ಮದ್ಯಪಾನ ನಿಷೇಧಕ್ಕೆ ಮುಂದಾದ ವೈಎಸ್ ಜಗನ್, ಕರ್ನಾಟಕಕ್ಕೆ ಲಾಭ
ಅಮರಾವತಿ, ಸೆ. 30: ಆಂಧ್ರಪ್ರದೇಶದಲ್ಲಿ ನಕಲಿ ಲೈಸನ್ಸ್ ಹೊಂದಿರುವ ಮದ್ಯದಂಗಡಿಗಳ ಮೇಲೆ ಪ್ರಹಾರ ಆರಂಭಿಸಿರುವ ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರ, ಸಂಪೂರ್ಣ ಮದ್ಯಪಾನ ನಿಷೇಧದತ್ತ ಮಹತ್ವದ ಹೆಜ್ಜೆ ಇಡುತ್ತಿದೆ. ಇದರ ಪರೋಕ್ಷ ಲಾಭ ಪಕ್ಕದ ರಾಜ್ಯ ಕರ್ನಾಟಕ ಹಾಗೂ ತೆಲಂಗಾಣಕ್ಕೆ ಲಾಭವಾಗಲಿದೆ.
"ಅಕ್ಟೋಬರ್ ಒಂದರಿಂದ ರಾಜ್ಯದ ಎಲ್ಲಾ ಮದ್ಯದಂಗಡಿಗಳನ್ನು ಸರ್ಕಾರದ ವಶಕ್ಕೆ ಪಡೆಯಲಾಗುತ್ತದೆ. ಸರ್ಕಾರಿ ಸ್ವಾಮ್ಯದ ಆಂಧ್ರಪ್ರದೇಶ ರಾಜ್ಯ ಬೆವರೇಜಸ್ ಕಾರ್ಪೊರೇಶನ್ ಲಿಮಿಟೆಡ್(ಎಪಿಎಸ್ ಬಿಸಿಎಲ್) ಅಧೀನಕ್ಕೆ ಎಲ್ಲಾ ಮದ್ಯದಂಗಡಿಗಳು ಬರಲಿವೆ" ಎಂದು ಉಪ ಮುಖ್ಯಮಂತ್ರಿ, ಅಬಕಾರಿ ಸಚಿವ ನಾರಾಯಣಸ್ವಾಮಿ ಹೇಳಿದ್ದಾರೆ.
ಮೊದಲ ಹಂತದಲ್ಲಿ ಸೆಪ್ಟೆಂಬರ್ 01ರಿಂದ ಇಂದಿನ ತನಕ 475 ಮದ್ಯದಂಗಡಿಗಳನ್ನು ಸರ್ಕಾರ ವಶಕ್ಕೆ ಪಡೆದುಕೊಂಡಿದೆ. ಒಟ್ಟಾರೆ, ಮದ್ಯದಂಗಡಿಗಳ ಸಂಖ್ಯೆಯನ್ನು 4380 ರಿಂದ 3500ಕ್ಕಿಳಿಸಲಾಗುತ್ತದೆ. ನಂತರ ಹಂತ ಹಂತವಾಗಿ ಅಂಗಡಿ ಬಂದ್ ಮಾಡಿ ಮದ್ಯಪಾನ ನಿಷೇಧ ಜಾರಿಗೊಳಿಸಲಾಗುತ್ತದೆ.

ಎನ್ ಚಂದ್ರಬಾಬು ನಾಯ್ಡು ಸರ್ಕಾರ ಅಧಿಕಾರದಲ್ಲಿದ್ದಾಗ 43,000 ಅಕ್ರಮ ಮದ್ಯದಂಗಡಿಗಳಿದ್ದವು. ಲೈಸನ್ಸ್ ಪಡೆದ ಅಂಗಡಿಗಳ ಅಕ್ರಮ ಔಟ್ ಲೆಟ್ ಗಳ ಸಂಖ್ಯೆ ಇಷ್ಟಿತ್ತು. ಈಗ ಲೈಸನ್ಸ್ ರಹಿತ-ಸಹಿತ ಅಂಗಡಿಗಳೆಲ್ಲವೂ ಸರ್ಕಾರಕ್ಕೆ ಸೇರಲಿವೆ. ಅಕ್ರಮ ಔಟ್ ಲೆಟ್ ಹೊಂದಿದ್ದವರ ಮೇಲೆ 2872 ಕೇಸು ದಾಖಲಿಸಿ 2928 ಮಂದಿಯನ್ನು ಬಂಧಿಸಲಾಗಿದೆ. ಇದಲ್ಲದೆ 4788 ಅಕ್ರಮ ಮದ್ಯ ಮಾರಾಟ ಪ್ರಕರಣಗಳು ದಾಖಲಾಗಿದ್ದು, 2834 ಮಂದಿಯನ್ನು ಬಂಧಿಸಲಾಗಿದೆ.
ಪಾದಯಾತ್ರೆ ಸಂದರ್ಭದಲ್ಲಿ ಜಗನ್ ಮೋಹನ್ ರೆಡ್ಡಿ ಅವರು ಮದ್ಯಪಾನ ನಿಷೇಧದ ಆಶ್ವಾಸನೆ ನೀಡಿದ್ದರು. ಅದರಂತೆ, ಅಧಿಕಾರಕ್ಕೆ ಬಂದ ಬಳಿಕ ಆಶ್ವಾಸನೆಯನ್ನು ಈಡೇರಿಸುವತ್ತ ಹೆಜ್ಜೆ ಹಾಕಿದ್ದಾರೆ.
ಸರ್ಕಾರಿ ಸ್ವಾಮ್ಯದ ಮದ್ಯದಂಗಡಿಗಳು ಬೆಳಗ್ಗೆ 10 ರಿಂದ ರಾತ್ರಿ 9 ರ ತನಕ ಮಾತ್ರ ಕಾರ್ಯ ನಿರ್ವಹಿಸಲಿವೆ. 3500 ಸೂಪರ್ ವೈಸರ್ಸ್ , 8033 ಸೇಲ್ಸ್ ಮನ್ ಗಳನ್ನು ಇದಕ್ಕಾಗಿ ನೇಮಿಸಲಾಗಿದೆ.
"ಮದ್ಯ ಮಾರಾಟವನ್ನು ಕೇವಲ ಆದಾಯ ರೂಪದಲ್ಲಿ ಈ ಹಿಂದಿನ ಸರ್ಕಾರ ಕಂಡಿತ್ತು. ಮಹಿಳೆಯರು, ಸಮಾಜದ ಬಗ್ಗೆ ಯಾವುದೇ ಇರಿಸಿಕೊಂಡಿರಲಿಲ್ಲ. ನಮ್ಮ ಸರ್ಕಾರ ಮದ್ಯಪಾನ ನಿಷೇಧದತ್ತ ಪ್ರಮುಖ ಹೆಜ್ಜೆ ಇಟ್ಟಿದೆ" ಎಂದು ನಾರಾಯಣಸ್ವಾಮಿ ಹೇಳಿದರು.












Click it and Unblock the Notifications