ಕಾವೇರಿ-ಗೋದಾವರಿ ನದಿ ಜೋಡಣೆಗೆ ಮುಂದಾದ ಕೇಂದ್ರ ಸರ್ಕಾರ
ಅಮರಾವತಿ, ಜನವರಿ 22 ಕಾವೇರಿ ಮತ್ತು ಗೋದಾವರಿ ನದಿಗಳ ಜೋಡಣೆ ಯೋಜನೆಯನ್ನು ಕೇಂದ್ರ ಸರ್ಕಾರವು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಿದೆ, ಈ ಮೂಲಕ ನದಿ ನೀರು ಹಂಚಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ.
ಸುಮಾರು 60,000 ಕೋಟಿ ರೂ. ವೆಚ್ಚದಲ್ಲಿ ನಡೆಸಲಾಗುವ ಈ ನದಿ ಜೋಡಣೆ ಯೋಜನೆಯು ಗೋದಾವರಿ ನದಿಯಿಂದ ವ್ಯರ್ಥವಾಗಿ ಸಮುದ್ರಕ್ಕೆ ಹರಿಯುತ್ತಿರುವ 1100ಟಿಎಂಸಿ ನೀರನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಗೋದಾವರಿ-ಕೃಷ್ಣ-ಪೆನ್ನಾರ್-ಕಾವೇರಿ ನದಿ ಜೋಡಣೆಯ ಸಂಪೂರ್ಣ ಯೋಜನೆ(ಡಿಪಿಆರ್) ಸಿದ್ಧವಾಗಿದೆ. ಈ ಡಿಪಿಆರ್ ಬಗ್ಗೆ ಶೀಘ್ರದಲ್ಲಿ ಸಂಪುಟದ ಅನುಮತಿಯನ್ನು ಪಡೆಯಲಾಗುವುದು. ನಂತರ ವಿಶ್ವ ಬ್ಯಾಂಕ್ ಅಥವಾ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ನಿಂದ ಸಾಲವನ್ನು ಪಡೆದು, ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಗಡ್ಕರಿ ಹೇಳಿದರು.

ಪ್ರತಿ ವರ್ಷ ಗೋದಾವರಿ ನದಿಯ 1,100 ಟಿಎಂಸಿಯಷ್ಟು ನೀರು ಬಂಗಾಳ ಕೊಲ್ಲಿಗೆ ಹರಿದು ಪೋಲಾಗುತ್ತಿದೆ. ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ನೀರಿನ ವಿವಾದವಿದೆ. ಗೋದಾವರಿಯ ನೀರನ್ನು ತಮಿಳುನಾಡಿಗೆ ಹರಿಸುವುದರಿಂದ ದಕ್ಷಿಣದ ನಾಲ್ಕು ರಾಜ್ಯಗಳ ನಡುವಿನ ಜಲಸಮಸ್ಯೆಯನ್ನು ಬಗೆಹರಿಸಬಹುದಾಗಿದೆ.
ಆಂಧ್ರಪ್ರದೇಶ ಮೂಲದ ಅಮೆರಿಕನ್ ವಿಜ್ಞಾನಿಯೊಬ್ಬರ ಸಲಹೆಯಂತೆ ಸ್ಟೀಲ್ ಪೈಪ್ಗಳನ್ನು ಅಳವಡಿಸುವ ವಿಶೇಷ ತಂತ್ರಜ್ಞಾನವನ್ನು ಬಳಸಿ ನದಿಗಳ ಜೋಡಣೆ ಮಾಡಲಾಗುವುದು ಎಂದರು.












Click it and Unblock the Notifications