ರಾಹುಲ್ ಗೆಲ್ಲಿಸಲು ಆಂಧ್ರ ಒಡೆದ ಸೋನಿಯಾ
ರಾಯಲ ಸೀಮೆಯಲ್ಲಿ ವೈಎಸ್ ಆರ್ ಕಾಂಗೆಸ್ ಜನಪ್ರಿಯತೆ ತಗ್ಗಿಸಲು ಹಾಗೂ ತೆಲಂಗಾಣ ಮೂಲಕ ಸಂಸದರನ್ನು ಖರೀದಿಸಲು ಸೋನಿಯಾ ಅವರು ಮಾಡಿದ ಬಹುದೊಡ್ಡ ತಂತಗ್ರಾರಿಕೆ ಇದಾಗಿದೆ ಎಂದು ಶರ್ಮಿಳಾ ಅಭಿಪ್ರಾಯಪಟ್ಟಿದ್ದಾರೆ.
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ವೈಎಸ್ ಆರ್ ಪಕ್ಷದ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಪ್ರಾಬಲ್ಯ ಕಡಿಮೆ ಗೊಳಿಸಲು ವ್ಯವಸ್ಥಿತವಾಗಿ ತಂತ್ರ ಹೆಣೆಯಲಾಗಿದೆ. ಆಂಧ್ರಪ್ರದೇಶ ಅಥವಾ ತೆಲಂಗಾಣದ ಉದ್ಧಾರ ಮಾಡುವ ವಿಶಾಲ ಮನೋಭಾವವನ್ನು ಹೊಂದಿದ್ದರೆ ರಾಜ್ಯವನ್ನು ಒಡೆಯದೆ ಅಭಿವೃದ್ಧಿ ಮಾಡಬಹುದಿತ್ತು.
ಯುಪಿಎ ಸರ್ಕಾರಕ್ಕೆ ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲ. ಸೀಮಾಂಧ್ರದಿಂದ ಪಡೆಯಬಹುದಾದ ರಾಜಕೀಯ ಲಾಭ ಹಾಗೂ ತೆಲಂಗಾಣದಿಂದ ಸಿಗುವ ಮತಗಳ ಮೇಲೆ ಮಾತ್ರ ಕಣ್ಣು. ಆಂಧ್ರಪ್ರದೇಶ ಒಡೆದಿರುವುದರಿಂದ ಸಂಪನ್ಮೂಲಗಳ ಕೊರತೆ ಉಂಟಾಗಲಿದೆ. ನಮ್ಮ ಅಣ್ಣ ತಮ್ಮಂದಿರ ಜೊತೆ ನಾವೇ ಸಮರ ಸಾರುವಂತಾಗುತ್ತದೆ ಒಟ್ಟಾರೆ ಸೀಮಾಂಧ್ರ ಸಹಾರಾ ಮರುಭೂಮಿಯಂತಾಗಲಿದೆ ಎಂದು ವೈಎಸ್ ಶರ್ಮಿಳಾ ದುಃಖ ವ್ಯಕ್ತಪಡಿಸಿದರು.
ಪೊಲ್ಲಾವರಂ, ನಾಗಾರ್ಜುನ ಸಾಗರ ಹಾಗೂ ಶ್ರೀಶೈಲಂ ಪತಿಸ್ಥಿತಿ ಏನಾಗಲಿದೆ ಎಂಬ ಸಣ್ಣ ಕಲ್ಪನೆಯೂ ದೆಹಲಿ ದೊರೆಗಳಿಗೆ ಇಲ್ಲ ಎಂದು ಶರ್ಮಿಳಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನವರಿಗೆ ನಿಜವಾಗಿಯೂ ಕಾಳಜಿ ಇದ್ದರೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಬೇಕಿತ್ತು. ತೆಲಂಗಾಣದಿಂದ ಸಿಗುವ 17 ಸೀಟುಗಳನ್ನು ಪಡೆದು ರಾಹುಲ್ ಗಾಂಧಿ ಅವರನ್ನು ಮುಂದಿನ ಪ್ರಧಾನಿ ಮಾಡಲು ಸೋನಿಯಾ ಗಾಂಧಿ ಹೊರಟ್ಟಿದ್ದಾರೆ.
ಹೈದರಾಬಾದಿನ ಉದ್ಧಾರ ಮಾಡಿದ್ದು ನಾನೇ ಎಂಬು ಬೀಗುವ ತೆಲುಗುದೇಶಂ ಪಕ್ಷದ ಚಂದ್ರಬಾಬು ನಾಯ್ಡು ಅವರು ಈಗ ಸುಮ್ಮನಿರುವುದೇಕೆ?ಸೀಮಾಂಧ್ರ ಜನರಿಂದ ಅಭಿವೃದ್ಧಿ ಕಂಡ ಹೈದರಾಬಾದ್ ನಗರವನ್ನು ಸುಮಾರು 4.5 ಲಕ್ಷ ಕೋಟಿ ರು ಗಳಿಗೆ ತೆಲಂಗಾಣಕ್ಕೆ ಮಾರಲು ನಾಯ್ಡು ಹೊರಟ್ಟಿದ್ದರು.
ರಾಜಕೀಯ ದುರುದ್ದೇಶದಿಂದ ರಾಜ್ಯ ಒಡೆಯುವ ಜನ ವೈಎಸ್ ಜಗನ್ ಅವರ ಜನಪ್ರಿಯತೆ ಕುಗ್ಗಿಸಲು ಅನೇಕ ಕುತಂತ್ರಗಳನ್ನು ಮಾಡುತ್ತಿದ್ದಾರೆ. ಆದರೆ, ಮುಂಬರುವ ಚುನಾವಣೆಯಲ್ಲಿ ರಾಯಲಸೀಮೆ ಅಷ್ಟೇ ಅಲ್ಲ ಅಖಂಡ ಆಂಧ್ರದಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಲಿದೆ ಎಂದು ವೈಎಸ್ ಶರ್ಮಿಳಾ ಅವರು ಹೇಳಿದರು. ಸುಮಾರು 230 ದಿನಗಳ ಕಾಲದ ಪಾದಯಾತ್ರೆ ಮುಗಿಸಿ ಶ್ರೀಕಾಕುಳಂನಲ್ಲಿ ಮಾತನಾಡುವಾಗ ಶರ್ಮಿಳಾ ಅವರು ಈ ಮಾತುಗಳನ್ನು ಹೇಳಿದರು.