ದುರ್ವಿಧಿ: ಒಂಟಿ ಮಹಿಳೆಯ ದಾರುಣ ಹತ್ಯೆ

ಮೊದಲೇ ನೊಂದಿದ್ದ ಜೀವ ಅದು. ಮತ್ತಷ್ಟು ದಾರುಣವಾಗಿ ಆಕೆಯನ್ನು ಸಾಯಿಸಲಾಗಿದೆ. ಅದಕ್ಕೂ ಮುನ್ನ ಪಾಪಿಗಳು (ಪರಿಚಯಸ್ಥರು) ಆಕೆಯ ಮೇಲೆ ಅತ್ಯಾಚಾರವೆಸಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಹಿಳೆಯನ್ನು ಚಿನ್ನಪ್ಪನಹಳ್ಳಿ ನಿವಾಸಿ ಆಂಧ್ರದ ಚಿತ್ತೂರು ಮೂಲದ ಗಾಯಿತ್ರಿ (30) ಎಂದು ಗುರುತಿಸಲಾಗಿದೆ. ಈ ಮಹಿಳೆಯನ್ನು ಕೈಕಾಲು ಕಟ್ಟಿ ನಾಲ್ಕು ದಿನಗಳ ಹಿಂದೆಯೇ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದ್ದು, ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸೋಮವಾರ ಆಕೆಯ ತಂದೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಹಿನ್ನೆಲೆ: ಗಾಯತ್ರಿಯ ಪತಿ ಭಾಸ್ಕರ್ ಎಚ್ಎಎಲ್ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದರು. ಆರು ವರ್ಷಗಳ ಹಿಂದೆ ಅಗ್ನಿ ದುರಂತದಲ್ಲಿ ಅವರು ಮೃತಪಟ್ಟಿದ್ದರು. ನಂತರ ಪತಿಯ ಕೆಲಸ ಗಾಯತ್ರಿಗೆ ದೊರೆತಿತ್ತು. ಇವರಿಗೆ 12 ವರ್ಷದ ಉಮೇಶ್ ಎಂಬ ಮಗನಿದ್ದು, ಈತ ಚಿತ್ತೂರಿನಲ್ಲಿರುವ ಅಜ್ಜಿ-ತಾತನ ಆಶ್ರಯದಲ್ಲಿದ್ದಾನೆ.
ಎರಡು ವರ್ಷಗಳ ಕಾಲ ಕೆಲಸ ಮಾಡಿದ ನಂತರ ಗಾಯತ್ರಿ ಕೆಲಸ ಬಿಟ್ಟಿದ್ದರು. ಚಿನ್ನಪ್ಪನಹಳ್ಳಿಯಲ್ಲಿರುವ ಕೃಷ್ಣನ್ ಎಂಬುವರಿಗೆ ಸೇರಿದ ಕಟ್ಟಡದ ನಾಲ್ಕನೇ ಮಹಡಿಯಲ್ಲಿರುವ ಸಣ್ಣ ಕೊಠಡಿಯಲ್ಲಿ ಒಂದು ವರ್ಷದಿಂದ ಒಂಟಿಯಾಗಿ ವಾಸವಿದ್ದರು. ಪತಿಯ ಪಿಂಚಣಿ ಹಣದಲ್ಲಿ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.
ಆಂಧ್ರದಲ್ಲಿರುವ ಪೋಷಕರು ಹಾಗೂ ಮಗನಿಗೆ ಪ್ರತಿದಿನ ಕರೆ ಮಾಡಿ ಮಾತನಾಡಿಸುತ್ತಿದ್ದ ಗಾಯತ್ರಿ, ನಾಲ್ಕು ದಿನಗಳಿಂದ ಕರೆ ಮಾಡಿರಲಿಲ್ಲ. ಪೋಷಕರು ಹಲವು ಬಾರಿ ಕರೆ ಮಾಡಿದ್ದರು. ಆದರೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಗಾಬರಿಗೊಂಡ ತಂದೆ ನಾರಾಯಣ ಸೋಮವಾರ ಬೆಳಗ್ಗೆ ಮಗಳ ಮನೆಗೆ ಧಾವಿಸಿದ್ದರು. ಒಳಗಿನಿಂದ ವಾಸನೆ ಬರುತ್ತಿತ್ತು. ಮಹದೇವಪುರ ಠಾಣೆಗೆ ತೆರಳಿ ಮಾಹಿತಿ ನೀಡಿದರು.
ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ಒಡೆದು ನೋಡಿದಾಗ ಮಂಚದ ಮೇಲೆ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎರಡೂ ಕೈ ಮತ್ತು ಕಾಲುಗಳನ್ನು ಹಗ್ಗದಿಂದ ಮಂಚಕ್ಕೆ ಕಟ್ಟಿ ನಂತರ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿತ್ತು. ಮನೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, ಅಲ್ಮೆರಾ ಸಹ ಒಡೆದು ಹಾಕಲಾಗಿದೆ.
ಪರಿಚಯ ಇರುವವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಜತೆಗೆ ಅವರ ಮೇಲೆ ಅತ್ಯಾಚಾರ ನಡೆದಿರುವ ಶಂಕೆಯಿದ್ದು, ಶವ ಪರೀಕ್ಷೆ ವರದಿ ಬಂದ ನಂತರ ಸತ್ಯಾಂಶ ತಿಳಿಯಲಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications