ವಿಘ್ನ ನಿವಾರಕ ಗಣೇಶ ಒಬ್ಬ ಅನಾರ್ಯ: ಭಾರೀ ಆಕ್ರೋಶ
ಬೆಂಗಳೂರು, ಆ 27: ವಿಘ್ನ ನಿವಾರಕ ಗಣೇಶನಿಗೆ ಹಿಂದೂ ಸಾಮ್ರಾಜ್ಯದಲ್ಲಿ ಭಾಷೆಯ ಮತ್ತು ಪ್ರಾಂತ್ಯದ ಚೌಕಟ್ಟಿಲ್ಲ. ಯುನಿವರ್ಸಲ್ ಆಗಿ ಆರಾಧಿಸಲ್ಪಡುವ ಗಣೇಶನಿಗೆ ಮೊದಲ ಪೂಜೆ.
ಈಗ ವಿನಾಯಕ ಒಬ್ಬ ರೌಡಿ, ಕ್ರೂರಿ, ರುದ್ರನ ಲೈಂಗಿಕ ಶಕ್ತಿಯ ಬಗ್ಗೆ ಪಾರ್ವತಿಗೆ ಅಸಮಾಧಾನವಿತ್ತು ಎಂದು ಲೇಖಕರೊಬ್ಬರು ತಮ್ಮ ಪುಸ್ತಕದಲ್ಲಿ ವಿಶ್ಲೇಷಿರುವುದು ಭಾರೀ ವಿವಾದಕ್ಕೆ ಈಡಾಗಿದೆ.
ಪುಸ್ತಕದಲ್ಲಿರುವ ವಿಶ್ಲೇಷಣಕ್ಕೆ ಹಿಂದೂ ಪರ ಸಂಘಟನೆಗಳು ಮತ್ತು ಧಾರ್ಮಿಕ ಮುಖಂಡರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. ಹಿಂದೂಗಳು ತಮ್ಮ ಧರ್ಮ ಮತ್ತು ಭಾವನೆಯ ವಿರುದ್ದ ಕೆಣಕಿದರೂ ಸುಮ್ಮನಿರುತ್ತಾರೆ ಎನ್ನುವ ಮನೋಭಾವ ಎಲ್ಲಡೆ ಹರಡಿದೆ.
ಲೇಖಕರು ತಮ್ಮ ಕಲ್ಪನೆಯ ಪ್ರಕಾರ ಆಕ್ಷೇಪಕಾರಿ ಪುಸ್ತಕ ಬರೆದಿದ್ದಾರೆ. ಗಣೇಶನ ಕಥೆಯನ್ನು ವಿನಾಕಾರಣ ತನ್ನ ಪುಸ್ತಕದಲ್ಲಿ ಎಳೆದು ತಂದಿದ್ದಾರೆ. ಹಿಂದೂ ಸಂಪ್ರದಾಯದಲ್ಲಿ ನಂಬಿಕೆ ಇರುವವರು ಎಲ್ಲರೂ ಇದನ್ನು ಖಂಡಿಸ ಬೇಕೆಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ.
ಚಾತುರ್ಮಾಸ ವೃತಾಚಾರಣೆಯಲ್ಲಿರುವ ಉಡುಪಿ ಪೇಜಾವರ ಶ್ರೀಗಳು ಪುಸ್ತಕದಲ್ಲಿನ ವಿಶ್ಲೇಷಣೆಯ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಲೇಖಕರ ಈ ಮನೋಭಾವ ಸಮಾಜಕ್ಕೆ ಒಳ್ಳೆ ಸಂದೇಶವನ್ನು ನೀಡುವುದಿಲ್ಲ.
ಹಿಂದೂ ಧರ್ಮದ ಬಗ್ಗೆ ಅವಹೇಳನೆ ಸರಿಯಲ್ಲ. ಗಣೇಶ ಹಿಂದೂಗಳು ಭಕ್ತಿಯಿಂದ ಪೂಜಿಸುವ ದೇವರು. ಈ ಪುಸ್ತಕವನ್ನು ಸರಕಾರ ಈ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳ ಬೇಕೆಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ಏನಿದು ವಿವಾದ ? ಮುಂದೆ ಓದಿ..
ಪುಸ್ತಕದಲ್ಲಿ ಗಣೇಶನ ಚಿತ್ರಣ
ಲೇಖಕ ಯೋಗೇಶ್ ಮಾಸ್ಟರ್ ಅವರು 'ಢುಂಢಿ - ಅರಣ್ಯಕನೊಬ್ಬ ಗಣಪತಿಯಾದ ಕಥೆ' ಎನ್ನುವ ಪುಸ್ತಕವನ್ನು ಬರೆದಿದ್ದಾರೆ. ರಾಜಮಾರ್ಗ ಸಾಹಿತ್ಯ ಸಂಸ್ಕೃತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಈ ಪುಸ್ತಕ ಶನಿವಾರ (ಆ 24) ಬಿಡುಗಡೆಗೊಂಡಿತ್ತು.
ಗಣೇಶನ ಮೂಲ ಹೆಸರು ಢುಂಢಿ
ಹಿಂದೂಗಳು ಗಣೇಶನನ್ನು ವಿಘ್ನನಿವಾರಕ ಎಂದು ಕರೆಯುತ್ತಾರೆ. ಆದರೆ ಅದು ನಿಜವಲ್ಲ. ಗಣೇಶನ ಮೂಲ ಹೆಸರು ಢುಂಢಿ, ಆತ ಒಬ್ಬ ಅರಣ್ಯಕನ ಮಗ. ಮೂಲತಃ ಆತ ಕ್ರೂರಿ, ಅನಾರ್ಯ ಮತ್ತು ಕಾಡಿನಲ್ಲಿ ವಾಸವಾಗಿದ್ದ ಎಂದು ಲೇಖಕರು ಪುಸ್ತಕದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಗಣೇಶ ಆರ್ಯ ಸಮುದಾಯದವನಲ್ಲ
ಪ್ರಥಮ ಆರಾದಕ ಗಣೇಶ ಆರ್ಯ ಸಮುದಾಯದವನಲ್ಲ, ಅವನೊಬ್ಬ ಒರಟನಾಗಿದ್ದ. ತನ್ನ ಗಣಗಳನ್ನು ಕಟ್ಟಿಕೊಂಡು ಆರ್ಯರು ನಡೆಸುತ್ತಿದ್ದ ಹೋಮ, ಯಜ್ಞಾದಿಗಳ ಮೇಲೆ ದಾಳಿ ನಡೆಸುತ್ತಿದ್ದ, ಆಭರಣಗಳನ್ನು ದೋಚುತ್ತಿದ್ದ. ಇವನಿಂದ ತಪ್ಪಿಸಿಕೊಳ್ಳಲು ಹವನಗಳಿಗೆ ಪ್ರಥಮ ಆಹ್ವಾನ ಢುಂಢಿಗೆ (ಗಣೇಶ) ನೀಡುತ್ತಿದ್ದರು. ಮುಂದಿನ ದಿನಗಳಲ್ಲಿ ಇದೇ ಪ್ರತೀತಿಯಾಗಿ ಬೆಳೆದು ಬಂತು ಎಂದು ಲೇಖಕರು ವಿಶ್ಲೇಷಿಸಿದ್ದಾರೆ.
ಪಾರ್ವತಿ ಹಲವರ ಜೊತೆ ಕೂಡುವ ಹೆಂಗಸು
ಶುಕ್ತಿಮತ್ ಎನ್ನುವ ಪ್ರದೇಶದಲ್ಲಿ ವಾಸವಾಗಿದ್ದ ಹಿಮಾಲಯದ ಒಡೆಯನ ಮಗಳು ಪಾರ್ವತಿ. ಆ ಕಾಲದಲ್ಲಿ ಮದುವೆ ಎನ್ನುವ ಪದ್ದತಿ ಇರಲಿಲ್ಲ. ಪಾರ್ವತಿ ಹಲವರ ಜೊತೆ ಕೂಡುವ ಹೆಂಗಸಾಗಿದ್ದಳು. ಅವಳಿಗೆ ಢುಂಢಿ ಎನ್ನುವ ಮಗ ಹುಟ್ಟಿದ. ಆತನಿಗೆ ತಂದೆ ಯಾರೆಂದು ಗೊತ್ತಿಲ್ಲ ಎಂದೂ ಪುಸ್ತಕದಲ್ಲಿ ಬರೆಯಲಾಗಿದೆ.
ಲಾಂಗು, ಮದ್ದು ಹಿಡಿಯುವ ಗಣೇಶ
ವೇದಗಳ ಕಾಲದಲ್ಲಿ ಜಾತಿ ಸಂಪ್ರದಾಯವಿರಲಿಲ್ಲ, ಇತಿಹಾಸದ ಸತ್ಯಾ ಸತ್ಯತೆ ಅರಿಯಲು ಯುವಕರು ಸಂಶೋಧನೆ ನಡೆಸ ಬೇಕು. ಲಾಂಗು, ಮದ್ಯ ಹಿಡಿಯುವ ಸಮಾಜ ನಂಬುವ ದೇವರನ್ನು ಲೇಖಕರು ಗೂಂಡಾ ಎಂದು ಬಿಂಬಿಸಿದ್ದಾರೆ. ಇವರ ಧೈರ್ಯವನ್ನು ಮೆಚ್ಚಲೇ ಬೇಕು ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಗಣೇಶಯ್ಯ ಅಭಿಪ್ರಾಯ ಪಟ್ಟಿದ್ದಾರೆ.