ಸುದ್ದಿ ವಾಹಿನಿಯಲ್ಲಿ ಪಾಕ್ ಧ್ವಜ, ನೂಪುರ್ ಶರ್ಮಾ ಮಾಹಿತಿ ಸೋರಿಕೆ: ಪ್ರವಾದಿ ಹೇಳಿಕೆಗೆ ಸೈಬರ್ ದಾಳಿ
ಅಹಮದಾಬಾದ್ ಜುಲೈ 8: ಇದೀಗ ಅಮಾನತುಗೊಂಡಿರುವ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರು ಪ್ರವಾದಿಯವರ ಕುರಿತು ಹೇಳಿಕೆ ನೀಡಿದ್ದಕ್ಕಾಗಿ ಮಲೇಷ್ಯಾ ಮತ್ತು ಇಂಡೋನೇಷ್ಯಾದ ಹ್ಯಾಕರ್ಗಳು ಭಾರತದ ವಿರುದ್ಧ ಸೈಬರ್ ಯುದ್ಧವನ್ನು ನಡೆಸಿದ್ದಾರೆ ಎಂದು ಅಹಮದಾಬಾದ್ ಪೊಲೀಸ್ನ ಅಪರಾಧ ವಿಭಾಗ ಇಂಡಿಯಾ ಟುಡೇ ಟಿವಿಗೆ ತಿಳಿಸಿದೆ.
ಹ್ಯಾಕರ್ ಗುಂಪುಗಳು ಡ್ರ್ಯಾಗನ್ ಫೋರ್ಸ್ ಮಲೇಷ್ಯಾ ಮತ್ತು ಹ್ಯಾಕ್ಟಿವಿಸ್ಟ್ ಇಂಡೋನೇಷ್ಯಾ ಸೈಬರ್ ದಾಳಿಯನ್ನು ಪ್ರಾರಂಭಿಸಿವೆ. ಜೊತೆಗೆ ಭಾರತದ ಮೇಲೆ ಸೈಬರ್ ದಾಳಿಯನ್ನು ಪ್ರಾರಂಭಿಸಲು ಪ್ರಪಂಚದಾದ್ಯಂತದ ಮುಸ್ಲಿಂ ಹ್ಯಾಕರ್ಗಳಿಗೆ ಮನವಿ ಮಾಡಿದೆ ಎಂದು ಅವರು ಹೇಳಿದ್ದಾರೆ.
ಅಹಮದಾಬಾದ್ನ ಸೈಬರ್ ಕ್ರೈಮ್ ತಂಡದ ಅಧಿಕಾರಿಗಳು ಗುಂಪುಗಳ ವಿರುದ್ಧ ಲುಕ್ಔಟ್ ನೋಟಿಸ್ಗಾಗಿ ಮಲೇಷ್ಯಾ ಮತ್ತು ಇಂಡೋನೇಷ್ಯಾ ಸರ್ಕಾರಗಳಿಗೆ ಮತ್ತು ಇಂಟರ್ಪೋಲ್ಗೆ ಪತ್ರ ಬರೆದಿದ್ದಾರೆ. ಥಾಣೆ ಪೊಲೀಸರು, ಆಂಧ್ರಪ್ರದೇಶ ಪೊಲೀಸರು ಮತ್ತು ಅಸ್ಸಾಂನ ಸುದ್ದಿ ವಾಹಿನಿ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ವೆಬ್ಸೈಟ್ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಾಹಿನಿಯಲ್ಲಿ 'ಪಾಕಿಸ್ತಾನದ ಧ್ವಜ'
ನೇರ ಪ್ರಸಾರದ ಸಮಯದಲ್ಲಿ, ಸುದ್ದಿ ವಾಹಿನಿ ಕತ್ತಲೆಯಾಯಿತು ಮತ್ತು ಪಾಕಿಸ್ತಾನದ ಧ್ವಜ ಕಾಣಿಸಿಕೊಂಡಿತು. "ರೆಸ್ಪೆಕ್ಟ್ ದಿ ಹೋಲಿ ಪ್ರವಾದಿ ಹಜರತ್ ಮುಹಮ್ಮದ್ ಎಸ್.ಎ.ಡಬ್ಲ್ಯೂ.ಡಬ್ಲ್ಯೂ" ಚಾನಲ್ನ ಕೆಳಗಿನ ಬ್ಯಾಂಡ್ನಲ್ಲಿ ಟಿಕ್ಕರ್ನಲ್ಲಿ "ಹ್ಯಾಕ್ ಬೈ ಟೀಮ್ ರೆವಲ್ಯೂಷನ್ ಪಿಕೆ" ಎಂಬ ಪಠ್ಯದೊಂದಿಗೆ ಓಡಿದೆ.
ಸೈಬರ್ ಅಪರಾಧಿಗಳು ಶರ್ಮಾ ಅವರ ವಿಳಾಸ ಸೇರಿದಂತೆ ಅವರ ವೈಯಕ್ತಿಕ ವಿವರಗಳನ್ನು ಆನ್ಲೈನ್ನಲ್ಲಿ ಪ್ರಸಾರ ಮಾಡಿದ್ದಾರೆ. ಹಲವಾರು ಜನರ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ವಿವರಗಳು ಆನ್ಲೈನ್ನಲ್ಲಿ ಸೋರಿಕೆಯಾಗಿದೆ.
ನೂಪುರ್ ಶರ್ಮಾ ಅವರ ಕಾಮೆಂಟ್ಗಳು ಜಾಗತಿಕ ವಿವಾದವನ್ನು ಹುಟ್ಟುಹಾಕಿವೆ. ಹಲವಾರು ದೇಶಗಳು ಅವರ ಕಾಮೆಂಟ್ಗಳನ್ನು ಖಂಡಿಸಿವೆ. ವ್ಯಾಪಕ ಪ್ರತಿಭಟನೆಗಳ ನಡುವೆ ಭಾರತೀಯ ಉತ್ಪನ್ನಗಳನ್ನು ಸೂಪರ್ಮಾರ್ಕೆಟ್ಗಳಿಂದ ತೆಗೆದು ಹಾಕಲಾಯಿತು. ಶರ್ಮಾ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ನೂಪುರ್ ಶರ್ಮಾ ಅವರನ್ನು ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಅಮಾನತುಗೊಳಿಸಲಾಯಿತು.
ನೂಪುರ್ ಶರ್ಮಾ ಯಾರು?
ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ ಈ ಹಿಂದೆ ಟಿವಿ ಸಂದರ್ಶನದಲ್ಲಿ ಮೊಹಮ್ಮದ್ ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದರ ವಿಡಿಯೋ ವೈರಲ್ ಮಾಡಲಾಗಿತ್ತು. ಇದರಿಂದ ದೇಶದಲ್ಲಿ ಮಾತ್ರವಲ್ಲದೆ ಮುಸ್ಲಿಂ ರಾಷ್ಟ್ರಗಳು ಶರ್ಮಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬೀದಿಗಿಳಿದು ಪ್ರತಿಭಟನೆಗೆ ಮುಂದಾದವು. ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ನೂಪುರ್ ಅವರನ್ನು ಪಕ್ಷ ಅಮಾನತುಗೊಳಿಸಿತು. ಆದರೂ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ಹಿಂಸಾತ್ಮಾಕತೆಗೆ ತಿರುಗಿ ಹಲವು ಸಾವು ನೋವುಗಳು ದೇಶದಲ್ಲಿ ಸಂಭವಿಸಿವೆ.
ರಾಜಸ್ಥಾನ ಟೇಲರ್ ಕ್ರೂರವಾಗಿ ಹತ್ಯೆ
ಸದ್ಯ ಅಮಾನತುಗೊಂಡಿರುವ ನೂಪುರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ. ಈ ನಡುವೆ ರಾಜಸ್ಥಾನದ ಉದಯಪುರದಲ್ಲಿ ಟೇಲರ್ ಕನ್ಹಯ್ಯ ಲಾಲ್ ಎಂಬಾತ ಶರ್ಮಾ ಪರವಾಗಿ ಪೋಸ್ಟ್ ಮಾಡಿದ್ದಕ್ಕೆ ಆತನನ್ನು ಕ್ರೂರವಾಗಿ ಕೊಲೆ ಮಾಡಲಾಗಿದೆ. ಜೊತೆಗೆ ಕೊಲೆಯ ವಿಡಿಯೋವನ್ನೂ ಹಂಚಿಕೊಳ್ಳಲಾಗಿತ್ತು. ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರಿಗೂ ಬೆದರಿಕೆ ಹಾಕಲಾಗಿತ್ತು. ಘಟನೆ ಬಳಿಕೆ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದೆ.
ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು
ಸದ್ಯ ದೇಶದಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಅಲ್ಲಿಗೂ ಪೊಲೀಸರು ಕನ್ಹಯ್ಯ ಲಾಲ್ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಪರಿಸ್ಥಿತಿ ತಿಳಿಯಾಗಿದೆ. ಆದರೂ ನೂಪುರ್ ಶರ್ಮಾ ವಿರುದ್ಧ ಕ್ರಮಕ್ಕೆ ಇಂದಿಗೂ ಒತ್ತಾಯಿಸಲಾಗುತ್ತಿದೆ. ಆದರೆ ಬಿಜೆಪಿ ಸರ್ಕಾರ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡತೆ ಕಾಣಿಸುತ್ತಿಲ್ಲ.