'ಕಾಂಗ್ರೆಸ್ ಇಷ್ಟವಿಲ್ಲವಾದರೆ ನಮ್ಮ ಪಕ್ಷಕ್ಕೆ ಬರಲಿ' ಹಾರ್ದಿಕ್ಗೆ AAP ಬಿಗ್ ಆಫರ್
ತಮ್ಮ ಪಕ್ಷದಲ್ಲಿಯೇ ತಮ್ಮನ್ನು ಕಡೆಗಣಿಸಿದೆ ಎಂದು ಆರೋಪಿಸಿದ ಹಾರ್ದಿಕ್ ಪಟೇಲ್ ಅವರಿಗೆ ಆಮ್ ಆದ್ಮಿ ಪಕ್ಷ ಬಿಗ್ ಆಫರ್ ಕೊಟ್ಟಿದೆ. ಗುಜರಾತ್ ರಾಜಕೀಯ ವಲಯದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಇತ್ತೀಚಿನ ಬೆಳವಣಿಗೆಗಳು ಸಾಕ್ಷಿಯಾಗಿವೆ. ಪಾಟೀದಾರ್ ಸಮುದಾಯದ ಪ್ರಮುಖ ನಾಯಕ ಹಾರ್ದಿಕ್ ಪಟೇಲ್ನಿಂದ ಇದು ಬಹಿರಂಗಗೊಂಡಿದೆ. ಹೀಗಾಗಿ ಹಾರ್ದಿಕ್ ಪಟೇಲ್ ಅವರಿಗೆ ಆಮ್ ಆದ್ಮಿ ಪಕ್ಷ ಬಿಗ್ ಆಫರ್ ಕೊಟ್ಟಿದೆ.
ಇತ್ತೀಚೆಗೆ ಹಾರ್ದಿಕ್ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸಿದರು. ಮದುಮಗನಿಗೆ ಸಂತಾನಹರಣ ಮಾಡಿದಂತಾಗಿದೆ ಕಾಂಗ್ರೆಸ್ನಲ್ಲಿನ ನನ್ನ ಪರಿಸ್ಥಿತಿ ಎಂದಿದ್ದರು. ಹಾರ್ದಿಕ್ ಪಟೇಲ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಿಂದ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಈ ನಡುವೆ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಗುಜರಾತ್ ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ಅವರು ಹಾರ್ದಿಕ್ ಪಟೇಲ್ ಬಗ್ಗೆ ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ನಲ್ಲಿ ಹಾರ್ದಿಕ್ ಪಟೇಲ್ ಅವರನ್ನು ಗೌರವಿಸಲಾಗುತ್ತಿಲ್ಲ. ಹಾಗಾದರೆ ಅವರಿಗೆ ಕಾಂಗ್ರೆಸ್ ಇಷ್ಟವಿಲ್ಲದಿದ್ದರೆ ನಮ್ಮಂತಹ ಸಿದ್ಧಾಂತ ಇರುವ ಪಕ್ಷಕ್ಕೆ ಸೇರಬಹುದು ಎಂದು ಇಟಾಲಿಯಾ ಬಿಗ್ ಆಫರ್ ಕೊಟ್ಟಿದ್ದಾರೆ. "ಕಾಂಗ್ರೆಸ್ಗೆ ದೂರು ನೀಡುವ ಬದಲು, ಹಾರ್ದಿಕ್ ಪಟೇಲ್ ನಮ್ಮೊಂದಿಗೆ ಸೇರಿಕೊಳ್ಳಬೇಕು. ಮತ್ತು ಪಕ್ಷಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು. ಕಾಂಗ್ರೆಸ್ನಂತಹ ಪಕ್ಷದಲ್ಲಿ ಅವರಂತಹ ಸಮರ್ಪಣಾ ಮನೋಭಾವದವರಿಗೆ ಸ್ಥಾನವಿಲ್ಲ" ಎಂದು ಹೇಳಿದ್ದಾರೆ.

ಕಳೆದ ಎರಡು ದಿನಗಳಿಂದ ಹಾರ್ದಿಕ್ ಪಟೇಲ್ ಮಾತನಾಡುತ್ತಿರುವ ವೈಖರಿ ನೋಡಿದರೇ ಶೀಘ್ರವೇ ಅವರು ಕಾಂಗ್ರೆಸ್ ತೊರೆಯಲಿದ್ದಾರೆ ಎಂಬ ಸುದ್ದಿಗೆ ಪುಷ್ಟೀಕರಣ ನೀಡಿದೆ. ಹಾರ್ದಿಕ್ ಪಟೇಲ್ ಇದ್ದಕ್ಕಿದ್ದಂತೆ ಬದಲಾಗಿಲ್ಲ. ಕೆಲವು ಸಮಯದ ಹಿಂದೆ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿಯಾದ ನಂತರ ಹಾರ್ದಿಕ್ ಭಿನ್ನಾಭಿಪ್ರಾಯದ ಲಕ್ಷಣಗಳನ್ನು ತೋರಿಸಲು ಪ್ರಾರಂಭಿಸಿದರು ಎಂದು ಮೂಲಗಳು ತಿಳಿಸಿವೆ.
ಹಾರ್ದಿಕ್ ಪಟೇಲ್ ಹೇಳಿದ್ದೇನು?
ಕಾಂಗ್ರೆಸ್ ತನ್ನನ್ನು ಕಡೆಗಣಿಸಿದೆ ಎಂದು ಆರೋಪಿಸಿರುವ ಹಾರ್ದಿಕ್ ಪಟೇಲ್, ಪಿಸಿಸಿಯ ಯಾವುದೇ ಸಭೆಯಲ್ಲೂ ನನ್ನನ್ನು ಕರೆದಿಲ್ಲ ಎಂದಿದ್ದಾರೆ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ನನ್ನೊಂದಿಗೆ ಸಮಾಲೋಚನೆ ನಡೆಸಿಲ್ಲ. ಹಾಗಾದರೆ ಈ ಪೋಸ್ಟ್ನ ಅರ್ಥವೇನು? ಎಂದು ಅವರು ದೂರಿದ್ದಾರೆ. ಸೋನಿಯಾ ಗಾಂಧಿಯವರ ಸೂಚನೆಯ ಮೇರೆಗೆ ಪಕ್ಷದ ಹೈಕಮಾಂಡ್ ಹಾರ್ದಿಕ್ ಅವರನ್ನು ಗುಜರಾತ್ನಲ್ಲಿ ಕಾಂಗ್ರೆಸ್ನ ಕಾರ್ಯಾಧ್ಯಕ್ಷರನ್ನಾಗಿ ಮಾಡಿದೆ. ಹಲವು ವರ್ಷಗಳ ಹಿಂದೆ ಬಿಜೆಪಿ ವಿರುದ್ಧ ಧ್ವನಿ ಎತ್ತಿದ್ದ ಅವರು ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು.

2017ರ ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನ ಸ್ವತಃ ರಾಹುಲ್ ಗಾಂಧಿ ಹಾರ್ದಿಕ್ ಪಟೇಲ್ರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಇದರೊಂದಿಗೆ ಪಾಟೀದಾರ್ ಚಳವಳಿ ಮೂಲಕ ಗುಜರಾತ್ನಲ್ಲಿ ಅಕ್ಷರಶಃ ಬೆಂಕಿ-ಬಿರುಗಾಳಿಯನ್ನೇ ಎಬ್ಬಿಸಿದ್ದ ಚಿಗುರು ಮೀಸೆಯ ಯುವಕನನ್ನು ರಾಜಕೀಯ ಅಂಗಳಕ್ಕೆ ಎಳೆದು ತಂದಿದ್ದರು.
ಆದರೆ, ಇದೀಗ ಅದೇ ಪಕ್ಷ ಈಗ ತನ್ನನ್ನು ಬದಿಗೊತ್ತಿದೆ ಎಂದು ಆರೋಪಿಸಿರುವ ಹಾರ್ದಿಕ್ ಪಟೇಲ್, 'ರಾಜ್ಯ ಕಾಂಗ್ರೆಸ್ ಘಟಕದ ಯಾವುದೇ ಸಭೆಗೆ ತಮ್ಮನ್ನು ಆಹ್ವಾನಿಸುತ್ತಿಲ್ಲ. ಯಾವುದೇ ನಿರ್ಧಾರಗಳಿಗೂ ನನ್ನೊಂದಿಗೆ ಸಮಾಲೋಚನೆ ನಡೆಸುತ್ತಿಲ್ಲ,' ಎಂದು ದೂರಿದ್ದಾರೆ. ಪಾಟೀದಾರ್ ಸಮುದಾಯದ ಪ್ರಬಲ ನಾಯಕರಾಗಿರುವ ಹಾರ್ದಿಕ್ ಪಟೇಲ್, ಮತ್ತೋರ್ವ ಪಾಟೀದಾರ್ ನಾಯಕ ನರೇಶ್ ಪಟೇಲ್ ಪಕ್ಷ ಸೇರ್ಪಡೆಯನ್ನು ಕಾಂಗ್ರೆಸ್ ನಿಭಾಯಿಸುತ್ತಿರುವ ರೀತಿಗೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.












Click it and Unblock the Notifications