ಘಾಸಿಗೊಳಿಸುವ, ಊಹಿಸಲಾಧ್ಯ ಕಥೆಗಳು: ಕೋವಿಡ್ ಪರಿಸ್ಥಿತಿ ಬಗ್ಗೆ ಹೈಕೋರ್ಟ್ ಕಳವಳ
ಅಹಮದಾಬಾದ್, ಏಪ್ರಿಲ್ 12: ಗುಜರಾತ್ನಲ್ಲಿನ ಕೋವಿಡ್ ಸನ್ನಿವೇಶವು ಆರೋಗ್ಯ ತುರ್ತು ಪರಿಸ್ಥಿತಿಯತ್ತ ಸಾಗುತ್ತಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿರುವ ಅಲ್ಲಿನ ಹೈಕೋರ್ಟ್, ಈ ಕುರಿತು ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಿಸಿಕೊಂಡಿದೆ.
'ಕೋವಿಡ್ ನಿಯಂತ್ರಣದಲ್ಲಿ ಅನಿಯಂತ್ರಿತ ಏರಿಕೆ ಮತ್ತು ಗಂಭೀರ ನಿರ್ವಹಣೆ ಸಮಸ್ಯೆಗಳು' ಎಂಬ ಶೀರ್ಷಿಕೆಯಡಿ ಹೊಸದಾಗಿ ಸುಮೊಟೊ ಪ್ರಕರಣ ದಾಖಲಿಸಿಕೊಳ್ಳುವಂತೆ ಹೈಕೋರ್ಟ್ ರಿಜಿಸ್ಟ್ರಿಗೆ ಮುಖ್ಯನ್ಯಾಯಮೂರ್ತಿ ವಿಕ್ರಂ ನಾಥ್ ಅವರು ಭಾನುವಾರ ಮೌಖಿಕ ಆದೇಶ ನೀಡಿದರು.
ಗುಜರಾತ್ ಸರ್ಕಾರ, ಅದರ ಆರೋಗ್ಯ ಇಲಾಖೆ ಮತ್ತು ಕೇಂದ್ರ ಸರ್ಕಾರಗಳನ್ನು ಈ ಹೊಸ ಪಿಐಎಲ್ನಲ್ಲಿ ಎದುರಾಳಿಗಳನ್ನಾಗಿಸುವಂತೆ ಅವರು ಸೂಚನೆ ನೀಡಿದರು. ಸುದ್ದಿ ವಾಹಿನಿಗಳು ಆಘಾತಕಾರಿ ಸುದ್ದಿಗಳ ಪ್ರವಾಹ ಹರಿಸುತ್ತಿವೆ ಎಂದು ಅವರು ಕೋವಿಡ್ ಸನ್ನಿವೇಶ ಕುರಿತಾದ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದರು.

ಸುದ್ದಿ ವಾಹಿನಿಗಳು ಮೂಲಸೌಕರ್ಯಗಳ ದುರದೃಷ್ಟಕರ ಮತ್ತು ಊಹಿಸಲಸಾಧ್ಯ ಸಂಕಷ್ಟಗಳು ಹಾಗೂ ನಿಭಾಯಿಸಲಾಗದ ಪರಿಸ್ಥಿತಿಗಳ ಆಘಾತಕಾರಿ ಕಥೆಗಳಿಂದ ತುಂಬಿಹೋಗಿವೆ. ಪರೀಕ್ಷೆಗಳು, ಹಾಸಿಗೆಗಳು ಮತ್ತು ಐಸಿಯು ಮಾತ್ರವಲ್ಲದೆ ರಮ್ಡೆಸಿವಿರ್ ಮುಂತಾದ ಮೂಲ ಲಸಿಕೆಗಳು ಹಾಗೂ ಆಮ್ಲಜನಕದಂತಹ ಅತಿ ಅಗತ್ಯ ಉಪಕರಣಗಳಲ್ಲಿಯೂ ಕೊರತೆ ಉಂಟಾಗುತ್ತಿದೆ ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಅವರು ಆತಂಕ ವ್ಯಕ್ತಪಡಿಸಿದರು.
ಮುಖ್ಯ ನ್ಯಾಯಮೂರ್ತಿ ವಿಕ್ರಂ ನಾಥ್ ಮತ್ತು ನ್ಯಾಯಮೂರ್ತಿ ಭಾರ್ಗವ್ ಡಿ ಕಾರಿಯಾ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠವು ನಾಥ್ ಅವರ ಅಧಿಕೃತ ನಿವಾಸದಲ್ಲಿ ಆನ್ಲೈನ್ ಮೂಲಕ ಸೋಮವಾರ ಈ ಪಿಐಎಲ್ ವಿಚಾರಣೆ ನಡೆಸಲಿದೆ.












Click it and Unblock the Notifications