50 ಕೋಟಿಯ ಆನೆ ದಂತ ಸುಡಲು ಕೇರಳ ನಿರ್ಧಾರ!

ರಾಜ್ಯದ ಅರಣ್ಯ ಇಲಾಖೆಯ ಬಿಗಿ ಭದ್ರತಾ ಕೊಠಡಿಗಳಲ್ಲಿ ಸುಮಾರು ಎರಡು ದಶಕಗಳಿಂದ ಈ ಆನೆ ದಂತವನ್ನು ಸಂಗ್ರಹಿಸಲಾಗಿದೆ. ಇದರ ಮೌಲ್ಯ 50 ಕೋಟಿ ರೂ. ಇದನ್ನು ಕಾಯುವುದು ಸರ್ಕಾರಕ್ಕೆ ಸವಾಲಾಗಿದೆ. ಆದ್ದರಿಂದ ಬೆಂಕಿಗೆ ಹಾಕಲು ಚಿಂತನೆ ನಡೆಸಿದೆ.
80ರ ದಶಕದ ತನಕ ಇಲಾಖೆ ಅರಣ್ಯ ಕಳ್ಳರಿಂದ ಮತ್ತು ಕಾಡಿನಲ್ಲಿ ಆನೆಗಳು ಸತ್ತಾಗ ಸಿಕ್ಕಿದ ದಂತಗಳನ್ನು ಹರಾಜು ಹಾಕುತ್ತಿತ್ತು. ಆದರೆ ಈಗ ಕಾನೂನಿನಲ್ಲಿ ಅದಕ್ಕೆ ಅನುಮತಿ ಇಲ್ಲ. ಆದ್ದರಿಂದ ಭದ್ರತಾ ಕೊಠಡಿಯಲ್ಲಿ ಅದನ್ನು ಸಂರಕ್ಷಿಸಿ, ಕಾವಲು ಕಾಯಬೇಕಾಗಿದೆ.
ಕಾನೂನು ಏನು : ವನ್ಯಜೀವಿ ಸಂರಕ್ಷಣಾ ಕಾಯ್ದೆ 1991ರಲ್ಲಿ ತಿದ್ದುಪಡಿ ಮಾಡಿ, ಆನೆದಂತಗಳ ಮಾರಾಟವನ್ನು ನಿಷೇಧಿಸಲಾಗಿದೆ. ಆದ್ದರಿಂದ ದಾಸ್ತಾನಿರುವ 50 ಕೋಟಿ ಮೌಲ್ಯದ ದಂತಗಳನ್ನು ಏನು ಮಾಡುವುದು ಎಂಬುದು ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಮೂರು ಟನ್ ಆನೆದಂತವನ್ನು ಮಾರಾಟ ಮಾಡುವಂತಿಲ್ಲ. ಭದ್ರತಾ ಕೊಠಡಿಯಲ್ಲಿ ಸಂಗ್ರಹಿಸಿ ಕಾವಲು ಕಾಯುವುದು ಇಲಾಖೆಗೆ ಹೊರೆ. ಆದ್ದರಿಂದ ದಂತಗಳನ್ನು ಸುಡುವ ತೀರ್ಮಾನಕ್ಕೆ ಕೇರಳ ಸರ್ಕಾರ ಬಂದಿದೆ.
ಕಳ್ಳರ ಹಾವಳಿ : ಎಷ್ಟು ಭದ್ರತೆಯ ಕೊಠಡಿಯಲ್ಲಿಟ್ಟರೂ ಆನೆದಂತಗಳು ಕಳ್ಳರ ಪಾಲಾಗುವ ಭಯವೂ ಇದೆ. ಆನೆದಂತಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದರಿಂದ ಕಳ್ಳರು ಇದನ್ನು ಕದಿಯುವ ಭೀತಿಯು ಇದೆ. 2002ರಲ್ಲಿ ದಾಸ್ತಾನಿನಿಂದಲೇ ದಂತವನ್ನು ಕದ್ದ ಪ್ರಕರಣಗಳು ಇವೆ.
ಆದ್ದರಿಂದ ಕೋಟ್ಯಾಂತರ ರೂ. ಬೆಳೆಬಾಳುವ ದಂತಗಳನ್ನು ಸಂರಕ್ಷಿಸುವುದು ಹೇಗೆ ಎಂಬುದು ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ. ಕಾನೂನಿನ ತೊಡಕಿನಿಂದಾಗಿ ಬೆಳೆಬಾಳುವ ವಸ್ತು ಬೆಂಕಿಗೆ ಆಹುತಿಯಾಗುವ ಸಾಧ್ಯತೆ ಇದೆ.












Click it and Unblock the Notifications