ಇಂಗ್ಲೆಂಡ್ ಹಿಂದೂ ಸಮಾವೇಶದಲ್ಲಿ ಜಪಾನಂದಜಿ
ತುಮಕೂರು, ಆ. 7 : ಇಂಗ್ಲೆಂಡ್ನ ಹಿಂದೂ ಸ್ವಯಂಸೇವಕ ಸಂಘ ಮತ್ತು ಹಿಂದೂ ಸೇವಿಕಾ ಸಮಿತಿ ವತಿಯಿಂದ ಲಂಡನ್ನಲ್ಲಿ ಏರ್ಪಟ್ಟಿದ್ದ ಸಂಘ ಶಿಕ್ಷಾವರ್ಗದ ಸಮಾರೋಪ ಸಮಾರಂಭದಲ್ಲಿ ತುಮಕೂರು ಜಿಲ್ಲೆ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದಜಿ ಅವರು ಅತಿಥಿಗಳಾಗಿ ಭಾಗವಹಿಸಿ ಸಮಾರೋಪ ಭಾಷಣ ಮಾಡಿದರು.
ಯೂರೋಪ್ನ ವಿವಿಧ ದೇಶಗಳಿಂದ ಶಿಕ್ಷಾರ್ಥಿಗಳಾಗಿ ಆಗಮಿಸಿದ್ದ 1,500ಕ್ಕೂ ಅಧಿಕ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಸ್ವಾಮೀಜಿಯವರು, ಹಿಂದೂ ಧರ್ಮ ಮತ್ತು ಸಂಸ್ಕೃತಿ ಇಡೀ ಜಗತ್ತಿಗೆ ದಾರಿದೀಪವಾಗಿದೆ ಎಂದು ಅನೇಕ ಉದಾಹರಣೆಗಳೊಂದಿಗೆ ಬಣ್ಣಿಸಿದರು.

ಸ್ವಾಮಿ ವಿವೇಕಾನಂದರು ಯುವಜನತೆಗೆ ನೀಡಿದ ಕರೆಯನ್ನು ತಮ್ಮ ಪ್ರಖರ ಭಾಷಣದಲ್ಲಿ ಪ್ರತಿಧ್ವನಿಸಿದ ಅವರು, ಹಿಂದೂಧರ್ಮದ ಸಂರಕ್ಷಣೆಗೆ ಶ್ರಮಿಸಿದ ಛತ್ರಪತಿ ಶಿವಾಜಿ ಮಹಾರಾಜ್, ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಸಮರ ಸಾರಿದ ಮಹಾನ್ ಕ್ರಾಂತಿಕಾರರಾದ ನೇತಾಜಿ ಸುಭಾಷ್ ಚಂದ್ರಬೋಸ್, ಚಂದ್ರಶೇಖರ ಆಜಾದ್, ಭಗತ್ಸಿಂಗ್ ಮುಂತಾದವರ ಉದಾತ್ತ ಜೀವನವನ್ನು ಉದಾಹರಿಸಿ, ವಿದೇಶದಲ್ಲಿ ನೆಲೆಸಿರುವ ಹಿಂದೂಗಳು ತಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕೆಂದು ಕರೆಯಿತ್ತರು.
ಇದೇ ಸಂದರ್ಭದಲ್ಲಿ ಲಂಡನ್ನ ಶಕ್ತಿಕೇಂದ್ರದಲ್ಲಿ ಹಿಂದೂ ಕೌನ್ಸಿಲ್ ಸಂಘಟಿಸಿದ್ದ ಭಗವದ್ಗೀತಾ ಸಮ್ಮೇಳನದಲ್ಲೂ ಜಪಾನಂದಜಿಯವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದರು. ಭಗವದ್ಗೀತೆಯು ಜಗತ್ತಿನ ಸಕಲ ಮಾನವರಿಗೂ ಅನ್ವಯವಾಗುವಂತಹ ಸಾರ್ವಕಾಲಿಕ ಮಹಾನ್ ಸಂದೇಶವನ್ನು ಹೊಂದಿದೆ ಎಂದು ಹೇಳಿದ ಅವರು, ಭಗವದ್ಗೀತೆಯ ಮುಖ್ಯಾಂಶಗಳನ್ನು ಉಲ್ಲೇಖಿಸುತ್ತ ಆ ವಿಚಾರ ಪ್ರಚಲಿತ ದಿನದಲ್ಲೂ ಹೇಗೆ ಪ್ರಸ್ತುವಾಗಿದೆಯೆಂಬುದನ್ನು ವಿವರಿಸಿದರು. ಇವೆರಡೂ ಸಮಾರಂಭಗಳಲ್ಲಿ ಆಯಾ ಸಂಘಟನೆಗಳ ಮುಖ್ಯಸ್ಥರು, ಗಣ್ಯರು ಭಾಗವಹಿಸಿದ್ದರು.












Click it and Unblock the Notifications