ಜನಾರ್ದನ ರೆಡ್ಡಿ 650 ಕೋಟಿ ಆಸ್ತಿಗೆ ಕಂಟಕ
ಈಗಾಗಲೇ ಆಂಧ್ರಪ್ರದೇಶದ ಓಬಳಾಪುರಂ ಮೈನಿಂಗ್ ಕಂಪನಿಯ 884 ಕೋಟಿ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಸದ್ಯ ಕರ್ನಾಟಕದಲ್ಲಿ ರೆಡ್ಡಿ ಸಂಪಾದಿಸಿದ ಆಸ್ತಿಯ ಮೇಲೆ ನಿರ್ದೇಶನಾಲಯದ ಕಣ್ಣು ಬಿದ್ದಿದೆ.
ಜನಾರ್ದನ ರೆಡ್ಡಿ ಪತ್ನಿ ಮಾಲೀಕತ್ವದ ಅಸೋಸಿಯೇಟ್ ಮೈನಿಂಗ್ ಕಂಪನಿ ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ಮೂಲಕ ಸಂಪಾದಿಸಿದ ಸುಮಾರು 650 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಿದ್ಧತೆ ಪ್ರಾರಂಭವಾಗಿದೆ.
ಅಸೋಸಿಯೇಟೆಡ್ ಮೈನಿಂಗ್ ಕಂಪನಿ ಕರ್ನಾಟಕದಲ್ಲಿ ಹೊಂದಿರುವ ಆಸ್ತಿಗಳ ಲೆಕ್ಕವನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಜಾರಿ ನಿರ್ದೇಶನಾಲಯ ಚಾಲನೆ ನೀಡಿದ್ದು, ವಿವಿಧ ಇಲಾಖೆಗಳಿಂದ ಮಾಹಿತಿ ಸಂಗ್ರಹಿಸುತ್ತಿದೆ ಎಂದು ತಿಳಿದು ಬಂದಿದೆ.(ಗಾಲಿ ರೆಡ್ಡಿ 880 ಕೋಟಿ ರೂ ಆಸ್ತಿ ಮುಟ್ಟುಗೋಲು)
ಕರ್ನಾಟಕದಲ್ಲಿ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓಬಳಾಪುರಂ ಮೈನಿಂಗ್ ಕಂಪನಿಯ ವಿರುದ್ಧ ಸಿಬಿಐ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಿದೆ. ಇದನ್ನು ಆಧರಿಸಿ, ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶನಾಲಯ ಮುಂದಾಗಿದೆ.
ಆಸ್ತಿ ಮುಟ್ಟುಗೋಲಿಗಾಗಿ ವಿವಿಧ ಇಲಾಖೆಗಳಿಂದ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದ್ದು, ಜರ್ನಾರ್ದನ ರೆಡ್ಡಿ ಅವರ ಯಾವ-ಯಾವ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂಬುದು ಖಚಿತವಾಗಿಲ್ಲ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ಮತ್ತು ಜಾರಿ ನಿರ್ದೇಶನಾಲಯದ ಕ್ರಮಗಳು ಏನು ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಜೈಲಿನಲ್ಲಿರುವ ಗಣಿ ಧಣಿಗೆ ನಿರ್ದೇಶನಾಲಯದ ಕ್ರಮದಿಂದ ಮತ್ತೊಂದು ಹಿನ್ನಡೆ ಉಂಟಾಗಲಿದೆ.