ಮೌಢ್ಯದ ಪರಮಾವಧಿ: ಮೋಕ್ಷ ಪ್ರಾಪ್ತಿಗಾಗಿ ತಿರುಪತಿಯಲ್ಲಿ ಭಕ್ತ ಮಾಡಿದ್ದೇನು?
ಅಮರಾವತಿ, ಡಿ 14: ಹಿಂದೂಗಳ ಪವಿತ್ರ ಕ್ಷೇತ್ರ ತಿರುಮಲದಲ್ಲಿ ಶುಕ್ರವಾರ (ಡಿ 13) ಮುಂಜಾನೆ, ಭಕ್ತನೊಬ್ಬ ವ್ಯಾನಿನ ಚಕ್ರದಡಿಗೆ ಧುಮುಕಿ ಪ್ರಾಣ ಕಳೆದುಕೊಂಡಿದ್ದಾನೆ.
ಈತ, ವ್ಯಾನಿನ ಕೆಳಗೆ ಧುಮುಕುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಿರುಪತಿ - ತಿರುಮಲದಲ್ಲಿ ಸಾವು ಸಂಭವಿಸಿದರೆ, ಮೋಕ್ಷ ಸಿಗುತ್ತದೆ ಎನ್ನುವ ಭಾವನೆಯಿಂದ, ತಿರುಮಲಕ್ಕೆ ಹಾಲು ಸರಬರಾಜು ಮಾಡುತ್ತಿದ್ದ ವ್ಯಾನ್ ಕೆಳಗೆ ಬಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದೇವಸ್ಥಾನದ ಮಡಬೀದಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದರಿಂದ, ದೇವಾಲಯವನ್ನು ಕೆಲವು ಕಾಲ ಬಂದ್ ಮಾಡಲಾಗಿತ್ತು. ದೇವಸ್ಥಾನವನ್ನು ಪುಣ್ಯಾರ್ಚನೆಯೊಂದಿಗೆ ಶುದ್ದೀಕರಣಗೊಳಿಸಿದ ನಂತರ, ಮತ್ತೆ ಬಾಗಿಲನ್ನು ತೆರೆಯಲಾಯಿತು.

"ತಿರುಮಲದಲ್ಲಿ ಸಾವು ಸಂಭವಿಸಿದರೆ ವೈಕುಂಠ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಕೆಲವರಲ್ಲಿದೆ. ಅದು ಸರಿಯಲ್ಲ. ಭಕ್ತರು ಮೂಢನಂಬಿಕೆಯಿಂದ ದೂರವಿರಬೇಕು" ಎಂದು ಟಿಟಿಡಿ ಆಡಳಿತ ಮಂಡಳಿ ಹೇಳಿದೆ.
ಭಕ್ತ ವ್ಯಾನಿನ ಕೆಳಗೆ ಧುಮುಕುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಟಿಟಿಡಿ ಇದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ಟಿಟಿಡಿಗೆ ಹಾಲು ಸರಬರಾಜು ಮಾಡುವ ವ್ಯಾನಿನ ಹಿಂದಿನ ಚಕ್ರಕ್ಕೆ ಭಕ್ತ ಧುಮುಕುವ ದೃಶ್ಯ, ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಭಕ್ತನನ್ನು ಟಿಟಿಡಿ ಸಿಬ್ಬಂದಿಗಳು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಅದು ಫಲ ನೀಡಲಿಲ್ಲ. "ಭಕ್ತರು ಇಲ್ಲಿಗೆ ಬಂದು ಸಾವು ತಂದುಕೊಳ್ಳಬೇಡಿ. ಈ ರೀತಿಯ ಮೂಢನಂಬಿಕೆಗಳಿಂದ ಭಕ್ತರು ದೂರವಿರಬೇಕು" ಎಂದು ಟಿಟಿಡಿ ಅಧ್ಯಕ್ಷರಾದ ಸುಬ್ಬಾರೆಡ್ಡಿ ಮನವಿ ಮಾಡಿದ್ದಾರೆ.












Click it and Unblock the Notifications