ಉರುಳುಸೇವೆಯಿಂದ ಅಂಬರೀಷಣ್ಣ ಪಾರು, ಆದರೂ!
ಮಂಡ್ಯ, ಆಗಸ್ಟ್ 26: ಎಸ್ಎಂ ಕೃಷ್ಣ ಜತೆಗಿನ ಮುನಿಸಿನ ನಡುವೆಯೂ ನಟಿ ರಮ್ಯಾ ಗೆಲುವಿಗೆ ಟೊಂಕಕಟ್ಟಿ ನಿಂತ 'ಮಂಡ್ಯದ ಗಂಡು' ಅಂಬರೀಷ್ ಗೆ ಈಗ ಆತ್ಮಾನಂದವಾಗಿರಬಹುದು.
ರಮ್ಯಾ ಗೆಲುವಿಗೆ ಸಾಕಷ್ಟು ಶ್ರಮ ಹಾಕಿದ್ದ ಅಂಬರೀಷ್ ಈಗ 'ಸದ್ಯ ದೊಡ್ಡ ಪ್ರಯಾಸದಿಂದ ಪಾರಾಗಿದ್ದಾರೆ' ಎಂದು ಅಂಬಿ ಅಭಿಮಾನಿಗಳು ನಿಟ್ಟುಸಿರುಬಿಟ್ಟಿದ್ದಾರೆ. ಏನಪ್ಪಾ ಅಂದರೆ ಮತದಾರರನ್ನು ಓಲೈಕೆ ಮಾಡುವ ಭರದಲ್ಲಿ ಅಣ್ಣ ಅಂಬಿ ಅವರು ನನ್ನ ಕ್ಷೇತ್ರದಲ್ಲಿ (ಮಂಡ್ಯದಲ್ಲಿ) ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ನನಗಿಂತ ಒಂದೇ ಒಂದು ಮತ ಹೆಚ್ಚು ಗಳಿಸಿದ್ದೇ ಆದರೆ ತಾನು ಸೋಮೇಶ್ವರನ ಗುಡಿಯಲ್ಲಿ ಉರುಳು ಸೇವೆ ಮಾಡುವುದಾಗಿ ಸೋಮೇಶ್ವರನ ಸಮ್ಮುಖದಲ್ಲಿ ಹರಕೆ ಕಮ್ ವಾಗ್ದಾನ ನೀಡಿದ್ದರು.

ಲೋಕಸಭೆ ಉಪಚುನಾವಣೆ ಪ್ರಚಾರ ಸಂದರ್ಭದಲ್ಲಿ ಆಗಸ್ಟ್ 13ರಂದು ಬಸರಾಳು ಗ್ರಾಮದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಅಂಬರೀಷ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾವು ಮಂಡ್ಯ ಕ್ಷೇತ್ರದಲ್ಲಿ ಪಡೆದ ಮತಗಳಿಗಿಂತ ಒಂದು ಮತ ಹೆಚ್ಚಿಗೆ ಪಡೆದು ರಮ್ಯಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ತಾವು ಸೋಮೇಶ್ವರನ ಗುಡಿಯಲ್ಲಿ ಉರುಳುಸೇವೆ ಮಾಡುವುದಾಗಿ ಪ್ರಕಟಿಸಿದ್ದರು.
ಅಂಬರೀಷಣ್ಣ ಉರುಳುಸೇವೆ ಮಾಡುವುದು ಖಚಿತ?: ಈಗ ರಮ್ಯಾ ಉಪಚುನಾವಣೆಯಲ್ಲಿ ಭರ್ಜರಿ ಗೆಲುವ ದಾಖಲಿಸಿಯಾಗಿದೆ. ಆದರೆ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಅವರು ಪಡೆದಿರುವ ಮತಗಳು 60,182. ಅದೇ ಅಂಬರೀಷ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ 90,329 ಮತ ಗಳಿಸಿದ್ದರು.
ರಮ್ಯಾ ಅಂಬಿಗಿಂತ ಒಂದು ಮತ ಹೆಚ್ಚಿಗೆ ಪಡೆಯುವುದು ಹಾಗಿರಿಲಿ 30,147 ಮತಗಳಿಂದ ವಂಚಿತರಾಗಿದ್ದಾರೆ. ಹಾಗಾಗಿ, ಅಂಬರೀಷಣ್ಣ ಉರುಳುಸೇವೆ ಮಾಡುವುದರಿಂದ ಬಚಾವಾಗಿದ್ದಾರೆ ಎನ್ನಬಹುದು. ಆದರೆ ಆ ಸೋಮೇಶ್ವರನೇ ರಮ್ಯಾರನ್ನು ಗೆಲ್ಲಿಸಿದ್ದು ಎಂದು ಕೃತಜ್ಞತಾಭಾವದಿಂದ ಭಕ್ತಿಪೂರ್ವಕವಾಗಿ ಅಂಬರೀಷಣ್ಣ ಉರುಳುಸೇವೆ ಮಾಡುವುದು ಖಚಿತ ಎನ್ನುತ್ತಿದ್ದಾರೆ ಮಂಡ್ಯದ ಪಡ್ಡೆಗಳು.












Click it and Unblock the Notifications