ಶ್ರೀಕೃಷ್ಣನ ಜನ್ಮನಾಡಿನಲ್ಲಿ ಮುಸ್ಲಿಮರಿಗೆ ಓವರ್ ಟೈಂ
ಮಥುರಾ, ಆ 27: ಇಂದು ಬುಧವಾರ (ಆ 28) ಪೊರದೊಡೆಯ ಶ್ರೀಕೃಷ್ಣನ ಜನ್ಮದಿನದ ಸಂಭ್ರಮ. ಮಥುರಾ, ಉಡುಪಿ, ಪಂಡರಾಪುರ, ಗುರುವಾಯೂರು, ದ್ವಾರಕಾ ಮುಂತಾದ ಶ್ರೀಕೃಷ್ಣ ದೇವಾಲಯಗಳಲ್ಲಿ ಸಂಭ್ರಮ, ಸಡಗರದ ಜನ್ಮಾಷ್ಠಮಿ ಹಬ್ಬದ ಆಚರಣೆ.
ಇದು ಉತ್ತರಪ್ರದೇಶದ ಮಥುರಾ ನಗರಿ ವಸುದೇವ ಕೃಷ್ಣ ಹುಟ್ಟಿದ ಸ್ಥಳ. ಇಲ್ಲಿ ಜನ್ಮಾಷ್ಠಮಿ ಬಂತೆಂದರೆ ಸಡಗರವೋ ಸಡಗರ. ಹಿಂದೂ, ಮುಸ್ಲಿಂ ಭಾವೈಕ್ಯತೆಯ ಸಂಕೇತ ಎನ್ನುವಂತೆ ಮುಸ್ಲಿಂ ಭಾಂದವರು ಭಕ್ತಿ, ಸಡಗರದಲ್ಲಿ ಕೃಷ್ಣನ ಸೇವೆಗೆ ನಿಲ್ಲುತ್ತಾರೆ.
ಜನ್ಮಾಷ್ಠಮಿ ಹಬ್ಬಕ್ಕೆ ಕೃಷ್ಣನಿಗೆ ವಿವಿಧ ರೀತಿಯ ಪೋಷಾಕು,ಆಭರಣಗಳನ್ನು ಗಳನ್ನು ತೊಡಿಸುವುದು ವಾಡಿಕೆ. ಹಾಗಾಗಿ ಸಾವಿರಾರು ಮಂದಿ ಮುಸ್ಲಿಮರು ಹಗಲಿರುಳು ಈ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

(ಚಿತ್ರದಲ್ಲಿ: ವಿದ್ಯುತ್ ದೀಪದಿಂದ ಅಲಂಕೃತ ಗೊಂಡಿರುವ ಮಥುರಾ ದೇವಾಲಯ)
ವಿಶ್ವ ಹಿಂದೂ ಪರಿಷತ್ತಿನ ಆಯೋಜಿಸಿರುವ 'ಚೌರಾಸಿ ಕೋಸ್ ಪರಿಕ್ರಮಾ ಯಾತ್ರೆ' ಇಲ್ಲಿ ಎರಡು ಕೋಮಿನ ಬಾಂಧವ್ಯಕ್ಕೆ ಯಾವುದೇ ಅಡ್ದಿಯಾಗುವುದಿಲ್ಲ. ಆತ್ಮ ಸಂತೃಪ್ತಿಯಿಂದ ಮತ್ತು ಹಗಲು ರಾತ್ರಿ ಎನ್ನದೇ ಠಾಕೂರ್ ಜಿ (ಶ್ರೀಕೃಷ್ಣ) ಸೇವೆ ಮಾಡುತ್ತೇವೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಅಕ್ರಂ ವಾಸಿಂ.
ಪ್ರತಿ ಜನ್ಮಾಷ್ಠಮಿಗೂ ಶ್ರೀಕೃಷ್ಣನಿಗೆ ಹೊಸ ವಿನ್ಯಾಸದ ಉಡುಗೆಯನ್ನು ತೊಡಗಿಸಲು ನಾವು ಉತ್ಸುಕರಾಗಿರುತ್ತೇವೆ. ಈ ಭಾಗದಲ್ಲಿ ಸುಮಾರು ಆರು ಸಾವಿರ ಕುಟುಂಬ ಈ ಕೆಲಸದಲ್ಲಿ ನಿರತರಾಗಿರುತ್ತೇವೆ ಎನ್ನುತ್ತಾರೆ ಇನ್ನೊಬ್ಬ ಸ್ಥಳೀಯ ನಿವಾಸ್ ಇಕ್ಬಾಲ್ ಅಹಮದ್.
ನಾವು ಮತ್ತು ಹಿಂದೂ ಬಾಂಧವರು ಸೋದರರಂತೆ ಇರುತ್ತೇವೆ. ಕೋಮು ಗಲಭೆಗೆ ಕಾರಣರಾಗುವುದು ರಾಜಕಾರಿಣಿಗಳು. ದೇಶದ ಯಾವುದೇ ಭಾಗದಲ್ಲೂ ಕೋಮು ಗಲಭೆ ನಡೆದರೂ ನಮ್ಮ ಸಂಬಂಧದ ನಡುವೆ ಯಾವುದೇ ಒಡಕು ಉಂಟಾಗುವುದಿಲ್ಲ ಎನ್ನುತ್ತಾರೆ ಸ್ಥಳೀಯ ಮುಸ್ಲಿಂ ನಿವಾಸಿಗಳು.
ಎರಡೂ ಕೋಮಿನ ನಡೆವೆ ಪ್ರೀತಿ, ವಿಶ್ವಾಸ, ಸಾಮರಸ್ಯ ಹೀಗೇ ಮುಂದುವರಿಯಲಿ.

(ಚಿತ್ರದಲ್ಲಿ:ಉಡುಪಿ ಶ್ರೀಕೃಷ್ಣ ಮಠದ ಗರ್ಭಗುಡಿ)
ಉಡುಪಿ : ಎರಡು ದಿನಗಳ ಕೃಷ್ಣ ಜನ್ಮಾಷ್ಠಮಿ ಹಬ್ಬ ದೇವಾಲಯ ನಗರಿ ಉಡುಪಿಯಲ್ಲಿ ವಿಜ್ರುಂಭಣೆಯಿಂದ ಆರಂಭವಾಗಿದೆ. ಪರ್ಯಾಯ ಸೋದೆ ಶ್ರೀಗಳಿಂದ ಶ್ರೀಕೃಷ್ಣನಿಗೆ ತುಳಸಿ ಅರ್ಚನೆ, ಮಹಾಪೂಜೆ ನಡೆಯಲಿದೆ. ಮಧ್ಯರಾತ್ರಿ 12.10ಕ್ಕೆ ಅರ್ಘ್ಯ ಪ್ರಧಾನ ನಡೆಯಲಿದೆ.
ನಾಳೆ (ಆ 29) ಬೆಳಗ್ಗೆ ಮಹಾಪೂಜೆಯ ನಂತರ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ವೈಭವದ ವಿಟ್ಲಪಿಂಡಿ (ಮೊಸರು ಕುಡಿಕೆ) ರಥೋತ್ಸವ ನಡೆಯಲಿದೆ.
ಒನ್ ಇಂಡಿಯಾ ಕನ್ನಡದ ಸಮಸ್ತ ಓದುಗರಿಗೆ ಶ್ರೀಕೃಷ್ಣ ಜನ್ಮಾಷ್ಠಮಿಯ ಶುಭಾಷಯಗಳು.












Click it and Unblock the Notifications