ಬೆಂಗಳೂರಲ್ಲಿ ಕೆಮಿಕಲ್ ವಿರುದ್ಧ ಸಮರ ಸಾರಿದ ಗಣೇಶ!
ಬೆಂಗಳೂರು, ಆ.27 : ಗಣೇಶ ಚತುರ್ಥಿ ಆಚರಿಸಲು ಬೆಂಗಳೂರು ಸಿದ್ದಗೊಳ್ಳುತ್ತಿದೆ. ಗಣೇಶನ ಪ್ರತಿಷ್ಠಾಪನೆ ವೇಳೆ ಸಂಘಟಕರು ಸರ್ಕಾರ ರೂಪಿಸಿರುವ ನಿಯಮವನ್ನು ಪಾಲಿಸುವಂತೆ ಮಾಡಲು, ಸರ್ಕಾರ ಜನರಿಗೆ ಜಾಗೃತಿ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದೆ. ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವಂತೆ ಗಣೇಶ ಜನರಿಗೆ ಸಂದೇಶ ಸಾರುತ್ತಿದ್ದಾನೆ.
ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪರಿಸರ ಖಾತೆ ಈ ಜಾಗೃತಿ ಅಭಿಯಾನ ಪ್ರಾರಂಭಿಸಿದ್ದು, ಜನರಿಗೆ ಗಣೇಶ ಹಬ್ಬದಂದು ಪಾಲಿಸಬೇಕಾದ ನಿಯಮಗಳನ್ನು ಸ್ವತಃ ಗಣೇಶನ ಮೂಲಕ ತಿಳಿಸಲಾಗುತ್ತಿದೆ. ಹಬ್ಬದಲ್ಲಿ ಏನು ಮಾಡಬೇಡಿ ಎಂದು ಗಣೇಶ ಜನರಿಗೆ ಮಾಹಿತಿ ನೀಡುತ್ತಿದ್ದಾನೆ.

ಗಣೇಶನಿಂದ ಒಂದು ಸಂದೇಶ ಎಂದು ಪ್ರಾರಂಭವಾಗುವ ಈ ಮಾಹಿತಿ, ಪರಿಸರಕ್ಕೆ ಪೂರಕವಾದಂತಹ ಗಣೇಶ ಮೂರ್ತಿಗಳನ್ನು ಬಳಸಿರಿ. ಸೀಸ ರಹಿತ ಮತ್ತು ರಾಸಾಯನಿಕ ಬಣ್ಣ ರಹಿತವಾದ ನೈಸರ್ಗಿಕ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಎಂದು ಮನವಿ ಮಾಡುತ್ತಿದೆ.
ಗಣೇಶ ಉತ್ಸವದ ಸಂದರ್ಭದಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿ ವರ್ಧಕಗಳನ್ನು ಬಳಸಬೇಡಿ ಮತ್ತು ಅಲಂಕಾರಕ್ಕಾಗಿ ಪ್ಲಾಸ್ಟಿಕ್ ಗಳನ್ನು ಬಳಸಬೇಡಿ ಎಂದು ಗಣೇಶ ಸಂದೇಶದ ಮೂಲಕ ಮಾಹಿತಿ ನೀಡುತ್ತಿದ್ದಾನೆ.
ಚಿಕ್ಕ ಚಿಕ್ಕ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಬಕೆಟ್ ಗಳಲ್ಲಿ ಮೂರ್ತಿ ವಿಸರ್ಜಿಸಿ ರಾಸಾಯನಿಕಗಳು ನೀರಿಗೆ ಸೇರದಂತೆ ಎಚ್ಚರ ವಹಿಸಿ ಎಂಬ ಸಂದೇಶವನ್ನು ಗಣಪ ಜನರಿಗೆ ಹೇಳುತ್ತಿದ್ದಾನೆ. ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಸಹಕರಿಸಿ ಎಂದು ಗಣೇಶ ಮನವಿ ಮಾಡುತ್ತಿದ್ದಾನೆ. (ಬೆಂಗಳೂರಿನಲ್ಲಿ 11 ದಿನ ಮಾತ್ರ ಗಣೇಶ ಪ್ರತಿಷ್ಠಾಪನೆ)












Click it and Unblock the Notifications