ಇಂಧನದ ಮೇಲಿನ ವ್ಯಾಟ್ ಕಡಿತ ಮಾಡದ ಆಂಧ್ರಪ್ರದೇಶ ಸರ್ಕಾರ: ಕಾರಣವೇನು?
ಅಮರಾವತಿ, ನವೆಂಬರ್ 08: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಅಧಿಕವಾಗಿರುವ ದಕ್ಷಿಣ ಭಾರತದ ರಾಜ್ಯಗಳಲ್ಲಿ ಆಂಧ್ರ ಪ್ರದೇಶವೂ ಕೂಡಾ ಒಂದಾಗಿದೆ. ಈ ನಡುವೆ ಆಂಧ್ರ ಪ್ರದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿತ ಮಾಡುವ ವಿಚಾರವನ್ನು ಆಂಧ್ರ ಪ್ರದೇಶ ಸರ್ಕಾರ ತಳ್ಳಿ ಹಾಕಿದೆ. ಹಾಗೆಯೇ ಪೆಟ್ರೋಲ್ ಹಾಗೂ ಡೀಸೆಲ್ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
"ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ನ ಅಬಕಾರಿ ಸುಂಕದಲ್ಲೇ 3.35 ಲಕ್ಷ ಕೋಟಿ ರೂಪಾಯಿ ಹಣವನ್ನು ಸಂಗ್ರಹ ಮಾಡಿಕೊಂಡಿದೆ. ಆದರೆ ರಾಜ್ಯ ಸರ್ಕಾರಗಳಿಗೆ ಮಾತ್ರ ಸಮರ್ಪಕವಾದ ಪರಿಹಾರವನ್ನು ನೀಡಿಲ್ಲ," ಎಂದು ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರವು ತರಾಟೆಗೆ ತೆಗೆದುಕೊಂಡಿದೆ. ಈ ತಿಂಗಳ ಆರಂಭದಲ್ಲಿ ದೀಪಾವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ. ಕೇಂದ್ರ ಸರ್ಕಾರವು ಪೆಟ್ರೋಲ್ 5 ರೂ, ಹಾಗೂ ಡೀಸೆಲ್ ಮೇಲೆ 10 ರೂಪಾಯಿ ಅಬಕಾರಿ ಸುಂಕವನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದೆ.
ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದ ಸರ್ಕಾರ
ಈ ಬೆನ್ನಲ್ಲೇ ರಾಜ್ಯಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿತ ಮಾಡುವ ಒತ್ತಾಯ ವ್ಯಕ್ತವಾಗಿತ್ತು. ಬಳಿಕ ಹಲವಾರು ರಾಜ್ಯಗಳು ಇಂಧನದ ಮೇಲಿನ ವ್ಯಾಟ್ ಅನ್ನು ಕಡಿತ ಮಾಡಿದೆ. ಮುಂದಿನ ವರ್ಷ ಚುನಾವಣೆಯು ನಡೆಯಲಿರುವ ನಡುವೆ ಈ ಅಬಕಾರಿ ಸುಂಕ ಇಳಿಕೆಯು ಕಂಡು ಬಂದಿದೆ. ಕೇಂದ್ರ ಸರ್ಕಾರ ಅಬಕಾರಿ ಸುಂದ ಕಡಿತ ಮಾಡಿ ಆದೇಶ ಹೊರಡಿಸದ ಬೆನ್ನಲ್ಲೇ ಮುಖ್ಯವಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ವ್ಯಾಟ್ ಅನ್ನು ಕಡಿತ ಮಾಡಲಾಗಿದೆ.
ಇನ್ನು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ನಿರಂತರವಾಗಿ ಏರಿಕೆ ಕಾಣುತ್ತಲಿದ್ದ ಹಿನ್ನೆಲೆ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತ ಮಾಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹ ಮಾಡಿದ್ದವು. ಇನ್ನು ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿದ ಬಳಿಕ ಪೆಟ್ರೋಲ್ ಬೆಲೆಯು 107 ರೂಪಾಯಿಗೆ ಹಾಗೂ ಡೀಸೆಲ್ ಬೆಲೆಯು 97 ಕ್ಕೆ ಇಳಿಕೆ ಆಗಿದೆ.
ಈ 9 ಬಿಜೆಪಿ ಆಡಳಿತದ ರಾಜ್ಯದಲ್ಲಿ ಇಂಧನ ಬೆಲೆ ಹೆಚ್ಚುವರಿ ಕಡಿತ
ವ್ಯಾಟ್ ಕಡಿತ ಮಾಡದಿರಲು ಆಂಧ್ರ ಸರ್ಕಾರ ನೀಡಿದ ಕಾರಣವೇನು?
ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿತ ಮಾಡುವುದನ್ನು ತಳ್ಳಿ ಹಾಕಿರುವ ಆಂಧ್ರ ಪ್ರದೇಶ ಸರ್ಕಾರ ಇದಕ್ಕೆ ನಿರ್ದಿಷ್ಟ ಕಾರಣವನ್ನು ನೀಡಿದೆ. ಮುಖ್ಯವಾಗಿ ಕೇಂದ್ರ ಸರ್ಕಾರವು ಅಬಕಾರಿ ಸುಂಕದಲ್ಲೇ 3.35 ಲಕ್ಷ ಕೋಟಿ ರೂಪಾಯಿ ಹಣವನ್ನು ಸಂಗ್ರಹ ಮಾಡಿದೆ. ಆದರೆ ರಾಜ್ಯ ಸರ್ಕಾರಕ್ಕೆ ಸರಿಯಾಗಿ ಪರಿಹಾರವನ್ನು ನೀಡಿಲ್ಲ ಎಂದು ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರವು ಆರೋಪ ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು, "ನಾವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ ಕಡಿತ ಮಾಡುವ ಬಗ್ಗೆ ಈವರೆಗೂ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಆದರೆ ವ್ಯಾಟ್ ಅನ್ನು ಕಡಿತ ಮಾಡುವ ಸಾಧ್ಯತೆಯೂ ಬಾರಿ ಕಡಿಮೆ ಆಗಿದೆ. ನಮ್ಮ ರಾಜ್ಯದಲ್ಲಿ ಇರುವ ಆರ್ಥಿಕ ಪರಿಸ್ಥಿತಿಯು ನಾವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿತ ಮಾಡಲು ಅವಕಾಶ ನೀಡುವುದಿಲ್ಲ," ಎಂದು ತಿಳಿಸಿದ್ದಾರೆ. ಈ ನಡುವೆ ರಾಜ್ಯ ಸರ್ಕಾರ ವ್ಯಾಟ್ ಕಡಿಮೆ ಮಾಡಬೇಕು ಎಂಬ ಆಗ್ರಹ ಹೆಚ್ಚಾಗಿದೆ. ರಾಜ್ಯದ ವಿರೋಧ ಪಕ್ಷಗಳು ವ್ಯಾಟ್ ಕಡಿತಕ್ಕೆ ಒತ್ತಾಯ ಮಾಡಿದೆ.
ಇಂಧನದ ಮೇಲಿನ ವ್ಯಾಟ್ ಕಡಿತ ಮಾಡದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ
ರಾಜ್ಯದಲ್ಲಿ ಹೇಗಿಗೆ ಪೆಟ್ರೋಲ್, ಡಿಸೇಲ್ ಮೇಲಿನ ವ್ಯಾಟ್?
ಕಳೆದ ವರ್ಷ ಜುಲೈ 20 ರಂದು, ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಪರಿಷ್ಕರಣೆ ಮಾಡಿದೆ. ಈ ಪರಿಷ್ಕರಣೆಯ ಬಳಿಕ ಪ್ರತಿ ಲೀಟರ್ ಪೆಟ್ರೋಲ್ಗೆ ರೂ 1.24 ಮತ್ತು ಪ್ರತಿ ಲೀಟರ್ ಡೀಸೆಲ್ಗೆ ರೂ 0.93 ರಷ್ಟು ಹೆಚ್ಚಳ ಮಾಡಲಾಗಿತ್ತು. ಈ ಮೂಲಕ ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆಯ ಮೂಲಕ ವಾರ್ಷಿಕ ಸುಮಾರು ರೂ 600 ಕೋಟಿಗಳಷ್ಟು ಹೆಚ್ಚುವರಿ ಆದಾಯವನ್ನು ಗಳಿಸಿದೆ. ಇನ್ನು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪ್ರತಿ ಲೀಟರ್ಗೆ 1 ರೂಪಾಯಿಗಳ ರಸ್ತೆ ಅಭಿವೃದ್ಧಿ ಸೆಸ್ ಅನ್ನು ವಿಧಿಸಲಾಗಿದೆ. ಇನ್ನು ಆಂಧ್ರಪ್ರದೇಶದ ಹಣಕಾಸು ಮತ್ತು ವಾಣಿಜ್ಯ ತೆರಿಗೆ ಸಚಿವ ಬುಗ್ಗನ ರಾಜೇಂದ್ರನಾಥ್ ಹೆಸರಲ್ಲಿ ನೀಡಲಾದ ಒಂದು ಜಾಹೀರಾತಿನ ಪ್ರಕಾರ ಒಂದು ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕ್ರಮವಾಗಿ 31 ಶೇಕಡ ಮತ್ತು ಶೇಕಡ 22.5 ರಷ್ಟು ವ್ಯಾಟ್ ವಿಧಿಸಲಾಗುತ್ತಿದೆ. ಇದನ್ನು ಹೊರತುಪಡಿಸಿ 4 ರೂಪಾಯಿ ಹೆಚ್ಚುವರಿ ವ್ಯಾಟ್ ಹಾಗೂ 1 ರೂಪಾಯಿಯ ಸೆಸ್ ಸಂಗ್ರಹಿಸುತ್ತಿದೆ.
(ಒನ್ಇಂಡಿಯಾ ಸುದ್ದಿ)