ಡಿಕೆಶಿ ತಮ್ಮ ಸುರೇಶ್ ವಿರುದ್ಧ ಬರೋಬ್ಬರಿ 17 ಕೇಸುಗಳು
ಬೆಂಗಳೂರು, ಆಗಸ್ಟ್ 6: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಿಕೆ ಶಿವಕುಮಾರ್ ಅವರ ಎರಡನೆಯ ಡಿಕೆ ಸುರೇಶ್ ನಾಮಪತ್ರ ಸಲ್ಲಿಸುವ ಸಂಬಂಧ ಒಂದು ಅಫಿಡವಿಟ್ ಅನ್ನು ಸಲ್ಲಿಸಿದ್ದಾರೆ.
ಅದರಲ್ಲಿ ಅವರೇ ಹೇಳಿಕೊಂಡಂತೆ ಸುಮಾರು 15ಕ್ಕೂ ಹೆಚ್ಚು ಅಪರಾಧ ಪ್ರಕರಣಗಳ ಅವರ ವಿರುದ್ಧ ದಾಖಲಾಗಿದೆ. ಆದರೆ ಅವುಗಳ ಪೈಕಿ ಯಾವುದರಲ್ಲೂ ಅವರ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿಲ್ಲ. ಬಹುಶಃ ಇದೊಂದೇ ಎಳೆಯನ್ನು ಇಟ್ಟುಕೊಂಡು ಹಾಲಿ ಉಪಚುನಾವಣೆಗೆ ಅವರ ಹೆಸರನ್ನು ರಾಜ್ಯ ಕಾಂಗ್ರೆಸ್ ಅನುಮೋದಿಸಿರಬೇಕು.
ಏಕೆಂದರೆ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ/ ಯುವ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗಷ್ಟೇ ಅಪರಾಧ ಹಿನ್ನೆಲೆಯ ಯಾವುದೇ ವ್ಯಕ್ತಿಗೂ ಚುನಾವಣೆ ಟಿಕೆಟ್ ನೀಡಬಾರದು ಎಂದು ಸ್ಪಷ್ಟವಾಗಿ ಹೇಳಿದ್ದರು. ಆ ನೀತಿ ಎಲ್ಲರಿಗೂ ಅನ್ವಯವಾಗುವಂತಿದ್ದರೆ ಡಿಕೆ ಸುರೇಶ್ ಸಹ ಕಷ್ಟದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ.
ಆದರೆ ಅದೇ ಉಸಿರಿನಲ್ಲಿ ಅವರು ನನ್ನ ವಿರುದ್ಧ ಪ್ರಕರಣ ದಾಖಲಾದ ಮಟ್ಟಿಗೆ ನಾನು ಅಪರಾಧಿ ಎಂದಲ್ಲ. ಜತೆಗೆ ನನ್ನ ವಿರುದ್ಧ ಇನ್ನೂ ಆರೋಪ ಪಟ್ಟಿಯೇ ದಾಖಲಾಗಿಲ್ಲ ಅಲ್ವಾ ಎಂದು ಬಚಾವಾಗಿಬಿಡುತ್ತಾರೆ.

ಮಹಮ್ಮದ್ ಪಾಕೆಟ್ ಕಾರ್ಟೂನ್ ಸಕಾಲಿಕ/ ಅರ್ಥಗರ್ಭಿತ
ಈ ಸಂದರ್ಭದಲ್ಲಿ ಹಿರಿಯ ವ್ಯಂಗ್ಯಚಿತ್ರಕಾರ ಪಿ ಮಹಮ್ಮದ್ ಅವರು ಇಂದು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬಿಡಿಸಿರುವ ಪಾಕೆಟ್ ಕಾರ್ಟೂನ್ ಸಕಾಲಿಕವಾಗಿದೆ. ಒಮ್ಮೆ ನೋಡಿ.

ಸುರೇಶ್ ವಿರುದ್ಧ ಬರೋಬ್ಬರಿ 17 ಪ್ರಕರಣಗಳು ದಾಖಲು
ಮತ್ತೆ ಸುರೇಶ್ ವಿಷಯಕ್ಕೇ ಬರುವುದಾದರೆ ಸುರೇಶ್ ವಿರುದ್ಧ ಅಫಿಡವಿಟ್ ನಲ್ಲಿ ತಿಳಿಸಿರುವಂತೆ ಬರೋಬ್ಬರಿ 17 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 14 ಅರಣ್ಯ ಕಾಯಿದೆ ಸಂಬಂಧಿತ (ಗಣಿಗಾರಿಕೆ) ಪ್ರಕರಣಗಳು, 2 ಅಪರಾಧ ಪ್ರಕರಣಗಳು ಮತ್ತು ಒಂದು ದೌರ್ಜನ್ಯದ ಪ್ರಕರಣ ದಾಖಲಾಗಿದೆ.

ಸುರೇಶ್ ವಿರುದ್ಧ ಇಲ್ಲೊಂದು ಇಂಟರೆಸ್ಟಿಂಗ್ ಕೇಸ್
ಬೆಂಗಳೂರಿನಲ್ಲಿರುವ Judicial Layoutನಲ್ಲಿ ಡಿಕೆ ಸುರೇಶ್ ಒಂದು ನಿವೇಶನ ಹೊಂದಿದ್ದಾರೆ. ಇದರ ವಿರುದ್ಧ ದೂರೂ ದಾಖಲಾಗಿದೆ. ಅಸಲಿಗೆ affidavitನಲ್ಲಿ ಕಣ್ಣಾಡಿಸಿದಾಗ ಸುರೇಶ್ ತಾನು ನ್ಯಾಯಾಂಗ ಉದ್ಯೋಗಿ ಎಂದು ಎಲ್ಲೂ ಹೇಳಿಕೊಂಡಿಲ್ಲ. ಆದರೂ ಅದು ಹೇಗೆ ಅವರಿಗೆ ಪ್ರತಿಷ್ಠಿತ Judicial Layoutನಲ್ಲಿ ನಿವೇಶನ ಸಿಕ್ಕಿತೋ ಖುದ್ದು ಅಗ್ರಜ ಶಿವಕುಮಾರ ಹೇಳಬೇಕು. ಅಂದಹಾಗೆ, ಶಿವಕುಮಾರ್ ಸಹಕಾರ ಸಚಿವರಾಗಿದ್ದಾಗ ಭ್ರಾತೃಪ್ರೇಮದಲ್ಲಿ ಸುರೇಶ್ ಗೆ Judicial Layoutನಲ್ಲಿ 2,400 ಚದರ ಅಡಿಯ ನಿವೇಶನವನ್ನು ಹಂಚಿಕೆ ಮಾಡಿಸಿಕೊಂಡಿದ್ದರು.

2000ರ ಸೆಪ್ಟೆಂಬರಿನಲ್ಲಿ 71,358 ರೂ. ಗೆ ಖರೀದಿ
ಯಲಹಂಕದಲ್ಲಿರುವ Karnataka State Judicial Department Employees' House Building Co-operative Society Limited (Judicial Layout) ನಿವೇಶನ ಹಂಚಿಕೆಯನ್ನು ಕಳೆದ ವರ್ಷ ವಾಪಸ್ ಮಾಡಿದ್ದರೂ affidavitನಲ್ಲಿ ಅದಿನ್ನೂ ಅವರ ಹೆಸರಿನಲ್ಲೆ ಉಳಿದುಕೊಂಡಿದೆ. 2000ರ ಸೆಪ್ಟೆಂಬರಿನಲ್ಲಿ 71,358 ರೂ. ಕಟ್ಟಿ ಸುರೇಶ್ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದರು.

ಮಹಾನುಭಾವ ಸುರೇಶ್ ಯಾವುದೇ ಸರಕಾರಿ ಉದ್ಯೋಗದಲ್ಲಿಲ್ಲ
ಅಸಲಿಗೆ ನ್ಯಾಯಾಂಗದಲ್ಲಿ ದುಡಿಯುತ್ತಿರುವ ನೌಕಕರಿಗೆ ಮಾತ್ರವೇ ಇಲ್ಲಿ ನಿವೇಶನ ಹಂಚಿಕೆಯಾಗಬೇಕು. ಇದು ಸೊಸೈಟಿಯ ಬೈಲಾ. ಆದರೆ ಮಹಾನುಭಾವ ಸುರೇಶ್ ಯಾವುದೇ ಸರಕಾರಿ ಉದ್ಯೋಗದಲ್ಲಿಲ್ಲ. ಹಾಗಾಗಿ ಮೂಲಭೂತವಾಗಿ ಸುರೇಶ್ ಗೆ ನಿವೇಶನ ನೀಡಿದ್ದು ಹಾಗಿರಲಿ. Clause 10(B)ಗೆ ವಿರುದ್ಧವಾಗಿ ಸೊಸೈಟಿ ಸದಸ್ಯತ್ವ ನೀಡಿದ್ದೇ ಮಹಾತಪ್ಪು ಅಲ್ವಾ? ಅಂದಹಾಗೆ ಸೊಸೈಟಿಯಲ್ಲಿ ಡಿಕೆ ಸುರೇಶ್ ಅವರ ಸದಸ್ಯತ್ವ ಸಂಖ್ಯೆ 159.

ಖಾಸಗಿ ವ್ಯಕ್ತಿ ಸೈಟು ಹೊಡೆದಿದ್ದು ಹೇಗೆ?
ಸೊಸೈಟಿ ಸದಸ್ಯತ್ವ (ನಿವೇಶನದ ಮಾತು ಆಮೇಲೆ) ಪಡೆಯಬೇಕೆಂದರೆ ಸಂಬಂಧಪಟ್ಟ ವ್ಯಕ್ತಿ 5 ವರ್ಷ ಕಾಲ ಸತತವಾಗಿ ಸರಕಾರಿ ಉದ್ಯೋಗದಲ್ಲಿರುವ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಯಿಂದ ದಾಖಲೆ ಒದಗಿಸಬೇಕು. ಆದರೆ ಈ ಪುಣ್ಯಾತ್ಮ ಸುರೇಶ ಅದ್ಯಾವುದೂ ಇಲ್ಲದೆ ಸೈಟು ಹೊಡೆದಿದ್ದು ಹೇಗೆ? ಉದ್ಯೋಗದಾತ ಇಲಾಖೆಯ ದಾಖಲೆ ಇಲ್ಲದಿದ್ದರೆ ಏನಂತೆ ಸಚಿವನಾಗಿರುವ ಅಣ್ಣನ ಆಶೀರ್ವಾದ ಒಂದಿದ್ದರೆ ಸಾಕು, ಅಲ್ವೇ?

ನಿವೇಶನ ವಾಪಸ್/ ಮಾರಾಟ/ 51 ಲಕ್ಷ ರೂ. ಮುಂಗಡ
ಅಣ್ಣ ಶಿವಕುಮಾರ್ ಹೇಳುವಂತೆ ಸುರೇಶ್ ನಿವೇಶನ ವಾಪಸ್ ಮಾಡಲಾಗಿದೆ. ಆದರೆ ಡಿಕೆ ಕೆಂಪೇಗೌಡರ 47 ವರ್ಷದ ಮೂರನೆಯ ಪುತ್ರ ಸುರೇಶ್ ಮಾತ್ರ ತಾನು ಈ ನಿವೇಶನ ಮಾರಾಟ ಸಂಬಂಧ 51 ಲಕ್ಷ ರೂ. ಮುಂಗಡ ಪಡೆದಿರುವುದಾಗಿಯೂ ಹೇಳಿದ್ದಾರೆ. 2000ನೇ ಇಸ್ವಿಯಲ್ಲಿ 71,358 ರೂ. ನೀಡಿ ಖರೀದಿಸಿದ್ದ ನಿವೇಶನದ ಈಗಿನ ಬೆಲೆ 60 ಲಕ್ಷ ರೂ. ನಷ್ಟಿದೆ. ಇದರರ್ಥ ಕಾನೂನುಬಾಹಿರವಾಗಿ ಕಾನೂನು ಬಡಾವಣೆಯಲ್ಲಿ ನಿವೇಶನ ಗಿಟ್ಟಿಸಿದ್ದೂ ಅಲ್ಲದೆ ಅದನ್ನು ಅಧಿಕೃತವಾಗಿ ಮಾರಾಟ ಮಾಡುತ್ತಿರುದಾಗಿ ಸುರೇಶ್, ರಾಜಾರೋಶವಾಗಿ affidavitನಲ್ಲಿ ದಾಖಲಿಸಿದ್ದಾರೆ. ಓಕೆ, ಕಾನೂನು ದೇವತೆಯ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿರುವುದು ಏಕೆ? ಎಂಬುದು ಓದುಗರಾದ ನಿಮಗೆ ಇಷ್ಟೊತ್ತಿಗೆ ಗೊತ್ತಾಗಿರಬೇಕು ಅಲ್ವಾ?












Click it and Unblock the Notifications