ಮೊಘಲರು ನಮ್ಮ ಹೀರೋಗಳಾಗಲು ಹೇಗೆ ಸಾಧ್ಯ?: ಯೋಗಿ ಆದಿತ್ಯನಾಥ್
ಆಗ್ರಾ, ಸೆಪ್ಟೆಂಬರ್ 15: ಉತ್ತರ ಪ್ರದೇಶದ ಐತಿಹಾಸಿಕ ಆಗ್ರಾ ನಗರದಲ್ಲಿ ನಿರ್ಮಾಣವಾಗುತ್ತಿರುವ ಮೊಘಲ್ ಮ್ಯೂಸಿಯಂಗೆ ಛತ್ರಪತಿ ಶಿವಾಜಿ ಮಹಾರಾಜ್ ಹೆಸರು ಇಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ತಿಳಿಸಿದ್ದಾರೆ. ಮೊಘಲರ ಕಾಲದ ಆಡಳಿತದ ವಸ್ತುಗಳನ್ನು ಪ್ರದರ್ಶನಕ್ಕೆ ಇಡುವ ಈ ಮ್ಯೂಸಿಯಂಗೆ 'ಮೊಘಲ್ ಮ್ಯೂಸಿಯಂ' ಎಂದೇ ಹೆಸರಿಡಲು ಉದ್ದೇಶಿಸಲಾಗಿತ್ತು. ಆದರೆ ಯೋಗಿ, ಹೆಸರು ಬದಲಿಸುವುದಾಗಿ ತಿಳಿಸಿದ್ದಾರೆ.
ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲನೆ ನಡೆಸಿದ ಅವರು, 'ಮೊಘಲರು ನಮ್ಮ ಹೀರೋಗಳಾಗಲು ಹೇಗೆ ಸಾಧ್ಯ?' ಎಂದು ಪ್ರಶ್ನಿಸಿದರು. ಮಾನಸಿಕ ದಾಸ್ಯತನ ಎನಿಸುವ ಯಾವುದೇ ಸಂಗತಿಗಳನ್ನಾದರೂ ತಮ್ಮ ಸರ್ಕಾರ ತೆಗೆದುಹಾಕಲಿದೆ ಎಂದು ಹೇಳಿದರು.
ಯೋಗಿ ಆದಿತ್ಯನಾಥ್ ಸರ್ಕಾರದಡಿ ಉತ್ತರ ಪ್ರದೇಶದ ಅನೇಕ ಪ್ರದೇಶಗಳ ಹೆಸರುಗಳನ್ನು ಬದಲಿಸಲಾಗಿದೆ. ಅಲಹಾಬಾದ್ ಈಗ ಪ್ರಯಾಗ್ ರಾಜ್ ಆಗಿ ಬದಲಾಗಿದೆ. ಉತ್ತರ ಪ್ರದೇಶದಲ್ಲಿ ದಾಸ್ಯ ಮನೋಭಾವದ ಸಂಕೇತಕ್ಕೆ ಜಾಗವಿಲ್ಲ ಎಂದು ಯೋಗಿ ಹೇಳಿದ್ದಾರೆ.

'ಆಗ್ರಾದಲ್ಲಿ ನಿರ್ಮಾಣ ಹಂತದಲ್ಲಿರುವ ವಸ್ತು ಸಂಗ್ರಹಾಲಯಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ಹೆಸರು ನಾಮಕರಣ ಮಾಡಲಾಗುವುದು. ನಿಮ್ಮ ಹೊಸ ಉತ್ತರ ಪ್ರದೇಶದಲ್ಲಿ ಮಾನಸಿಕ ಗುಲಾಮಗಿರಿಯ ಸಂಕೇತಗಳಿಗೆ ಯಾವುದೇ ಜಾಗವಿಲ್ಲ. ಶಿವಾಜಿ ಮಹಾರಾಜ್ ನಮ್ಮ ಹೀರೋ. ಜೈ ಹಿಂದ್, ಜೈ ಭಾರತ್' ಎಂದು ಯೋಗಿ ಟ್ವೀಟ್ ಮಾಡಿದ್ದಾರೆ.
ಆಗ್ರಾ ನಗರದಲ್ಲಿ ತಾಜ್ ಮಹಲ್ ಸಮೀಪದಲ್ಲಿ ಆರು ಎಕರೆ ಪ್ರದೇಶದಲ್ಲಿ ಈ ಮ್ಯೂಸಿಯಂ ನಿರ್ಮಾಣವಾಗುತ್ತಿದೆ. ಈ ಯೋಜನೆಗೆ 2015ರಲ್ಲಿ ಅಖಿಲೇಶ್ ಯಾದವ್ ಸರ್ಕಾರ ಅನುಮತಿ ನೀಡಿತ್ತು. ಮೊಘಲರ ಕಾಲದ ಸಂಸ್ಕೃತಿ, ಚಿತ್ರಕಲೆ, ಅಡುಗೆ,ದಿರಿಸು, ಯುದ್ಧೋಪಕರಣಗಳು ಮುಂತಾದವುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗುತ್ತದೆ.












Click it and Unblock the Notifications