ಕೊರೊನಾ ಲಸಿಕೆ ಹಾಕಿಸಿಕೊಳ್ಳದವರಿಗೆ ಇಲ್ಲಿ ಸಾರ್ವಜನಿಕ ಸೇವೆಗಳ ನಿರ್ಬಂಧ
ಅಹಮದಾಬಾದ್, ಸೆಪ್ಟೆಂಬರ್ 20: ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಕೊರೊನಾ ಲಸಿಕೆ ಪಡೆಯುವುದು ಅವಶ್ಯಕವಾಗಿದೆ ಎಂದು ಸರ್ಕಾರ ಲಸಿಕೆ ಅಭಿಯಾನ ಸಂಬಂಧ ಹಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಇದರೊಂದಿಗೆ ಗುಜರಾತ್ನ ಅಹಮದಾಬಾದ್ ನಗರದಲ್ಲಿ ಜನರು ಕೊರೊನಾ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವಂತೆ ಮಾಡಲು ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.
ಕೊರೊನಾ ಲಸಿಕೆಯನ್ನು ಪಡೆದುಕೊಳ್ಳದವರಿಗೆ ಸಾರ್ವಜನಿಕ ಸಾರಿಗೆ ಹಾಗೂ ಇತರೆ ಸಾರ್ವಜನಿಕ ಸೌಲಭ್ಯಗಳ ಬಳಕೆಗೆ ನಿಷೇಧ ಹೇರಲಾಗಿದೆ. ಅಹಮದಾಬಾದ್ ನಗರ ಪಾಲಿಕೆ ಕೊರೊನಾ ಲಸಿಕೆ ಪಡೆಯದವರಿಗೆ ಸಾರ್ವಜನಿಕ ಸೌಲಭ್ಯಗಳ ಬಳಕೆಗೆ ತಡೆ ಒಡ್ಡಿದೆ. ಸಾರ್ವಜನಿಕ ಕಟ್ಟಡಗಳಿಗೂ ಪ್ರವೇಶ ನಿರ್ಬಂಧಿಸಿದೆ.

ಅಹಮದಾಬಾದ್ನಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಲು ಆದೇಶಿಸಲಾಗಿದ್ದು, ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಅಥವಾ ಮೊಬೈಲ್ನಲ್ಲಿ ಅದರ ಇ ಕಾಪಿಯನ್ನು ಇಟ್ಟುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಈ ಪ್ರಮಾಣಪತ್ರವನ್ನು ಪರಿಶೀಲಸಲಾಗುವುದು.
ಅಹಮದಾಬಾದ್ ಪಾಲಿಕೆ ಸಾರಿಗೆ ಸೇವೆ, ಬಸ್ ಸೇವೆ, ಕಂಕಾರಿಯಾ ಲೇಕ್ಫ್ರಂಟ್, ರಿವರ್ ಫ್ರಂಟ್, ಲೈಬ್ರರಿ, ಜಿಮ್, ಕ್ರೀಡಾ ಸಂಕೀರ್ಣ, ಸ್ವಿಮ್ಮಿಂಗ್ ಪೂಲ್ ಈ ಎಲ್ಲಾ ಕಡೆಯೂ ಲಸಿಕೆ ಪಡೆಯದವರಿಗೆ ಪ್ರವೇಶ ಇರುವುದಿಲ್ಲ ಎಂದು ಆದೇಶ ಹೊರಡಿಸಲಾಗಿದೆ.
ಏಕೆ ಈ ತೀರ್ಮಾನವನ್ನು ಕೈಗೊಳ್ಳಲಾಯಿತು?:
ಲಸಿಕೆ ಕುರಿತು ಜನರಲ್ಲಿ ಕೆಲವು ತಪ್ಪು ಕಲ್ಪನೆಗಳಿವೆ. ಹೀಗಾಗಿ ಲಸಿಕೆ ಹಾಕಿಸಿಕೊಳ್ಳಲು ಅವರು ಹಿಂದೇಟು ಹಾಕುತ್ತಿದ್ದಾರೆ. ಇದನ್ನು ತಪ್ಪಿಸಲು ಲಸಿಕಾ ಅಭಿಯಾನವನ್ನು ತೀವ್ರಗೊಳಿಸಲಾಗಿದೆ.

ಒಂದು ಡೋಸ್ ಲಸಿಕೆ ಪಡೆದವರಿಗೂ ಈ ನಾಗರಿಕ ಸಾರಿಗೆ ಸೇವೆ ಹಾಗೂ ಕಟ್ಟಡಗಳ ಪ್ರವೇಶಕ್ಕೆ ಅನುಮತಿ ಕಲ್ಪಿಸಿಲ್ಲ. ಸಂಪೂರ್ಣ ಎರಡು ಡೋಸ್ಗಳನ್ನು ಪಡೆಯಬೇಕೆಂಬ ನಿಯಮ ಹೇರಲಾಗಿದೆ.
ಸ್ವಿಮ್ಮಿಂಗ್ ಪೂಲ್, ಜಿಮ್, ಕ್ರೀಡಾ ಸಂಕೀರ್ಣ, ನಗರ ಕೇಂದ್ರ, ಅಹಮದಾಬಾದ್ ಸಾರಿಗೆ ಸೇವೆ ಈ ಸೌಲಭ್ಯಗಳನ್ನು ಪಡೆಯಲು ಎರಡು ಡೋಸ್ ಕೊರೊನಾ ಲಸಿಕೆ ಪಡೆಯುವುದು ಅವಶ್ಯವಾಗಿದೆ.
ಗುಜರಾತ್ನಲ್ಲಿ ಕೊರೊನಾ ಪ್ರಕರಣ:
ಒಂಬತ್ತು ತಿಂಗಳ ನಂತರ ಮೊದಲ ಬಾರಿ ಗುಜರಾತ್ನಲ್ಲಿ ಭಾನುವಾರ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಏಕ ಅಂಕಿಗೆ ಇಳಿದಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಎಂಟು ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸೂರತ್ನಲ್ಲಿ 4, ವಡೋದರದಲ್ಲಿ 3, ವಲ್ಸಾದ್ನಲ್ಲಿ 1 ಪ್ರಕರಣ ದಾಖಲಾಗಿದೆ. ಒಟ್ಟಾರೆ ಪ್ರಕರಣಗಳ ಸಂಖ್ಯೆ 825723 ಆಗಿದೆ. ಒಟ್ಟು ಮರಣ ಪ್ರಮಾಣ 10082 ಆಗಿದೆ. ಸೆಪ್ಟೆಂಬರ್ 4ರಿಂದ ಕೊರೊನಾ ಸೋಂಕಿನಿಂದ ರಾಜ್ಯದಲ್ಲಿ ಯಾರೂ ಮೃತಪಟ್ಟಿಲ್ಲ ಎಂದು ಇಲಾಖೆ ಮಾಹಿತಿ ನೀಡಿದೆ.
ಭಾರತದಲ್ಲಿ ಕೊರೊನಾ ಪ್ರಕರಣ:
ಸೋಮವಾರ ಭಾರತದಲ್ಲಿ 30,256 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 24 ಗಂಟೆಯಲ್ಲಿ 43,938 ಜನರು ಗುಣಮುಖರಾಗಿದ್ದು, ಒಂದು ದಿನದ ಅವಧಿಯಲ್ಲಿ 295 ಜನರು ಸಾವನ್ನಪ್ಪಿದ್ದಾರೆ. ಭಾರತದ ಒಟ್ಟು ಪ್ರಕರಣಗಳ ಸಂಖ್ಯೆ 33,478,419. ಸಕ್ರಿಯ ಪ್ರಕರಣಗಳು 3,18,181 ಆಗಿದ್ದು, ಇದುವರೆಗೂ 3,27,15,105 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಮೃತಪಟ್ಟವರ ಸಂಖ್ಯೆ 4,45,133 ಆಗಿದೆ.
ಭಾನುವಾರ ಕೊನೆಗೊಂಡಂತೆ ದೇಶದಲ್ಲಿ ವಾರದ ಒಟ್ಟಾರೆ ಹೊಸ ಕೊರೊನಾ ಪ್ರಕರಣಗಳಲ್ಲಿ 15% ಇಳಿಕೆ ದಾಖಲಾಗಿದ್ದು, ಆರು ತಿಂಗಳ ನಂತರ ಈ ಇಳಿಕೆ ಕಂಡುಬಂದಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ವಾರದ ಕೊರೊನಾ ಪಾಸಿಟಿವಿಟಿ ದರವು ಶೇ 2.04ರಷ್ಟಿದೆ. ಕಳೆದ 86 ದಿನಗಳಲ್ಲಿ 3%ಕ್ಕಿಂತ ದಾಖಲಾದ ಕಡಿಮೆ ಪಾಸಿಟಿವಿಟಿ ದರ ಇದಾಗಿದೆ. ಸೋಂಕಿನಿಂದ ಚೇತರಿಕೆ ಪ್ರಮಾಣವು ಶೇಕಡಾ 97.68ರಷ್ಟಿದೆ. ಮಿಜೋರಾಂ, ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ 10,000ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ.












Click it and Unblock the Notifications