊಂದಿಗೆ ವಿಲೀನಗೊಳಿಸಲಾಯಿತು.












Click it and Unblock the Notifications