ವೈಎಸ್ಆರ್ ಕಾಂಗ್ರೆಸ್ ನೋಂದಣಿ ರದ್ದು ಕೋರಿದ್ದ ಅರ್ಜಿ ವಜಾ
ನವದೆಹಲಿ, ಜೂನ್ 4: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ಮೋಹನ್ ರೆಡ್ಡಿ ನೇತೃತ್ವದ ಯುವಜನ ಶ್ರಮಿಕ ರೈತು (ವೈಎಸ್ಆರ್) ಕಾಂಗ್ರೆಸ್ ಪಕ್ಷದ ನೋಂದಣಿ ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ವೈಎಸ್ಆರ್ ಕಾಂಗ್ರೆಸ್ ನೋಂದಣಿ ರದ್ದು ಮಾಡುವಂತೆ ಅಣ್ಣಾ ವೈಎಸ್ಆರ್ ಕಾಂಗ್ರೆಸ್ ಪಕ್ಷ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರಿದ್ದ ಏಕಸದಸ್ಯ ಪೀಠವು ಅರ್ಜಿಯನ್ನು ಶುಕ್ರವಾರದಂದು ವಜಾಗೊಳಿಸಿದ್ದು, ಅರ್ಜಿ ಯಾವುದೇ ಅರ್ಹತೆ ಹೊಂದಿಲ್ಲ ಎಂದಿದೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷವು ''YSR" ಎಂಬ ಹೆಸರನ್ನು ಬಳಸದಂತೆ ಚುನಾವಣಾ ಆಯೋಗ ನಿಷೇಧ ಹೇರಿದೆ, ಆದರೂ ಕಾನೂನುಬಾಹಿರ ಮತ್ತು ಅಕ್ರಮವಾಗಿ ತನ್ನ ಲೆಟರ್ಹೆಡ್ಗಳು, ಪ್ರಚಾರ ಸಾಮಗ್ರಿ ಮತ್ತು ಪಕ್ಷದ ಆಡಳಿತದಲ್ಲಿ ಅದನ್ನು ಬಳಸುತ್ತಿದೆ ಎಂದು ಅಹವಾಲು ಸಲ್ಲಿಸಲಾಗಿತ್ತು.

ಚುನಾವಣಾ ಆಯೋಗವು ಕಾನೂನುಬದ್ಧವಾಗಿ ನೀಡಿದ ನಿರ್ದೇಶನಗಳನ್ನು ಜಗನ್ ಉಲ್ಲಂಘಿಸಿದ್ದಾರೆ. ಚುನಾವಣಾ ಚಿಹ್ನೆಗಳ (ಕಾಯ್ದಿರಿಸುವುದು ಮತ್ತು ಹಂಚಿಕೆ) ಆದೇಶ 1968ರ ಪ್ಯಾರಾ 16ಎ ಅಡಿ ವೈಎಸ್ಆರ್ ಕಾಂಗ್ರೆಸ್ನ ನೋಂದಣಿ ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.












Click it and Unblock the Notifications