ಕರ್ನಾಟಕದ ಜಿಲ್ಲಾ ಸುದ್ದಿಗಳ ಕ್ವಿಕ್ ಲುಕ್
ಬೆಂಗಳೂರು, ಆ.27 : ಕರ್ನಾಟಕ ಮೂರು ನಗರ ಸಭೆಗಳನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲು ಸರ್ಕಾರ ಚಿಂತನೆ ನಡೆಸಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಶೀಘ್ರವೇ ಅನುಮೋದನೆ ಪಡೆಯಲಾಗುವುದು ಎಂದು ನಗರಾಭಿವೃದ್ದಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಸಚಿವರು, ತುಮಕೂರು, ಶಿವಮೊಗ್ಗ, ಬಿಜಾಪುರ ನಗರ ಸಭೆಗಳನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಹೇಳಿದರು. ಈ ಕುರಿತು ಸರ್ಕಾರ ಆಲೋಚನೆ ನಡೆಸಿದೆ ಎಂದರು.
ಸಚಿವ ಸಂಪುಟ ಸಭೆಯಲ್ಲಿ ಮೂರು ನಗರಸಭೆಗಳನ್ನು ಮಹಾನಗರ ಪಾಲಿಕೆಯಾಗಿ ಪರಿವರ್ತಿಸಲು ಅನುಮೋದನೆ ಪಡೆಯುವುದಾಗಿ ಅವರು ಹೇಳಿದರು. ಶೀಘ್ರವೇ ಮೂರು ನಗರಸಭೆಗಳು ಪಾಲಿಕೆಗಳಾಗಿ ಪರಿವರ್ತನೆ ಹೊಂದಲಿವೆ ಎಂದು ತಿಳಿಸಿದರು.

ಗಜಪಡೆ ತಾಲೀಮು ಪ್ರಾರಂಭ
ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅಭಿಮನ್ಯು, ಗಜೇಂದ್ರ, ವರಲಕ್ಷ್ಮೀ ಮತ್ತು ಸರಳಾ ಆನೆಗಳ ತಾಲೀಮು ಸೋಮವಾರರಿಂದ ಪ್ರಾರಂಭವಾಗಿದೆ. ಸೋಮವಾರ ಬೆಳಗ್ಗೆ ಅರಮನೆ ಬಲರಾಮ ದ್ವಾರದಿಂದ ಹೊರಟ ಆನೆಗಳು, ಚಾಲರಾಜ ವೃತ್ತ, ಸಯ್ಯಾಜಿ ರಾವ್ ವೃತ್ತದ ಮೂಲಕ ಬನ್ನಿ ಮಂಟಪದ ಪಂಜಿನ ಕವಾಯಿತು ಮೈದಾನ ತಲುಪಿ ಅಲ್ಲಿಂದ ಅರಮನೆಗೆ ಮರಳಿದವು. ಗಜಪಡೆ ತಾಲೀಮು ವೀಕ್ಷಿಸಲು ಜನರು ಕಾದು ನಿಂತಿದ್ದರು.(ಮೈಸೂರು ದಸರಾ)

ವೇಗದ ಕಾರಿಗೆ ಸಹೋದರರು ಬಲಿ
ಶಿಫ್ಟ್ ಕಾರೊಂದು ಪಾದಚಾರಿಗಳ ಮೇಲೆ ನುಗ್ಗಿದ ಪರಿಣಾಮ ಹಣ್ಣು ವ್ಯಾಪಾರ ಮಾಡುವ ಇಬ್ಬರು ಸಹೋದರರು ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ದ್ವಾರಕೇಶ್ (23), ದೇವಕೃಷ್ಣ (18) ಎಂದು ಗುರುತಿಸಲಾಗಿದೆ. ಸೋಮವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ 4ರ ಕೊಂಡರಾಜನಹಳ್ಳಿ ಬಳಿ ರಸ್ತೆ ದಾಟುತ್ತಿದ್ದಾಗ, ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ.ಗಾಯಗೊಂಡವರನ್ನು ಕೋಲಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಫ್ಟ್ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರವಾಹಕ್ಕೆ ಸಿಲುಕಿದ ಕಾವಲುಗಾರರು ನಾಪತ್ತೆ
ಪ್ರವಾಹಕ್ಕೆ ಸಿಲುಕಿ ಇಬ್ಬರು ಕಾವಲುಗಾರರು ನಾಪತ್ತೆಯಾಗಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಬೆಣ್ಣೆಹಳ್ಳದಲ್ಲಿ ನಡೆದಿದೆ. ಅರಣ್ಯ ಇಲಾಖೆ ಕಾವಲುಗಾರರಾದ ಮಹಾಲಿಂಗಪ್ಪ ಮತ್ತು ವಸಂತಗೌಡ ಎಂಬುವವರು ನಾಪತ್ತೆಯಾಗಿದ್ದಾರೆ. ಅಗ್ನಿ ಶಾಮಕದಳ ಮತ್ತು ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ.

ಪತಿ ಕೊಂದಿದ್ದ ಪತ್ನಿ ಬಂಧನ
ಗಂಡನ ಸ್ನೇಹಿತನೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡು ಪತಿಯನ್ನು ಕೊಲೆ ಮಾಡಿದ್ದ ಪಾಪಿ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ. ಗುಲ್ಬರ್ಗಾ ಮೂಲದ ಸಂಜನಾ (28) ಮತ್ತು ಜೆ.ಪಿ.ನಗರದ ನಿವಾಸಿ ಸತೀಶ್ ಬಂಧಿತರು. ಆ.28ರಂದು ತಮ್ಮ ಪ್ರೀತಿಗೆ ಅಡ್ಡವಾಗಿದ್ದ ಸಂಜನಾ ಪತಿ ಹರೀಶ್ ನನ್ನು ಇಬ್ಬರು ಸೇರಿ ಕೊಲೆ ಮಾಡಿ ಪರಾರಿಯಾಗಿದ್ದರು. ಬಂಧಿತರಿಂದ ಕೊಲೆಗೆ ಬಳಸಿದ ಚಾಕು, ಮೊಬೈಲ್ ಹೋಂಡಾ ಆಕ್ಟಿವಾ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆಸ್ತಿ ವಿವರ ಸಲ್ಲಿಸಿ ಸ್ವಾಮಿ
ವಸತಿ ಸಚಿವ ಅಂಬರೀಶ್, ಪ್ರತಿಪಕ್ಷನಾಯಕ ಎಚ್.ಡಿ.ಕುಮಾರಸ್ವಾಮಿ ಮತ್ತು ವಿಧಾನ ಪರಿಷತ್ ಸದಸ್ಯೆ ನಟಿ ತಾರಾ ಸೇರಿದಂತೆ 32 ಶಾಸಕರು ಲೋಕಾಯುಕ್ತರಿಗೆ ತಮ್ಮ ಆಸ್ತಿ ವಿವರ ಸಲ್ಲಿಸಬೇಕಾಗಿದೆ. ಪ್ರತಿ ವರ್ಷ ಜೂ.30ರೊಳಗೆ ಜನಪ್ರತಿನಿಧಿಗಳು ಲೋಕಾಯುಕ್ತರಿಗೆ ಆಸ್ತಿ ವಿವರ ನೀಡಬೇಕು. ಆದರೆ, ಆಗಸ್ಟ್ ತಿಂಗಳು ಕಳೆದರೂ 32 ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ.

ಸೈಕೋ ತಲೆಗೆ 5 ಲಕ್ಷ ಬಹುಮಾನ
ಪರಪ್ಪನ ಅಗ್ರಹಾರ ಜೈಲಿನಿಂದ ಸಿನೀಮಯ ರೀತಿಯಲ್ಲಿ ಪರಾರಿಯಾಗಿರುವ ಕೈದಿ ಸೈಕೋ ಜಯಶಂಕರನ ಸುಳಿವು ಕೊಟ್ಟರೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಸೋಮವಾರ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಸಾರ್ವಜನಿಕರು ಸೈಕೋ ಶಂಕರನ ಬಗ್ಗೆ ಮಾಹತಿ ನೀಡಿದರೆ, 5 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದರು.












Click it and Unblock the Notifications