ಫುಟ್ಪಾತ್ ಮೇಲೆ ಮಲಗಿದ್ದವರ ಮೇಲೆ ಹರಿದ ಟ್ರಕ್, 15 ಮಂದಿ ಬಲಿ
ಸೂರತ್, ಜನವರಿ 19: ಪುಟ್ಪಾತ್ ಮೇಲೆ ಮಲಗಿದ್ದವರ ಮೇಲೆ ಟ್ರಕ್ ಹರಿದು 15 ಮಂದಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಸೂರತ್ನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಕೊಸಾಂಬಾ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ.
ಕಿಮ್ ಮಾಂಡ್ವಿ ರಸ್ತೆ ಬದಿಯ ಪಾದಚಾರಿ ಮಾರ್ಗದಲ್ಲಿ ಮಲಗಿ ನಿದ್ರಿಸುತ್ತಿದ್ದ ವಲಸೆ ಕಾರ್ಮಿಕರ ಮೇಲೆ ವೇಗವಾಗಿ ಬಂದ ಟ್ರಕ್ ಸಂಚರಿಸಿದೆ. ಘಟನೆಯಲ್ಲಿ 13 ಮಂದಿ ಮೃತ ಪಟ್ಟಿದ್ದು, 5 ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಗಾಯಗೊಂಡವರ ಪೈಕಿ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿರುವ ಸುದ್ದಿ ಬಂದಿದೆ.
ಮೃತರ ಕುಟುಂಬಕ್ಕೆ 2 ಲಕ್ಷ ರು ಪರಿಹಾರ ಮೊತ್ತವನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಪ್ರಕಟಿಸಿದ್ದು, ಘಟನೆ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Gujarat: 13 people died after they were run over by a truck in Kosamba, Surat.
— ANI (@ANI) January 19, 2021
Police says, "All the deceased are labourers and they hail from Rajasthan." pic.twitter.com/E9uwZnrgeO
ಮೃತರೆಲ್ಲರೂ ರಾಜಸ್ಥಾನ ರಾಜ್ಯದ ಬಾನ್ಸ್ ವಾಡಾ ಜಿಲ್ಲೆಯವರು ಎಂದು ತಿಳಿದು ಬಂದಿದೆ. ಕೆಲಸ ಅರಸಿಕೊಂಡು ಸೂರತ್ ಕಡೆಗೆ ಬಂದಿದ್ದ ವಲಸೆ ಕಾರ್ಮಿಕರು, ಸೂರತ್ನ ಕೊಸಾಂಬಾ ಬಳಿ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವೇಗವಾಗಿ ಬರುತ್ತಿದ್ದ ಟ್ರಕ್ ಎದುರಿಗಿದ್ದ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದಿದೆ ಇದರಿಂದ ಟ್ರಕ್ ಮೇಲೆ ನಿಯಂತ್ರಣ ಕಳೆದುಕೊಂಡ ಚಾಲಕ ಫುಟ್ ಪಾತ್ ಮೇಲೆ ಟ್ರಕ್ ಹರಿಸಿದ್ದಾನೆ. ಐದು ಮಂದಿ ಈ ಅಪಘಾತದಿಂದ ಬಚಾವಾದರೂ ತೀವ್ರವಾಗಿ ಗಾಯಗೊಂಡಿದ್ದು, ಎಲ್ಲರನ್ನು ಸಮೀಪದ ಸ್ಮಿಮೇರ್ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ಕೊಡಿಸಲಾಗುತ್ತಿದೆ.13 ಮಂದಿ ಮೃತರ ಗುರುತು ಪತ್ತೆ ಕಾರ್ಯ ಪೂರ್ಣಗೊಂಡ ಬಳಿಕ ಅವರ ಕುಟುಂಬಸ್ಥರಿಗೆ ಶವ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.