ಬೆನ್ನು ನೋವಿಗೆ ಉಚಿತ ಚಿಕಿತ್ಸೆ ಸಿಗೊಲ್ಲವೆಂದು ರಾಜೀನಾಮೆ ಹಿಂಪಡೆದ ಬಿಜೆಪಿ ಸಂಸದ

ಬರೂಚ್, ಡಿಸೆಂಬರ್ 30: ಪಕ್ಷಕ್ಕೆ ರಾಜೀನಾಮೆ ನೀಡಿದ್ದಲ್ಲದೆ, ಲೋಕಸಭೆ ಸದಸ್ಯತ್ವಕ್ಕೂ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದ ಗುಜರಾತ್‌ನ ಭರೂಚ್ ಕ್ಷೇತ್ರದ ಬಿಜೆಪಿ ಸಂಸದ ಮತ್ತು ಕೇಂದ್ರದ ಮಾಜಿ ಸಚಿವ ಮನ್ಸುಖ್ ವಾಸವ ಅವರು ಈಗ ಉಲ್ಟಾ ಹೊಡೆದಿದ್ದಾರೆ. ಬಿಜೆಪಿಗೆ ರಾಜೀನಾಮೆ ನೀಡಿದ ಮರುದಿನವೇ ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ. ಪಕ್ಷದ ಹಿರಿಯ ಮುಖಂಡರೊಂದಿಗೆ ಚರ್ಚೆ ನಡೆಸಿದ ಬಳಿಕ ಅವರು ಬಿಜೆಪಿ ತ್ಯಜಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರನ್ನು ಬುಧವಾರ ಬೆಳಿಗ್ಗೆ ಗಾಂಧಿನಗರದಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮನ್ಸುಖ್, 'ನಾನು ಸಂಸದನಾಗಿ ಮುಂದುವರಿದರೆ ಮಾತ್ರವೇ ನನ್ನ ಹಿಂಬದಿ ನೋವು ಹಾಗೂ ಕತ್ತು ನೋವಿಗೆ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು ಎಂದು ಪಕ್ಷದ ಹಿರಿಯ ನಾಯಕರು ನನಗೆ ಹೇಳಿದ್ದಾರೆ. ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಅದು ಸಾಧ್ಯವಾಗುವುದಿಲ್ಲ. ನಾನು ವಿಶ್ರಾಂತಿ ಪಡೆದುಕೊಳ್ಳುವಂತೆ ನಾಯಕರು ಸಲಹೆ ನೀಡಿದ್ದಾರೆ. ನನ್ನ ಪರವಾಗಿ ಕೆಲಸ ಮಾಡಲು ಸ್ಥಳೀಯ ಮಟ್ಟದ ಪಕ್ಷದ ಕಾರ್ಯಕರ್ತರ ನಡುವೆ ವ್ಯವಸ್ಥೆಯೊಂದನ್ನು ಒದಗಿಸುವ ಭರವಸೆ ನೀಡಿದ್ದಾರೆ' ಎಂದು ಹೇಳಿದ್ದಾರೆ.

'ನಾನು ಪಕ್ಷ ಮತ್ತು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಲು ನನ್ನ ಆರೋಗ್ಯ ಸಮಸ್ಯೆಗಳು ಕಾರಣ. ಇಂದು ಸಿಎಂ ಜತೆ ಅದನ್ನೇ ಚರ್ಚಿಸಿದ್ದೆ. ಹಿರಿಯ ಬಿಜೆಪಿ ನಾಯಕರಿಂದ ಭರವಸೆ ದೊರೆತ ಬಳಿಕ ನಾನು ರಾಜೀನಾಮೆಯನ್ನು ವಾಪಸ್ ಪಡೆದುಕೊಳ್ಳಲು ನಿರ್ಧರಿಸಿದ್ದೇನೆ. ಸಂಸದನಾಗಿ ನಾನು ಜನರ ಸೇವೆ ಮುಂದುವರಿಸುತ್ತೇನೆ' ಎಂದು ತಿಳಿಸಿದ್ದಾರೆ. ಮುಂದೆ ಓದಿ.

ಪಕ್ಷದ ಮೇಲೆ ಕೋಪ-ತಪ್ಪು ಕಲ್ಪನೆ

ಪಕ್ಷದ ಮೇಲೆ ಕೋಪ-ತಪ್ಪು ಕಲ್ಪನೆ

ನರ್ಮದಾ ಜಿಲ್ಲೆಯಲ್ಲಿ 121 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಸೇರಿಸಿದ್ದು ಸೇರಿದಂತೆ ಅಲ್ಲಿನ ಬುಡಕಟ್ಟು ಜನರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿದ್ದರು ಎಂಬ ತಪ್ಪು ಕಲ್ಪನೆಗಳನ್ನು ಹಬ್ಬಿಸಲಾಗಿತ್ತು ಎಂದು ವಾಸವ ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿಯಿಂದ ಹೆಚ್ಚು ಪ್ರಯೋಜನ

ಬಿಜೆಪಿಯಿಂದ ಹೆಚ್ಚು ಪ್ರಯೋಜನ

'ಪರಿಸರ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿವೆ. ನನಗೆ ಪಕ್ಷ ಅಥವಾ ಸರ್ಕಾರದ ಬಗ್ಗೆ ಯಾವ ಸಮಸ್ಯೆಯೂ ಇಲ್ಲ. ಹಿಂದಿನ ಯಾವ ಸರ್ಕಾರಕ್ಕೆ ಹೋಲಿಸಿದರೂ ಬಿಜೆಪಿ ಸರ್ಕಾರದ ಅಧಿಕಾರದಲ್ಲಿ ಬುಡಕಟ್ಟು ಜನರಿಗೆ ಹೆಚ್ಚಿನ ಪ್ರಯೋಜನವಾಗಿದೆ ಎಂದು ದೃಢವಾಗಿ ನಂಬಿದ್ದೇನೆ' ಎಂಬುದಾಗಿ ಬುಡಕಟ್ಟು ಮುಖಂಡರಾಗಿರುವ ವಾಸವ ತಿಳಿಸಿದ್ದಾರೆ.

ತಪ್ಪುಗಳಿಂದ ಹಾನಿಯಾಗಬಾರದು

ತಪ್ಪುಗಳಿಂದ ಹಾನಿಯಾಗಬಾರದು

'ನಾನು ಪಕ್ಷಕ್ಕೆ ನಿಷ್ಠನಾಗಿದ್ದೇನೆ. ನಾನು ಪಕ್ಷದ ಮೌಲ್ಯಗಳ ಕಾಳಜಿ ವಹಿಸಿದ್ದೆ. ಆದರೆ ಎಷ್ಟಾದರೂ ನಾನು ಸಾಮಾನ್ಯ ಮನುಷ್ಯ. ಗೊತ್ತಿದ್ದೋ, ಗೊತ್ತಿಲ್ಲದೆಯೋ ಮನುಷ್ಯ ತಪ್ಪುಗಳನ್ನು ಮಾಡುತ್ತಾನೆ. ನನ್ನ ತಪ್ಪುಗಳು ಪಕ್ಷಕ್ಕೆ ಹಾನಿಯುಂಟುಮಾಡಬಾರದು ಎಂದು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ' ಎಂದು ಅವರು ರಾಜೀನಾಮೆ ಪತ್ರದಲ್ಲಿ ಹೇಳಿದ್ದರು.

ಜನರೊಂದಿಗೆ ಇರಲು ಆಗುತ್ತಿಲ್ಲ

ಜನರೊಂದಿಗೆ ಇರಲು ಆಗುತ್ತಿಲ್ಲ

ಆದರೆ, 'ತಪ್ಪುಗಳು' ಎಂಬ ಪದದ ಅರ್ಥ ಏನು ಎಂಬುದನ್ನು ವಿವರಿಸಲು ಮುಂದಾಗದ ಅವರು, 'ನಾನು ಸಂಸದನಾಗಿದ್ದರೂ ಹೆಚ್ಚು ಪ್ರಯಾಣಿಸಲು ಮತ್ತು ನನ್ನ ಜನರ ಜತೆಗೆ ಇರಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ನನ್ನ ಹಿಂಬದಿ ನೋವು. ಅದು ನನ್ನ ಮೆದುಳಿನ ಕೆಲಸ ಮೇಲೆಯೂ ಪರಿಣಾಮ ಬೀರುತ್ತಿದೆ. ನನ್ನ ಸ್ಥಾನವು ಬದಲಿಸಲಾಗದಂತದ್ದಲ್ಲ. ಮಧ್ಯಂತರ ಚುನಾವಣೆಯನ್ನು ಯಾವಾಗ ಬೇಕಾದರೂ ಘೋಷಿಸಬಹುದು. ನನ್ನ ಜನರನ್ನು ಸಂಪರ್ಕಿಸಲು ಸಾಧ್ಯವಾಗದೆ ಇದ್ದರೆ ನಾನು ಸಂಸದನಾಗಿ ಮುಂದುವರಿಯಬಾರದು. ನನ್ನ ನಿರ್ಧಾರಕ್ಕೂ ಪರಿಸರ ಸೂಕ್ಷ್ಮ ವಲಯದ ವಿಚಾರಕ್ಕೂ ಸಂಬಂಧವೇ ಇಲ್ಲ' ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+