ಕರ್ನಾಟಕದ ಮೇಲೆ ರಾಹುಲ್ ಗಾಂಧಿ ಕಣ್ಣು!
ಬೆಂಗಳೂರು, ಸೆ.3 : ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚು ಸ್ಥಾನಗಳಿಸುವ ಕುರಿತು ಚಿಂತಿಸುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ರಾಜ್ಯದ ಮೂಲೆ ಮೂಲೆ ತಿರುಗಿ ಪಕ್ಷಗಳಿಸುವ ಸ್ಥಾನದ ಕುರಿತು ವರದಿ ತಯಾರಿಸಲು ತಂಡವೊಂದನ್ನು ರಾಜ್ಯಕ್ಕೆ ಕಳುಹಿಸಲಿದ್ದಾರೆ.
ಸಮೀಕ್ಷೆ ನಡೆಸುವುದರಲ್ಲಿ ಪರಿಣಿತಿ ಪಡೆದಿರುವ ರಾಹುಲ್ ಗಾಂಧಿ ಆಪ್ತಪಡೆ ಸೆಪ್ಟೆಂಬರ್ ಕೊನೆ ಅಥವ ಅಕ್ಟೋಬರ್ ಮೊದಲವಾರದಲ್ಲಿ ರಾಜ್ಯಕ್ಕೆ ಆಗಮಿಸಿ, ಕಾಂಗ್ರೆಸ್ ಪಕ್ಷದ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಿ ರಾಹುಲ್ ಗಾಂಧಿ ಅವರಿಗೆ ವರದಿ ನೀಡಲಿದೆ.

ಈಗಾಗಲೇ ವಿಧಾನಸಭೆ ಮತ್ತು ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಜಯಗಳಿಸಿ ಹೆಮ್ಮೆಯಿಂದ ಬೀಗುತ್ತಿದೆ. ಇಂತಹ ಫಲಿತಾಂದವನ್ನು ರಾಹುಲ್ ಲೋಕಸಭೆ ಚುನಾವಣೆಯಲ್ಲಿಯೂ ರಾಜ್ಯದಿಂದ ನಿರೀಕ್ಷಿಸುತ್ತಿದ್ದಾರೆ.
ಆದ್ದರಿಂದ ರಾಜ್ಯದಲ್ಲಿ ಸಮೀಕ್ಷೆ ನಡೆಸಿ, ಪಕ್ಷ ಗಳಿಸುವ ಸ್ಥಾನ ಮಾನಗಳ ಬಗ್ಗೆ ವರದಿ ಪಡೆದು, ರಾಜ್ಯ ನಾಯಕರಿಗೆ ಪಕ್ಷ ಸಂಘಟನೆ ಬಗ್ಗೆ ಸಲಹೆ ನೀಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷನ ಕಣ್ಣು ಕರ್ನಾಟಕ ಮೇಲೆ ಬಿದ್ದಿರುವುದರಿಂದ ರಾಜ್ಯ ಕಾಂಗ್ರೆಸ್ ನಲ್ಲೂ ಹೊಸ ಸಂಚಲನ ಸೃಷ್ಟಿಯಾಗಿದೆ.
ರಹಸ್ಯ ಸಮೀಕ್ಷೆ : ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಬೆಂಗಳೂರಿನ ಖಾಸಗಿ ಏಜೆನ್ಸಿಯೊಂದು ಈಗಾಗಲೇ ರಾಜ್ಯದ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಪಕ್ಷಕ್ಕೆ ಎಷ್ಟು ಸ್ಥಾನ ದೊರೆಯಬಹುದು ಎಂದು ರಹಸ್ಯ ವರದಿಯನ್ನು ತಯಾರಿಸುತ್ತಿದೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೂ ಖಾಸಗಿ ಏಜೆನ್ಸಿ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಬಲಾಬಲದ ಕುರಿತು ರಾಹುಲ್ ಗಾಂಧಿ ವರದಿ ಪಡೆದಿದ್ದರು. ಅದರ ಆಧಾರದ ಮೇಲೆಯೇ ಚುನಾವಣೆ ತಂತ್ರ ರೂಪಿಸಿದ್ದರು ಎಂದು ತಿಳಿದುಬಂದಿದೆ.
ಈ ವರದಿಯನ್ನು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿಯೂ ಗಂಭೀರವಾಗಿ ಪರಿಗಣಿಸಲಾಗಿತ್ತು. ಸದ್ಯ ಲೋಕಸಭೆ ಚುನಾವಣೆಗೂ ಅದೇ ಮಾದರಿ ಅನುಸರಿಸಲು ರಾಹುಲ್ ಚಿಂತನೆ ನಡೆಸಿದ್ದು, ಸಮೀಕ್ಷಾ ತಂಡವನ್ನು ರಾಜ್ಯಕ್ಕೆ ಕಳುಹಿಸುತ್ತಿದ್ದಾರೆ.
ಕಾಂಗ್ರೆಸ್ ನಲ್ಲಿ ಸಂಚಲನ : ಪಕ್ಷದ ಉಪಾಧ್ಯಕ್ಷನ ಕಣ್ಣು ರಾಜ್ಯದ ಮೇಲೆ ಬಿದ್ದಿದೆ ಎಂಬ ಸುದ್ದಿಯಿಂದಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ಸಂಚಲನ ಉಂಟಾಗಿದೆ. ಲೋಕಸಭೆ ಅಭ್ಯರ್ಥಿಗಳ ಪಟ್ಟಿ ತಯಾರಿಸಲು ಕೆಪಿಸಿಸಿ ರಚಿಸಿದ್ದ ಸಮಿತಿ ಮೈಚಳಿ ಬಿಟ್ಟು ಕೆಲಸ ಪ್ರಾರಂಭಿಸಿದೆ. ಒಂದು ಕ್ಷೇತ್ರದಲ್ಲಿ ಮೂರರಿಂದ ಐವರು ಅಭ್ಯರ್ಥಿಗಳನ್ನು ಹುಡುಕುವ ಜವಾಬ್ದಾರಿ ಸಮಿತಿ ಮೇಲಿದೆ.
20 ಟಾರ್ಗೆಟ್ : ರಾಹುಲ್ ಗಾಂಧಿ ಕರ್ನಾಟಕದಲ್ಲಿ 20 ಸ್ಥಾನಗಳನ್ನು ಗೆಲ್ಲಬೇಕು ಎಂದು ಯೋಜನೆ ರೂಪಿಸಿದ್ದಾರೆ. ಅದರಲ್ಲೂ ಜೆಡಿಎಸ್ ಹಾಗೂ ಬಿಜೆಪಿ ಭದ್ರಕೋಟೆಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications