2002ರ ಗುಜರಾತ್ ಹತ್ಯಾಕಾಂಡ : ಬಾಬು ಬಜರಂಗಿಗೆ ಜಾಮೀನು
ನವದೆಹಲಿ, ಮಾರ್ಚ್ 07: 2002ರಲ್ಲಿ ಗುಜರಾತಿನ ನರೋಡಾ -ಪಾಟಿಯಾದಲ್ಲಿನ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಜರಂಗ ದಳ ಮುಖಂಡ ಬಾಬು ಬಜರಂಗಿಗೆ ವೈದ್ಯಕೀಯ ಆಧಾರದ ಮೇಲೆ ಸುಪ್ರೀಂಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.
ಈ ಪ್ರಕರಣದ ಪ್ರಮುಖ ಅಪರಾಧಿಗಳಾದ ಉಮೇಶ್ಭಾಯಿ ಭರ್ವಾಡ್, ರಾಜ್ಕುಮಾರ್, ಹರ್ಷದ್ ಮತ್ತು ಪ್ರಕಾಶ್ಭಾಯಿ ರಾಥೋಡ್ಗೆ 10 ವರ್ಷಗಳ ಶಿಕ್ಷೆಗೆ ವಿಧಿಸಲಾಗಿದೆ. ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಸಂಪುಟದ ಪ್ರಮುಖ ಸಚಿವೆ ಮಾಯಾ ಕೊಡ್ನಾನಿ ಅವರ ಪರ ಇಂದಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸಾಕ್ಷಿ ಹೇಳಿದ್ದರಿಂದ ಮಾಯಾ ಅವರು ಶಿಕ್ಷೆಯಿಂದ ಬಚಾವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಮಿತ್ ಶಾ ನೀಡಿದ ಸಾಕ್ಷಿಗೆ ಬೆಲೆ, ಮಾಯಾ ನಿರ್ದೋಷಿ!
ಗುಜರಾತ್ ಹೈಕೋರ್ಟಿನಲ್ಲಿ ಮಾಜಿ ಬಜರಂಗ ದಳ ಮುಖಂಡ ಬಾಬು ಬಜರಂಗಿ ಹಾಗೂ ಇತರರು ಸೇರಿದಂತೆ 32 ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಲಾಗಿತ್ತು. ಬಾಬು ಬಜರಂಗಿ ಸೇರಿದಂತೆ 16 ಜನರಿಗೆ ಶಿಕ್ಷೆ ವಿಧಿಸಿದ್ದ ನ್ಯಾಯಾಲಯ ಬಿಜೆಪಿಯ ಮಾಜಿ ಸಚಿವೆ ಮಾಯಾ ಕೊಡ್ನಾನಿ ಅವರು ಸೇರಿದಂತೆ ಇತರೆ 18 ಜನರನ್ನು ಖುಲಾಸೆಗೊಳಿಸಿತ್ತು. ಸಬರಮತಿ ಕೇಂದ್ರ ಜೈಲನಲ್ಲಿ 2012ರಿಂದ ನೆಲೆಸಿರುವ ಬಜರಂಗಿ 21 ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದರು.
ಗುಜರಾತ್ ಸರ್ಕಾರದಿಂದ ಸುಪ್ರೀಂಗೆ ಮಾಹಿತಿ
ಬಜರಂಗಿ ಆರೋಗ್ಯ ಕ್ಷೀಣಿಸುತ್ತಿದ್ದು, ಜಾಮೀನು ಮಂಜೂರು ಮಾಡಲು ಯಾವುದೇ ಆಕ್ಷೇಪವಿಲ್ಲ ಎಂದು ಸುಪ್ರೀಂಕೋರ್ಟಿಗೆ ಗುಜರಾತ್ ಸರ್ಕಾರ ತಿಳಿಸಿದೆ. ಉಮೇಶ್ ಭಾಯಿ ಸುರಾಭಾಯಿ ಭಾರ್ ವಾಡ್, ರಾಜ್ ಕುಮಾರ್, ಪದ್ಮೇಂದ್ರಸಿನ್ ಜಸ್ವಂತ್ ಸಿನ್ ರಾಜ್ ಪೂಟ್ ಹಾಗೂ ಹರ್ಷದ್ ಅಲಿಯಾಸ್ ಮುಂಗ್ಡಾ ಜಿಲಾ ಗೋವಿಂದ್ ಛಾರಾ ಪರ್ಮಾರ್ ಅವರಿಗೆ ಜನವರಿ 23, 2019ರಂದು ಜಾಮೀನು ಸಿಕ್ಕಿದೆ.
2002ರ ಗೋಧ್ರಾ ಹತ್ಯಾಕಾಂಡ Timeline
ಎಕ್ಸ್ ಪ್ರೆಸ್ ಬೋಗಿಗೆ ಬೆಂಕಿ ಹಚ್ಚಿದ ಕೇಸ್
ಗೋಧ್ರಾ ರೈಲ್ವೆ ನಿಲ್ದಾಣದಲ್ಲಿ ಸಬರಮತಿ ಎಕ್ಸ್ಪ್ರೆಸ್ನ ಬೋಗಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 59 ಜನ ಹಿಂದು ಪ್ರಯಾಣಿಕರು ಸಜೀವ ದಹನಗೊಂಡಿದ್ದರು. ಇದಾದ ಬಳಿಕ 2002ರ ಫೆ. 28ರಂದು ಅಹ್ಮದಾಬಾದ್ ಸಮೀಪದ ನರೋಡಾ ಪಾಟಿಯಾದಲ್ಲಿ ನಡೆದ ಕೋಮು ಗಲಭೆಯಲ್ಲಿ ಸುಮಾರು 97 ಜನ ಮುಸ್ಲಿಂರನ್ನು ಹತ್ಯೆ ಮಾಡಲಾಗಿತ್ತು.
'ಮುಖ್ಯಮಂತ್ರಿ ಮೋದಿ ಎಂದಿಗೂ ಜನರನ್ನು ಸಾಯಿಸಿ ಅನ್ನಲಿಲ್ಲ'
ಮೋದಿ ಆಪ್ತೆ ಮಾಯಾ ಕೊಡ್ನಾನಿ ಆರೋಪಿ
ಮೋದಿ ಸರ್ಕಾರ ಮಾಜಿ ಸಚಿವೆ(ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ) ಹಾಗೂ ನರೋಡಾ ಪಾಟಿಯಾದ ಶಾಸಕಿ ಮಾಯಾ ಕೊಡ್ನಾನಿ, ವಿಹಿಂಪದ ಮಾಜಿ ಮುಖಂಡ ಬಾಬು ಬಜರಂಗಿ, ಸ್ಥಳೀಯ ಬಿಜೆಪಿ ನಾಯಕರಾದ ಬಿಪಿನ್ ಪಂಚಾಲ್, ಕಿಶನ್ ಕೊರಾನಿ, ಅಶೋಕ್ ಸಿಂಧಿ ಮತ್ತು ರಾಜು ಚುಮಾಲ್ ಸೇರಿದಂತೆ 62 ಮಂದಿ ಇಲ್ಲಿ ಆರೋಪಿಗಳಾಗಿದ್ದರು.
ವಿಎಚ್ ಪಿ ಕರೆ ನೀಡಿದ್ದ ಬಂದ್ ವೇಳೆ ಘಟನೆ
ಗೋಧ್ರಾ ಹತ್ಯಾಕಾಂಡದ ಬಳಿಕ ನಡೆದ ಹಿಂಸಾಚಾರದಲ್ಲಿ ಈ ಘಟನೆ ನಡೆದಿತ್ತು. ಪ್ರಕರಣದ ವಿಚಾರಣೆ 2009ರ ಆಗಸ್ಟ್ ನಲ್ಲಿ ಪ್ರಾರಂಭವಾಗಿತ್ತು. ಗೋಧ್ರಾ ರೈಲು ದುರಂತದ ಮರು ದಿನ ನಗರದ ನರೋಡಾ ಪಾಟಿಯಾ ಪ್ರದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ 97 ಜನರನ್ನು ಉದ್ರಿಕ ಗುಂಪೊಂದು ಹತ್ಯೆ ಮಾಡಿತ್ತು. ಸಬರಮತಿ ರೈಲು ದುರಂತ ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಬಂದ್ಗೆ ಕರೆ ನೀಡಿದ್ದ ವೇಳೆಯಲ್ಲಿ ಈ ಹತ್ಯಾಕಾಂಡ ನಡೆದಿತ್ತು.
ಈ ಬಗ್ಗೆ ಪಾಪಪ್ರಜ್ಞೆ ಕಾಡುತ್ತಿಲ್ಲ ಎಂದಿದ್ದ ಮೋದಿ
ಫೆಬ್ರವರಿ 2002ರಲ್ಲಿ ಕರಸೇವಕರು ಪ್ರಯಾಣಿಸುತ್ತಿದ್ದ ಸಬರಮತಿ ರೈಲಿನ ಮೇಲೆ ಬೆಂಕಿ ಹಚ್ಚಲಾಯಿತು. ಆ ಘಟನೆ ಗುಜರಾತಿನಲ್ಲಿ ಭಾರೀ ಹಿಂಸಾಚಾರಕ್ಕೆ ನಾಂದಿ ಹಾಡಿತು. ಮೋದಿ ಆ ಸಮಯದಲ್ಲಿ ಅಕ್ಕಪಕ್ಕದ ರಾಜ್ಯಗಳ ಸಹಕಾರ ಕೋರಿದ್ದರು, ಅಲ್ಲದೇ ಸೇನೆಯನ್ನೂ ಸಜ್ಜಾಗಿರಲು ಸೂಚಿಸಿದ್ದರು ಎಂದು" ನರೇಂದ್ರ ಮೋದಿ ಎ ಪೊಲಿಟಿಕಲ್ ಬಯೋಗ್ರಫಿ' ಜೀವನ ಚರಿತ್ರೆಯಲ್ಲಿ ಹೇಳಲಾಗಿದೆ. 2002ರಲ್ಲಿ ಗುಜರಾತಿನಲ್ಲಿ ನಡೆದ ಹಿಂಸಾಚಾರ ನನ್ನ ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿದೆ. ಆದರೆ ಆ ಬಗ್ಗೆ ನನಗೆ ಪಾಪಪ್ರಜ್ಞೆ ಕಾಡುತ್ತಿಲ್ಲ ಎಂದು ಮೋದಿ ಹೇಳಿದ್ದರು.