ಹಿರಿಯ ಸಿಬ್ಬಂದಿ ಸಾವು; ಹೈಕೋರ್ಟ್ ಕಲಾಪಗಳು ಬಂದ್
ಅಮರಾವತಿ, ಜೂನ್ 25 : ಕೊರೊನಾ ವೈರಸ್ ಸೋಂಕಿನ ಭೀತಿ ಹಿನ್ನಲೆಯಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ಜೂನ್ 28ರ ತನಕ ಎಲ್ಲಾ ಕಾರ್ಯ ಕಲಾಪಗಳನ್ನು ನಿರ್ಬಂಧಿಸಿದೆ. ಹೈಕೋರ್ಟ್ ಈ ಕುರಿತು ಗುರುವಾರ ಆದೇಶ ಹೊರಡಿಸಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ. ಕೆ. ಮಹೇಶ್ವರಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಜೂನ್ 28ರ ಭಾನುವಾರದ ತನಕ ಹೈಕೋರ್ಟ್ ಮತ್ತು ವಿಜಯವಾಡ ಸೆಷನ್ಸ್ ಕೋರ್ಟ್ ಕಲಾಪಗಳು ನಡೆಯುವುದಿಲ್ಲ.
ಆಂಧ್ರಪ್ರದೇಶ ಹೈಕೋರ್ಟ್ನ ಹಿರಿಯ ಸಿಬ್ಬಂದಿಯೊಬ್ಬರು ಬುಧವಾರ ಸಾವನ್ನಪ್ಪಿದ್ದರು. 10 ದಿನದ ಹಿಂದೆ ಕೋವಿಡ್ -19 ವರದಿ ನೆಗೆಟಿವ್ ಬಂದಿದ್ದ ಸಿಬ್ಬಂದಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಆದರೆ ಸಾವನ್ನಪ್ಪಿದ ಮೇಲೆ ಅವರಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಡಪಟ್ಟಿತ್ತು.

ಹೈಕೋರ್ಟ್ನಲ್ಲಿಯೇ ಕುಸಿದು ಬಿದ್ದು ಮೃತಪಡುವ ಮೊದಲು ಹಿರಿಯ ಸಿಬ್ಬಂದಿ ಹಲವಾರು ನ್ಯಾಯಮೂರ್ತಿಗಳ ಸಂಪರ್ಕಕ್ಕೆ ಬಂದಿದ್ದರು. ಕೆಲವು ನ್ಯಾಯಮೂರ್ತಿಗಳು ಆಸ್ಪತ್ರೆಗೆ ತೆರಳಿ ಸಿಬ್ಬಂದಿಗೆ ಅಂತಿಮ ನಮನ ಸಹ ಸಲ್ಲಿಸಿದ್ದರು.
ಯಾವುದೇ ಜನರು ನ್ಯಾಯಾಲಯಕ್ಕೆ ಆಗಮಿಸದಂತೆ ನೋಡಿಕೊಳ್ಳಬೇಕು ಎಂದು ಭದ್ರತಾ ಸಿಬ್ಬಂದಿಗಳಿಗೆ ಕೋರ್ಟ್ ಸೂಚನೆ ನೀಡಿತ್ತು. ನಗರ ಬಿಟ್ಟು ತೆರಳದಂತೆ ನ್ಯಾಯಾಲಯ ಎಲ್ಲಾ ಸಿಬ್ಭಂದಿ, ನ್ಯಾಯಮೂರ್ತಿಗಳಿಗೆ ನಿರ್ದೇಶನ ನೀಡಲಾಗಿತ್ತು.
ಆಂಧ್ರ ಪ್ರದೇಶದಲ್ಲಿ ಇದುವರೆಗೂ 10,884 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. 136 ಜನರು ಇದುವರೆಗೂ ಮೃತಪಟ್ಟಿದ್ದಾರೆ.












Click it and Unblock the Notifications