ದಕ್ಷಿಣ ಭಾರತದ ಮೇಲೆ ಉಗ್ರರ ಕಣ್ಣು ಬಿದ್ದಿದೆ
ಮುಂಬೈ, ಆ.21: ದಕ್ಷಿಣ ಭಾರತದ ಮೇಲೆ ದಾಳಿ ಮಾಡಲು ಎಂಟು ಉಗ್ರಗಾಮಿಗಳು ಪಾಕಿಸ್ತಾನಿ ಶಿಬಿರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಕೇಂದ್ರ ಗುಪ್ತಚರ ಏಜೆನ್ಸಿಗಳು ಮಹಾರಾಷ್ಟ್ರ ಪೊಲೀಸರಿಗೆ ಎಚ್ಚರಿಕೆ ಸೂಚನೆ ನೀಡಿದೆ. ಶ್ರೀಲಂಕಾ ಮೂಲಕ ಭಾರತ ದಕ್ಷಿಣ ಭಾಗ ಪ್ರವೇಶಿಸಿ ದಾಳಿ ನಡೆಸುವ ಸಂಚು ರೂಪಿಸಲಾಗಿದೆ ಎಂಬ ಸುದ್ದಿ ಸಿಕ್ಕಿದೆ.
ಗೃಹ ಸಚಿವಾಲಯದ ಅಧೀನದಲ್ಲಿರುವ ಗಣ್ಯರ ಭದ್ರತಾ ವಿಭಾಗದ ಜಂಟಿ ನಿರ್ದೇಶಕರಿಂದ ಕಳಿಸಲ್ಪಟ್ಟಿರುವ ಒಂಭತ್ತು ಪುಟಗಳ ಎಚ್ಚರಿಕೆ ಪತ್ರದಲ್ಲಿ ಉಗ್ರರ ವಿವರ ನೀಡಲಾಗಿದೆ. "ತರಬೇತಿ ಪಡೆದ ನಾಲ್ಕು ಭಯೋತ್ಪಾದಕರು ಪಂಜಾಬಿಗಳು ಮತ್ತು ಉಳಿದವರು ಕಾಶ್ಮೀರಿಗಳು ಅಥವಾ ಪಠಾಣರು". ಜಾಫ್ನಾ ಸಮುದ್ರ ತೀರದಿಂದ 28 ಕಿ.ಮೀ. ದೂರದಲ್ಲಿ ಅವರು ಇಳಿಯಲಿದ್ದು, ತಮಿಳುನಾಡಿನ ಮೈಲಾದುತುರೈ ಅಥವಾ ಮಧುರೈ ಅವರ ಗುರಿಯಾಗಿರಬಹುದು ಎಂದು ಎಚ್ಚರಿಕೆಯಲ್ಲಿ ತಿಳಿಸಲಾಗಿದೆ.
"ಕೆಲವೇ ತಿಂಗಳಲ್ಲಿ" ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ದೇಶಾದ್ಯಂತ ನಿಗಾ ವಹಿಸುವಂತೆ ಭದ್ರತಾ ಸಂಸ್ಥೆಗಳನ್ನು ಎಚ್ಚರಿಸಲಾಗಿದೆ. ಸೂಚನೆ ಅನುಸಾರ ಮುಂಬಯಿ ಪೊಲೀಸರು ತಮ್ಮ ಎಲ್ಲ ಮಾಹಿತಿ ಜಾಲಗಳನ್ನು ಜಾಗೃತಗೊಳಿಸಿದ್ದಾರೆ.

ಎಚ್ಚರಿಕೆ ಪತ್ರದ ಮೂರನೇ ಪುಟದಲ್ಲಿರುವಂತೆ, "ಶ್ರೀಲಂಕಾ ಪಾಸ್ ಪೋರ್ಟ್ ಪಡೆದುಕೊಂಡು ಮುಂಬೈ ಮತ್ತು ತಿರುವನಂತಪುರಂಗೆ ಭೇಟಿ ನೀಡಿರುವುದಾಗಿ ಒಪ್ಪಿಕೊಂಡ ಮೂರು ಜನ ಪಾಕ್ ಶಂಕಿತರನ್ನು ಶ್ರೀಲಂಕಾ ಅಧಿಕಾರಿಗಳು ಕಳೆದ ಫೆಬ್ರವರಿ 2 ರಂದು ಬಂಧಿಸಿದ್ದಾರೆ ಎನ್ನಲಾಗಿದೆ".
"ಸಿಂಹಳೀಯ ಮೀನುಗಾರರ ವೇಷದಲ್ಲಿ ಕೇರಳ ಮತ್ತು ತಮಿಳುನಾಡಿನ ಸಮುದ್ರಮಾರ್ಗದ ಮೂಲಕ ಈ ಉಗ್ರರು ದೇಶದೊಳಕ್ಕೆ ಪ್ರವೇಶಿಸುವ ಬಗ್ಗೆ ದೃಢಪಟ್ಟ ಮಾಹಿತಿ ಲಭ್ಯವಾಗಿದೆ. ಭಾರತದ ಮೇಲೆ ದಾಳಿ ನಡೆಸಲು ಸಂಚು ನಡೆಸಿರುವ ಲಷ್ಕರ್-ಇ-ತೊಯ್ಬಾಕ್ಕೆ ಸೇರಿರುವ ಎಂಟು ಭಯೋತ್ಪಾದಕರಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡುತ್ತಿದೆ ಎಂಬ ವರದಿ ಇವೆ" ಎಂದು ಈ ಎಚ್ಚರಿಕೆ ಪತ್ರದಲ್ಲಿದೆ.
ಇದರ ಜತೆಗೆ ಬಬ್ಬರ್ ಖಾಲ್ಸ ಇಂಟರ್ ನ್ಯಾಷನಲ್, ಜೈಶಿ ಮೊಹಮ್ಮದ್, ಜಮಾತ್-ಉದ್ -ದವಾ, ಲಷ್ಕರ್-ಇ ಜಂಗ್ವಿ, ಅಲ್ ಉಮೇರ್ ಮುಜಾಹಿದ್ದೀನ್, ಹಿಜ್ಬ್ ಉಲ್ ಮುಜಾಹಿದೀನ್ ಸಂಘಟಿತ ಹೋರಾಟಕ್ಕೆ ಮುಂದಾಗಿವೆ.
ಈ ಪೈಕಿ ಲಷ್ಕರ್ ಇ ಜಂಗ್ವಿ ಮುಂಬೈನಲ್ಲಿ ನಡೆಸಲಾದ 26/11 ದಾಳಿ ಮಾದರಿಯಲ್ಲೇ ನವದೆಹಲಿಯಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಲಾಗಿದೆ. ಲಷ್ಕರ್ ಇ ತೋಯ್ಬಾ ಮುಖಂಡ ಹಬಿಬ್ ಉರ್ ರೆಹಮಾನ್ ನೇತೃತ್ವದಲ್ಲಿ ಉಗ್ರ ಸಂಘಟನೆಗಳು ಸಭೆ ಸೇರಿ ಮಾತುಕತೆ ನಡೆಸುವ ಮಾಹಿತಿ ಸಿಕ್ಕಿದೆ.












Click it and Unblock the Notifications