ಪಟ್ಟಾಭಿಷೇಕವಾಯ್ತು; ಚುನಾವಣೆಗೆ ನಿಲ್ಲೋಲ್ಲ - ಶೋಭಾ
ಬೆಂಗಳೂರು, ಆಗಸ್ಟ್ 31: ಕರ್ನಾಟಕ ಜನತಾ ಪಕ್ಷದ ವರ್ಚಸ್ವಿ ನಾಯಕಿ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಕೆಜೆಪಿ ಸಂಘಟನೆಯ ಚುಕ್ಕಾಣಿ ನೀಡಲಾಗಿದೆ. ಮುಂಬರುವ ಲೋಕಸಭಾ ಚುನಾವಣೆ ವೇಳೆಗೆ ಪಕ್ಷವನ್ನು ಸದೃಢಗೊಳಿಸಲು ಸಲುವಾಗಿ 'ಅತ್ಯುತ್ತಮ ಸಂಘಟಕಿ' ಎಂದು ಗುರುತಿಸಿಕೊಂಡಿರುವ ಶೋಭಾ ಅವರಿಗೆ ಕೆಜೆಪಿ ಕಾರ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ.
'ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಒಂದು ಪಕ್ಷದ ಕಾರ್ಯಾಧ್ಯಕ್ಷೆಯಂಥ ಜವಾಬ್ದಾರಿ ಸ್ಥಾನ ಸಿಕ್ಕಿದೆ. ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಬಲಪಡಿಸುತ್ತೇನೆ ಎಂದು ಶೋಭಾ ಪ್ರತಿಕ್ರಿಯಿಸಿದ್ದಾರೆ.
ಇತ್ತ ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರು ತಮ್ಮನ್ನು ಕಾರ್ಯಾಧ್ಯಕ್ಷೆಯನ್ನಾಗಿ ನೇಮಿಸುತ್ತಿದ್ದಂತೆ ಮಾತನಾಡಿದ ಶೋಭಾ ಅವರು ಕಳೆದ ಬಾರಿ ಆತ್ಮೀಯ ನಾಯಕರ ಒತ್ತಾಯಕ್ಕೆ ಕಟ್ಟುಬಿದ್ದು ಚುನಾವಣೆಗೆ ನಿಂತಿದ್ದೆ. ಆದರೆ ಮುಂದಿನ ಬಾರಿ ಹಾಗೆ ಮಾಡೊಲ್ಲ. ಲೋಕಸಭೆ ಚುನಾವಣೆಗೆ ನಿಲ್ಲೋಲ್ಲ. ಏನಿದ್ದರೂ ಪಕ್ಷ ಸಂಘಟನೆಗೆ ತಮ್ಮ ಶಕ್ತಿ-ಸಾಮರ್ಥ್ಯ ಮುಡಿಪಾಗಿಡುವುದಾಗಿ ಘೋಷಿಸಿದ್ದಾರೆ.

ಕಾ.ಪು.ಸಿಗೆ ಕಾರ್ಯದರ್ಶಿ ಸ್ಥಾನ
ರಾಜ್ಯದಲ್ಲಿ ಕೆಜೆಪಿಯನ್ನು ಮತ್ತಷ್ಟು ಬಲಗೊಳಿಸಲು ಸಂಘಟನೆಯಲ್ಲಿ ಇನ್ನೂ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಯಡಿಯೂರಪ್ಪ ಅವರ ಪರಮಾಪ್ತ ಕಾಪು ಸಿದ್ದಲಿಂಗಸ್ವಾಮಿಗೆ ರಾಜ್ಯ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ. ಇನ್ನು, ಮಾಜಿ ಸಚಿವ, ಪಕ್ಷದ ಹಿರಿಯ ನಾಯಕ ಸಿಎಂ ಉದಾಸಿ ಅವರಿಗೆ ಹಿರಿಯ ಉಪಾಧ್ಯಕ್ಷ ಸ್ಥಾನ ವಹಿಸಲಾಗಿದೆ.
ಉಳಿದಂತೆ ಬಾಬುರಾವ್ ಚೌಹಾಣ್, ಪ್ರೊ. ಕೆಆರ್ ಮಲ್ಲಿಕಾರ್ಜುನಪ್ಪ, ನಾಗರಾಜ್ ಮಲ್ಲಾಡಿ- ರಾಜ್ಯ ಉಪಾಧ್ಯಕ್ಷರು, ಬೆಳ್ಳಿ ಪ್ರಕಾಶ್, ಮಲ್ಲನಗೌಡ ಪಾಟೀಲ್, ಈಶ್ವರಚಂದ್ರ ಹೊಸಮನಿ- ರಾಜ್ಯ ರೈತ ಘಟಕದ ಅಧ್ಯಕ್ಷ, ಮಾಜಿ ಶಾಸಕ ಚಂದ್ರಪ್ಪ- ಪರಿಶಿಷ್ಟ ಜಾತಿ ರಾಜ್ಯ ಘಟಕದ ಅಧ್ಯಕ್ಷ.

ರೇಣುಕಾಗೆ ಯಾವುದೇ ಸ್ಥಾನಮಾನ ಇಲ್ಲ!
ಕುತೂಹಲದ ಸಂಗತಿಯೆಂದರೆ, ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರಿಗೆ ರಾಜ್ಯ ಸಮಿತಿಯಲ್ಲಿ ಯಾವುದೇ ಸ್ಥಾನ ನೀಡಿಲ್ಲ.
ಕೆಲ ಜಿಲ್ಲಾಧ್ಯಕ್ಷರ ಬದಲಾವಣೆ ಇಂತಿದೆ
ಶಾಸಕ ಡಾ. ವಿಶ್ವನಾಥ ಪಾಟೀಲ್ - ಬೆಳಗಾವಿ, ಎಸ್ಐ ಚಿಕ್ಕನಗೌಡ - ಹುಬ್ಬಳ್ಳಿ-ಧಾರವಾಡ, ಮಾಡಾಳು ವಿರೂಪಾಕ್ಷಪ್ಪ- ದಾವಣಗೆರೆ, ವಿಠಲ ಕಟಕದೊಂಡ- ಬಿಜಾಪುರ, ಡಾ. ಶರಣಗೋಪಾಲರೆಡ್ಡಿ - ಯಾದಗಿರಿ, ಬಸವರಾಜ ದಡೇಸೂರು- ಕೊಪ್ಪಳ, ಡಿಕೆ ಸಿದ್ರಾಮ್ - ಬೀದರ್, ಎಂ ಅಪ್ಪಣ್ಣ - ಮೈಸೂರು ಗ್ರಾಮಾಂತರ. ಅಲ್ಲದೆ ಕೆಜೆಪಿ ರಾಜ್ಯ ಕಾರ್ಯಾಲಯದ ಕಾರ್ಯದರ್ಶಿಯಾಗಿ ಎನ್.ಆರ್. ಸಂತೋಷ್ ಅವರನ್ನು ನೇಮಿಸಲಾಗಿದೆ.

ಲೋಕಸಭೆ ಚುನಾವಣೆಯಲ್ಲಿ 10-12 ಕ್ಷೇತ್ರ ಕೆಜೆಪಿ ಪಾಲು
ಕೆಜೆಪಿ ಕಾರ್ಯಾಧ್ಯಕ್ಷೆಯಾಗಿ ಶುಕ್ರವಾರ ನೇಮಕಗೊಂಡ ಬಿಜೆಪಿಯ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು 'ರಾಜ್ಯದಲ್ಲಿ ಕೆಜೆಪಿಯನ್ನು ಸಮರ್ಥವಾಗಿ ಸಂಘಟಿಸುವ ಜವಾಬ್ದಾರಿಯನ್ನು ನನಗೆ ವಹಿಸಲಾಗಿದೆ. ಯಡಿಯೂರಪ್ಪ ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 10-12 ಕ್ಷೇತ್ರಗಳಲ್ಲಾದರೂ ಕೆಜೆಪಿ ಅಭ್ಯರ್ಥಿಗಳು ಗೆಲ್ಲುವ ಧೈರ್ಯದೊಂದಿಗೆ ಕಣಕ್ಕಿಳಿಯುವಂತೆ ಮಾಡುವುದೇ ನನ್ನ ಗುರಿ' ಎಂದಿದ್ದಾರೆ.

ಹೊಂದಾಣಿಕೆ ಮಾತ್ರ: ಯಾರೂ ಅಸ್ಪೃಶ್ಯರಲ್ಲ
ನಮಗೆ ಯಾರೂ ಅಸ್ಪೃಶ್ಯರಲ್ಲ. ಯಾರ ಜತೆಗಾದರೂ ಹೊಂದಾಣಿಕೆಗೆ ಸಿದ್ಧ. ಆದರೆ, ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಕೂಡ ತಾವು ಸಿದ್ಧವಿರುವುದಾಗಿ ಅವರು ತಿಳಿಸಿದ್ದಾರೆ. ಪಕ್ಷ ಸಂಘಟನೆ ಕುರಿತಂತೆ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆ ಸಮಯದಿಂದಲೂ ಕೆಜೆಪಿ ಬಗ್ಗೆ ಗೊಂದಲಗಳನ್ನು ಸೃಷ್ಟಿಸಲಾಗುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋಲಿಗೂ ಇದು ಕಾರಣವಾಯಿತು.

ಸೆ. 1ರಿಂದಲೇ ರಾಜ್ಯ ಪ್ರವಾಸ
ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸೆ. 1ರಿಂದಲೇ ರಾಜ್ಯ ಪ್ರವಾಸ ಮಾಡಿ ಪಕ್ಷ ಬಲವರ್ದನೆ ಮಾಡಲಾಗುವುದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ ಹೆಚ್ಚು ಮತ ಪಡೆದ ಭಾಗಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಸುಮಾರು 6ರಿಂದ 10 ಕ್ಷೇತ್ರಗಳನ್ನು ಆಯ್ಕೆ ಮಾಡಿ ಈಗಿನಿಂದಲೇ ಆ ಕ್ಷೇತ್ರಗಳ ಕಡೆ ಗಮನಹರಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ.












Click it and Unblock the Notifications