ಕೇಂದ್ರಾಡಳಿತ ಪ್ರದೇಶವಾಗಿ ಹೈದರಾಬಾದ್?
ನವದೆಹಲಿ, ಸೆ.3: ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ವಿವಾದ ಕೇಂದ್ರ ಬಿಂದು ಹೈದರಾಬಾದ್ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವುದು ಸ್ಪಷ್ಟವಾಗಿದೆ. ಸದ್ಯಕ್ಕೆ ಈ ವಿಷಯ ಗೃಹ ಸಚಿವಾಲಯದಲ್ಲಿ ಚರ್ಚೆಗೊಳಪಡುತ್ತಿದೆ.
ಕೇಂದ್ರ ಗೃಹ ಸಚಿವಾಲಯದ ಮೂಲಗಳ ಪ್ರಕಾರ. ಈಗಾಗಲೇ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಕ್ಯಾಬಿನೆಟ್ ಟಿಪ್ಪಣಿ ಸಿದ್ಧಪಡಿಸಿದ್ದು, ಇದರಲ್ಲಿ ಹೈದರಾಬಾದ್ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡುವ ಬಗ್ಗೆ ಸೇರ್ಪಡೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಇನ್ನು 20 ದಿನಗಳಲ್ಲಿ ಈ ನೋಟ್ ಹೊರಬೀಳಲಿದ್ದು ತೆಲಂಗಾಣ ರಾಜ್ಯದ ರೂಪುರೇಷೆಗಳ ಬಗ್ಗೆ ಹೇಳಲಿದೆ. ಈ ಮೂಲಕ ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಚರ್ಚೆ ನಡೆಸಿದ್ದು, ವಿವಾದಕ್ಕೆ ಎಳ್ಳುನೀರು ಬಿಡಲು ಮುಂದಾಗಿದೆ ಎನ್ನಲಾಗಿದೆ.

ಈಗಿರುವ ನಿಯಮದ ಪ್ರಕಾರ ಹೈದರಾಬಾದ್ ಸೀಮಾಂಧ್ರ ಮತ್ತು ತೆಲಂಗಾಣಗಳಿಗೆ 10 ವರ್ಷಗಳ ಕಾಲ ರಾಜಧಾನಿಯಾಗಿ ಇರಲಿದೆ. ಆ ಬಳಿಕ ಹೈದರಾಬಾದ್ ಕೇವಲ ತೆಲಂಗಾಣಕ್ಕೆ ಮಾತ್ರ ರಾಜಧಾನಿಯಾದರೆ ಸೀಮಾಂಧ್ರಕ್ಕೆ ವಿಜಯವಾಡ ಅಥವಾ ವಿಶಾಖಪಟ್ಟಣಂ ರಾಜಧಾನಿಯಾಗಲಿದೆ.
ತಾವು ಸಂಪುಟದಲ್ಲಿ ನಿರ್ಣಯವೊಂದನ್ನು ಮಂಜೂರು ಮಾಡುವ ಕುರಿತು ಟಿಪ್ಪಣಿಯೊಂದನ್ನು ಸಿದ್ಧಪಡಿಸುತ್ತಿದ್ದೇವೆ. ಅದನ್ನು ಅಂತಿಮಗೊಳಿಸಿದ ಬಳಿಕ ಕಾನೂನು ಸಚಿವಾಲಯಕ್ಕೆ ಕಾನೂನು ಪರಿಶೀಲನೆಗಾಗಿ ಕಳುಹಿಸಲಾಗುವುದು.
20 ದಿನಗಳೊಳಗಾಗಿ ಟಿಪ್ಪಣಿ. ಸಂಪುಟದ ಮುಂದೆ ಮಂಡನೆಯಾಗ ಬಹುದೆಂದು ತಾನು ಆಶಿಸುತ್ತೇನೆಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.
ಆಂಧ್ರಪ್ರದೇಶ ವಿಭಜನೆ ವಿರೋಧಿಸಿ ಸೀಮಾಂಧ್ರ ವಲಯದ ಕಾಂಗ್ರೆಸ್ ಹಾಗೂ ಟಿಡಿಪಿ ಸಂಸದರು ನಡೆಸುತ್ತಿರುವ ಪ್ರಬಲ ಪ್ರತಿಭಟನೆಗೆ ಸಂಸತ್ತಿನ ಮುಂಗಾರು ಅಧಿವೇಶನ ಸಾಕ್ಷಿಯಾಗಿವೆ.












Click it and Unblock the Notifications