ಅನಂತ ಪದ್ಮನಾಭನ ಸಂಪತ್ತಿಗೆ ಶಿವಸೇನೆಯಿಂದ ಬೆದರಿಕೆ!
ತಿರುವನಂತಪುರ, ಆ 3: ಐತಿಹಾಸಿಕ ಅನಂತ ಪದ್ಮನಾಭನ ಕೋಟಿ ಕೋಟಿ ಬೆಲೆಬಾಳುವ ಆಭರಣಕ್ಕೂ ಶಿವಸೇನೆಗೂ ಎಲ್ಲಿಂದ ಸಂಬಂಧ ಎಂದು ಆಶ್ಚರ್ಯ ಪಟ್ಟರೆ, ಅದಕ್ಕೆ ಇಲ್ಲಿದೆ ಉತ್ತರ.
ಅನಂತ ಪದ್ಮನಾಭ ದೇವಾಲಯದ ಸಮೀಪದಲ್ಲಿ ಶಿವಸೇನೆಯ ಕಚೇರಿ ಇದೆ. ಇದರಿಂದಾಗಿ ದೇವಾಲಯದ ಭದ್ರತೆಗೆ ಅಪಾಯವಿದೆ. ಶಿವಸೇನೆ ತನ್ನ ಈ ಕಚೇರಿಯನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ನ್ಯಾಯಾಲಯದ ಸಲಹೆಗಾರ ಗೋಪಾಲ್ ಸುಬ್ರಮಣ್ಯಂ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ.
ಶಿವಸೇನೆ ಪಕ್ಷದ ಕಾರ್ಯಕರ್ತರು ಕಚೇರಿಯಲ್ಲಿ ಪೆಟ್ರೋಲ್ ಬಾಂಬ್, ಮಚ್ಚು, ಲಾಂಗು, ನಾಡಬಾಂಬಿನಂತಹ ಸಮಾಜ ವಿರೋಧಿ ವಸ್ತುಗಳನ್ನು ಸಂಗ್ರಹಿಸಿಟ್ಟು ಕೊಂಡಿದ್ದಾರೆ. ದೇಗುಲದ ನೆಲಮಾಳಿಗೆಯಲ್ಲಿ ಅಪಾರ ಸಂಪತ್ತುಗಳು ಇರುವುದರಿಂದ ದೇಗುಲದ ಭದ್ರತೆಗೆ ಅಪಾಯವಿದೆ.
ದೇಗುಲದ ಆಡಳಿತ ಅಧಿಕಾರಿಯಾಗಿರುವ ಜಯಶೇಖರನ್ ಅನೇಕ ಅವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ. ಸಮೀಪದ ಪೋಲೀಸ್ ಠಾಣೆಯಲ್ಲಿ ಅವರ ಮೇಲೆ ಹಲವು ದೂರುಗಳು ದಾಖಲಾಗಿವೆ.
1.5 ಲಕ್ಷ ಕೋಟಿ ರೂಪಾಯಿ ಸಂಪತ್ತನ್ನು ಹೊಂದಿರುವ ಅನಂತ ಪದ್ಮನಾಭ ದೇವಾಲಯ ವಿಶ್ವದ ಶ್ರೀಮಂತ ದೇವಾಲಯಗಳಲ್ಲೊಂದು. ಈ ದೇವಾಲಯಕ್ಕೆ ಸಾಕಷ್ಟು ಭದ್ರತೆ ಒದಗಿಸಿದ್ದರೂ ಭದ್ರತೆಯ ವಿಚಾರದಲ್ಲಿ ಸಾಕಷ್ಟು ಲೋಪದೋಷಗಳಿವೆ.
ಶಿವಸೇನೆಯ ಕಚೇರಿ ಸಹಿತ ದೇವಾಲಯದ ಆಸುಪಾಸಿನಲ್ಲಿರುವ ಸುಮಾರು 36 ಕಟ್ಟಡಗಳನ್ನು ತೆರವುಗೊಳಿಸುವುದು ಸೂಕ್ತ ಎಂದು ಗೋಪಾಲ್ ಸುಬ್ರಮಣ್ಯಂ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ.