ಬ್ಯಾಂಕ್ ಎಟಿಎಂ ಕದ್ದೊಯ್ಯುತ್ತಿದ್ದ ಖದೀಮರು ಸೆರೆ ಸಿಕ್ಕರು

ಯಾವುದೋ ಕೇಸಿನ ಸಂಬಂಧ ಆರೋಪಿಗಳನ್ನು ವಿಚಾರಣೆ ಮಾಡುತ್ತಿದ್ದಾಗ ಅವರಲ್ಲೊಬ್ಬ ATM ದರೋಡೆ ಬಗ್ಗೆ ಬಾಯ್ಬಿಟ್ಟಾಗ ಮತ್ತಷ್ಟು ತನಿಖೆಗಿಳಿದ ಪೊಲೀಸರು ಇಡೀ ಜಾಲವನ್ನು ಬೇಧಿಸಿದ್ದಾರೆ. ಕೃತ್ಯ ಎಸಗಿದ್ದ ಒಟ್ಟು ಏಳು ಡಕಾಯಿತರನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.
ಅಂದಹಾಗೆ ಖಾಸಗಿ ಸುದ್ದಿವಾಹಿನಿಯಲ್ಲಿ ಪ್ರಸಾರವಾದ ಅಪರಾಧ ಕುರಿತ ಕಾರ್ಯಕ್ರಮದಿಂದ ಪ್ರೇರಣೆಗೊಂಡು ನಗರದ ಹೊರವಲಯದಲ್ಲಿ ಈ ತಂಡ ಎಟಿಎಂ ಕೇಂದ್ರಗಳನ್ನು ದೋಚತೊಡಗಿತ್ತು. ಬಂಧಿತರೆಲ್ಲ 30 ವರ್ಷದೊಳಗಿನವರಾಗಿದ್ದು, ಮೋಜಿನ ಜೀವನ ನಡೆಸುತ್ತಿದ್ದರು. ಬಂಧನಕ್ಕೂ ಮುನ್ನ ಪೊಲೀಸರು ಆರೋಪಿಗಳ ಚಲನವಲನದ ಮೇಲೆ ನಾಲ್ಕಾರು ದಿನಗಳ ಕಾಲ ಕಣ್ಣಿಟ್ಟು, ಅವರ ಮೊಬೈಲ್ ಫೋನುಗಳನ್ನು ಟ್ರ್ಯಾಪ್ ಮಾಡಿ, one fine day ಹಿಡಿದುಬಿಟ್ಟರು.
ಹೊಸಕೋಟೆ ಸಬ್ ಇನ್ಸ್ಪೆಕ್ಟರ್ ಫಾರೂಕ್ ಪಾಷಗೆ ಮೊದಲ ಸುಳಿವು:
ತಾವು ಸಲೀಸಾಗಿ ಸಿಕ್ಕಿಬೀಳುತ್ತೇವೆ ಎಂದು ಮೊಬೈಲುಗಳನ್ನು ಬಳಸದೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಡಕಾಯಿತರ ತಂಡಕ್ಕೆ ಕೊನೆಗೆ ಸಿಸಿಟಿವಿ ಮುಳುವಾಗಿದೆ. ಬಾಗಲೂರಿನ ದ್ವಾರಕ ನಗರದ ಕೃತ್ಯದಲ್ಲಿ ಸಿಸಿ ಟಿವಿಯಲ್ಲಿ ಕೈಗೆ ಬಳೆ ಹಾಕಿಕೊಂಡಿದ್ದ ಒಬ್ಬ ಆರೋಪಿಯ (ಪ್ರವೀಣ) ಗುರುತು ಚಿತ್ರೀಕರಣವಾಗಿತ್ತು. ಆನಂತರ ಹೆಬ್ಬಗೋಡಿಯ ಇಗ್ಗಲೂರಿನ ಪ್ರಕರಣದಲ್ಲಿ ಸಿಸಿ ಟಿವಿಯಲ್ಲಿ ಕಾರಿನ ನಂಬರ್ ಪತ್ತೆಯಾಯಿತು. ಈ ಎರಡು ಸುಳಿವುಗಳು ಆರೋಪಿಗಳ ಪತ್ತೆಯಲ್ಲಿ ಪ್ರಮುಖ ಪಾತ್ರವಹಿಸಿವೆ.
ಅದಕ್ಕೂ ಮುನ್ನ, ಚನ್ನರಾಯಪಟ್ಟಣ ಸಮೀಪ ಪೆಟ್ರೋಲ್ ಟ್ಯಾಂಕರ್ ಕಳವು ಪ್ರಕರಣ ಸಂಬಂಧ ಅರುಣ್ ಪ್ರಸಾದ್ ಹಾಗೂ ಹರ್ಷನನ್ನು ಹೊಸಕೋಟೆ ಠಾಣೆಯ ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಫಾರೂಕ್ ಪಾಷ ತಂಡ ಬಂಧಿಸಿತ್ತು. ಈ ಆರೋಪಿಗಳ ವಿಚಾರಣೆ ವೇಳೆ ಹರ್ಷ, ತನ್ನ ಸ್ನೇಹಿತರು ಎಟಿಎಂ ಕಳವು ಮಾಡಿರುವುದಾಗಿ ಹೇಳುತ್ತಿದ್ದರು ಎಂಬ ಮಾಹಿತಿ ಬಹಿರಂಗ ಪಡಿಸಿದ್ದನು.
ಪೊಲೀಸರಿಗೆ ಇಷ್ಟು ಸಾಕಾಗಿತ್ತು. ಇದೇ ಸುಳಿವನ್ನು ಹಿಡಿದು ಕೂಡಲೇ ಜಾಗೃತರಾದ ಪೊಲೀಸರು ಹಿರಿಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಈ ಮಾಹಿತಿ ಮೇರೆಗೆ ಸೋಮು, ರಾಮು, ಕೋತಿ ಸೇರಿದಂತೆ 7 ಮಂದಿಯನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಆನೇಕಲ್ ಪಟ್ಟಣದ ಸೋಮಶೇಖರ್ ಅಲಿಯಾಸ್ ಸೋಮು, ಹೊಸಕೋಟೆಯ ರಾಮಸ್ವಾಮಿ ಅಲಿಯಾಸ್ ರಾಮ, ಪ್ರವೀಣ್ ರಾವ್, ನವೀನ್ ಕುಮಾರ್, ನಿಶಾಂತ್ ಅಲಿಯಾಸ್ ಕೋತಿ, ರಮೇಶ್ ಅಲಿಯಾಸ್ ಪೀರಾ ಹಾಗೂ ರಮೇಶ ಅಲಿಯಾಸ್ ಶೀಕಳ್ಳಿ ಬಂಧಿತರು. ಆರೋಪಿಗಳಿಂದ ಸುಮಾರು 14.5 ಲಕ್ಷ ರೂ ನಗದು, ವಾಹನಗಳು ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಟಿಎಂ ಕಳ್ಳತನ ಪ್ರಕರಣದ ಕುರಿತು ಮಾಹಿತಿ ನೀಡಿ, ಇತ್ತೀಚೆಗೆ ಬಾಗಲೂರು ಹಾಗೂ ಹೆಬ್ಬಗೋಡಿ ಬಳಿ ಎಟಿಎಂ ಕೇಂದ್ರಗಳಲ್ಲಿ ಎಟಿಎಂ ಯಂತ್ರಗಳನ್ನು ಕಳವು ಮಾಡಿದ ಈ ಆರೋಪಿಗಳು ಮೋಜಿನ ಜೀವನ ನಡೆಸುತ್ತಿದ್ದರು ಎಂದು ಐಜಿಪಿ ಅಮರ್ ಕುಮಾರ್ ಪಾಂಡೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಾಗಲೂರಿನ ದ್ವಾರಕ ನಗರದ ಎಸ್ಬಿಎಂ ಬ್ಯಾಂಕ್ಗೆ ಸೇರಿದ ಎಟಿಎಂ ಹಾಗೂ ಹೆಬ್ಬಗೋಡಿ ಬಳಿಯ ಇಗ್ಗಲೂರು ಗ್ರಾಮದ ಬ್ಯಾಂಕ್ ಆಫ್ ಮಹಾರಾಷ್ಟ್ರ ಬ್ಯಾಂಕ್ ಎಟಿಎಂ ಕೇಂದ್ರಗಳಲ್ಲಿ ಎಟಿಎಂ ಯಂತ್ರಗಳನ್ನು ಇದೇ ತಂಡ ದೋಚಿತ್ತು.
ಈ ಕೃತ್ಯ ನಂತರ ಇಗ್ಗಲೂರು ಬಳಿ ದೋಚಲಾಗಿದ್ದ ಎಟಿಎಂ ಯಂತ್ರವನ್ನು ಎರಡು ಭಾಗ ಮಾಡಿ ತಮಿಳುನಾಡಿನ ಹೊಸೂರು ತಾಲೂಕಿನ ನಾಗೂಂಡಪಲ್ಲಿ ಗ್ರಾಮದ ಕೆರೆಯಲ್ಲಿ ಎಸೆದಿದ್ದರು. ಇದರಲ್ಲಿ 10 ಲಕ್ಷ ರೂ ಹಣವನ್ನು ಆರೋಪಿಗಳು ಹಂಚಿಕೊಂಡಿದ್ದರು.
ಅದೇ ರೀತಿ ಬಾಗಲೂರಿನ ಎಸ್ ಬಿಎಂ ಬ್ಯಾಂಕ್ ಎಟಿಎಂನಲ್ಲಿದ್ದ 24.35 ಲಕ್ಷ ರೂ ಎಗರಿಸಿ, ಬಳಿಕ ಎಟಿಎಂ ಯಂತ್ರವನ್ನು ಕನಕಪುರ ತಾಲೂಕಿನ ಹಾರೋಹಳ್ಳಿ ಸಮೀಪದ ತಟ್ಟೆಕೆರೆ ಗ್ರಾಮದ ಕೆರೆಯಲ್ಲಿ ಎಸೆದಿದ್ದರು ಎಂದು ಕೇಂದ್ರ ವಲಯ ಐಜಿಪಿ ಅಮರ್ ಕುಮಾರ್ ಪಾಂಡೆ ಸುದ್ದಿಗಾರರಿಗೆ ವಿವರಿಸಿದರು.












Click it and Unblock the Notifications