ಕಮೀಷನರ್ ದಯಾನಂದ್ ಸಂಬಂಧಿಗೆ ಆಟೋ ಕಾಟ
ಬೆಂಗಳೂರು, ಆಗಸ್ಟ್ 13: ಹತ್ತು ದಿನಗಳ ಹಿಂದೆ ಮಹಿಳೆಯೊಬ್ಬರ ಜತೆ ಜಗಳವಾಡಿ ಆಕೆಯ ವ್ಯಾನಿಟಿ ಬ್ಯಾಗಿನೊಂದಿಗೆ ನಾಪತ್ತೆಯಾಗಿದ್ದ ಆಟೋ ಡ್ರೈವರ್ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.
ಮಹಿಳೆಯ ಮೊಬೈಲನ್ನು ಬಳಸಿ ಕರೆ ಮಾಡಿದಾಗ ಆರೋಪಿ ಪೀಣ್ಯ ದಾಸರಹಳ್ಳಿಯ ಮಂಜುನಾಥ ಸಿಕ್ಕಿಬಿದ್ದಿದ್ದಾನೆ. ಮಹಿಳೆ ದೂರು ವಾಪಸ್ ತೆಗೆದುಕೊಂಡಿದ್ದರಿಂದ ಪೊಲೀಸರು ಆತನ ಮೇಲೆ ಯಾವುದೇ ಕೇಸು ದಾಖಲಿಸಿಕೊಂಡಿಲ್ಲ.

ಅವರು ಹೋಗಬೇಕಿದ್ದು ಬಸವೇಶ್ವರ ನಗರಕ್ಕೆ. ಆದರೆ ಆಟೋದವನು ನೂರು ರೂಪಾಯಿ ಹೆಚ್ಚಿಗೆ ಕೇಳಿದ್ದಾನೆ. ಆದರೆ ವೈದ್ಯೆ ಡಾ. ಚೈತನ್ಯ ಅವರು ಅದೆಲ್ಲಾ ಆಗೋಲ್ಲ. ಮೀಟರ್ ಎಷ್ಟಿದೆಯೋ ಅಷ್ಟೇ ಕೊಡ್ತೀನಿ ಎಂದಿದ್ದಾರೆ. ಕಂಕುಳಲ್ಲಿ ಒಂದೂವರೆ ವರ್ಷದ ಮಗುವನ್ನು ಎತ್ತಿಕೊಂಡ ಮಹಿಳೆಯ ಬಗ್ಗೆ ಒಂದಿನಿತೂ ಕನಿಕರ ತೋರದ ಆಟೋದವ, ಹೆಚ್ಚಿನ ಹಣ ಕೊಟ್ಟರೇನೇ ಮುಂದೆ ಹೋಗೋದು ಎಂದು ಜಬರದಸ್ತು ಮಾಡಿದ್ದಾನೆ.
ವೈದ್ಯೆ ಡಾ. ಚೈತನ್ಯ ಅವರಿಗೆ ಅದೇನನ್ನಿಸಿತೋ ಮಗು ಜತೆಗೆ ಆಟೋದಿಂದ ಕೆಳಗಿಳಿದಿದ್ದಾರೆ. ಆಟೋದವನಿಗೆ ಒಂದಷ್ಟು ಉಗಿದು ಉಪ್ಪು ಹಾಕಿದ್ದಾರೆ. ಅವನೂ ಸ್ಥಳದಿಂದ ತಕ್ಷಣವೇ ಕಳಚಿಕೊಂಡಿದ್ದಾನೆ.
ಆದರೆ ಅವನು ಹಾಗೆ ಮಾಯವಾಗುತ್ತಿದ್ದಂತೆ ಈಕೆಗೆ ಜ್ಞಾನೋದಯವಾಗಿ ಏನನ್ನೋ ಕಳೆದುಕೊಂಡಂತಾಗಿದೆ. ಏನದು ಅಂತ ವ್ಯಾನಿಟಿ ಬ್ಯಾಗಿಗೆ ಕೈಹಾಕಿದಾಗಲೇ ಅವರ ಅರಿವಿಗೆ ಬಂದಿದ್ದು - ತಮ್ಮ ವ್ಯಾನಿಟಿ ಬ್ಯಾಗ್ ಆಟೋದಲ್ಲೇ ಉಳಿದುಬಿಟ್ಟಿದೆ ಅಂತ.
ಡಾ. ಚೈತನ್ಯಗೆ ಆಗ ಎದೆ ಧಸಕ್ಕೆಂದಿದೆ. ವ್ಯಾನಿಟಿ ಬ್ಯಾಗಿನಲ್ಲಿ ಏನೆಲ್ಲಾ ಇತ್ತು ಎಂದು ಯೋಚಿಸತೊಡಗಿದಾಗ 50 ಸಾವಿರ ರೂ. ನಗದು, ಎರಡು ಸ್ಮಾರ್ಟ್ ಫೋನುಗಳು, ಎರಡು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಚೆಕ್ ಬುಕ್... ಎಲ್ಲಾ ಚಕ್ರಸುಳಿಯಾಗಿ ಕಣ್ಮುಂದೆ ತಿರುಗಿದೆ.
ಮುಂದ!? ಏನೂ ಇಲ್ಲ. ವ್ಯಾನಿಟಿ ಬ್ಯಾಗ್ ಆಟೋದಲ್ಲೇ ಪೋಯಾ ಅಷ್ಟೇ. ಅಲ್ಲೇ ಇದ್ದ ಟ್ರಾಫಿಕ್ ಪೊಲೀಸರಿಗೆ ಹೇಳಿದರೆ ಅವರುತಾನೆ ಏನು ಮಾಡಿಯಾರು? ಆಟೋ ನಂಬರ್ ಕೊಡಮ್ಮಾ ಎಂದು ಕೇಳಿದ್ದಾರೆ. ಈಕೆ ಗೊತ್ತಿಲ್ಲ ಅಂದಿದ್ದಾರೆ. ಪೊಲೀಸರೂ ಕೈಯೆತ್ತಿದ್ದಾರೆ. ಇಂದಿನ 'ಬೆಂಗಳೂರು ಮಿರರ್' ಪತ್ರಿಕೆಯಲ್ಲಿ ಈ ಪ್ರಕರಣ ವರದಿಯಾಗಿದೆ.
ಆದರೆ ತಾನು ಬೆಂಗಳೂರಿನ ಕಡಕ್ ಪೊಲೀಸ್ ಅಧಿಕಾರಿ, ಹೆಚ್ಚುವರಿ ಪೊಲೀಸ್ ಕಮೀಷನರ್ ಬಿ ದಯಾನಂದ್ ಎಂಬುದನ್ನು ತಕ್ಷಣ ಜ್ಞಾಪಿಸಿಕೊಂಡ ಡಾ. ಚೈತನ್ಯ ಅವರು ಸ್ಥಳೀಯ ಪೊಲೀಸ್ ಠಾಣೆಗೆ (ಮಲ್ಲೇಶ್ವರ ಪೊಲೀಸ್ ಠಾಣೆ) ತೆರಳಿ ದೂರು ದಾಖಲಿಸಿದ್ದಾರೆ.
ದೂರುದಾರರು ತಮ್ಮ ಟ್ರಾಫಿಕ್ ಕಮೀಷನರ್ ಸಂಬಂಧಿ ಎಂಬುದು ತಿಳಿಯುತ್ತಿದ್ದಂತೆ ಟ್ರಾಫಿಕ್ ಇನ್ಸ್ ಪೆಕ್ಟರ್ ಆದಿಯಾಗಿ ಮಂತ್ರಿ ಮಾಲ್ ಬಳಿಗೆ ಬಂದು ತನಿಖೆಗಿಳಿದಿದ್ದಾರೆ. ಅಲ್ಲಿ ಡ್ಯೂಟಿಯಲ್ಲಿದ್ದ ಪೊಲೀಸಪ್ಪನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೇಲಿಂದ ನೋಡುತ್ತಿದ್ದ ಸಿಸಿಟಿವಿಯಲ್ಲಿದ್ದ ದೃಶ್ಯಾವಳಿಗಳನ್ನು ಪರಿವೀಕ್ಷಿಸಿದ್ದಾರೆ. ಆಟೋ ಸಮೇತ ಡಾ. ಚೈತನ್ಯ ಅವರು ಟಿವಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅದರಲ್ಲಿ ಆಟೋ ಸಂಖ್ಯೆ ನಂಬರ್ ಪ್ಲೇಟ್ ಕಾಣಿಸುತ್ತಿಲ್ಲ.
ಪೊಲೀಸರು ತಲೆಯ ಮೇಲೆ ಕೈಹೊತ್ತು ಕಮೀಷನರ್ ದಯಾನಂದ್ ಅವರನ್ನು ಕಂಡರೆ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಇತ್ತ ಆಟೋದವರನು ಇನ್ನೂ ಪತ್ತೆಯಾಗಿಲ್ಲ.












Click it and Unblock the Notifications