ಕೊಡಗಿನ ಮಳೆಯ ಸಂತಸ ಮತ್ತು ಸಂಕಟದ ಚಿತ್ರ
ಮಡಿಕೇರಿ, ಜು. 24 : ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ ಕೊಂಚ ತಗ್ಗಿದಂತೆ ಕಂಡುಬಂದರೂ ಮಡಿಕೇರಿ, ಸಂಪಾಜೆ, ಭಾಗಮಂಡಲ, ಸೋಮವಾರಪೇಟೆ, ಶಾಂತಳ್ಳಿ, ಶನಿವಾರಸಂತೆ, ಕೊಡ್ಲಿಪೇಟೆ, ಶ್ರೀಮಂಗಲ ಮತ್ತಿತರ ಕಡೆಗಳಲ್ಲಿ ಧಾರಾಕಾರ ಮಳೆ ಮುಂದುವರೆದಿದೆ.
ಜಿಲ್ಲೆಯಲ್ಲಿ ಕಳೆದ 10-15 ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಜಾನುವಾರು ಹಾನಿ, ರಸ್ತೆಗಳು, ವಿದ್ಯುತ್ ಕಂಬಗಳು ಮತ್ತು ತಂತಿಗಳು, ರಸ್ತೆ ಸಂಪರ್ಕ ಕಡಿತ, ಬರೆ ಕುಸಿತ ಹೀಗೆ ಸಾಕಷ್ಟು ಹಾನಿ ಉಂಟಾಗಿದೆ. ಮಾದಾಪುರದಿಂದ ಸೂರ್ಲಬ್ಬಿ ರಸ್ತೆ ಮಾರ್ಗದ ಶಿರಂಗಳ್ಳಿ ಬಳಿ ರಸ್ತೆಬದಿ ಬರೆ ಕುಸಿತ ಉಂಟಾಗಿದೆ. ಗರ್ವಾಲೆ-ಸೂರ್ಲಬ್ಬಿ ನಡುವಿನ ಮಾರ್ಗ ಮಧ್ಯ ವಿದ್ಯುತ್ ಕಂಬ ಮತ್ತು ತಂತಿ ನೆಲಕುರುಳಿವೆ.
ಕೊಡಗು ಜಿಲ್ಲೆಯಾದ್ಯಂತ ಜನವರಿಯಿಂದ ಇಲ್ಲಿಯವರೆಗಿನ 1924.28 ಮಿ.ಮೀ ಮಳೆ ಬಿದ್ದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 809.05 ಮಿ.ಮೀ ಮಳೆ ದಾಖಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಈವರೆಗೆ ಶೇ.100ಕ್ಕಿಂತಲೂ ಹೆಚ್ಚು ಮಳೆ ಬಿದ್ದಿದೆ. ಹಾಗೆಯೆ, ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ತಾಲೂಕುಗಳಲ್ಲಿಯೂ ಧಾರಾಕಾರ ಮಳೆ ಸುರಿದಿದೆ.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಮಂಗಳವಾರದ ನೀರಿನ ಮಟ್ಟ 2,854.32 ಅಡಿಗಳು. ಕಳೆದ ವರ್ಷ ಇದೇ ದಿನ 2,835.95 ಅಡಿ ಮಾತ್ರ ನೀರಿತ್ತು. ಹಾರಂಗಿಯಲ್ಲಿ ಮಂಗಳವಾರದ ನೀರಿನ ಒಳ ಹರಿವು 13161 ಕ್ಯೂಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 2917 ಕ್ಯೂಸೆಕ್ ಮಾತ್ರವಿತ್ತು. ಇಂದಿನ ನೀರಿನ ಹೊರ ಹರಿವು ನದಿಗೆ 14600 ಕ್ಯೂಸೆಕ್, ನಾಲೆಗೆ 700 ಕ್ಯೂಸೆಕ್ ನೀರು ಹರಿಯುತ್ತಿದೆ.
ಒಟ್ಟಾರೆಯಾಗಿ ಮುಂಗಾರು ಮಳೆಯಿಂದಾಗಿ ನದಿ, ಹಳ್ಳಕೊಳ್ಳಗಳು ತುಂಬಿ ತುಳುಕಿ ಸಂತಸದ ಹೊನಲು ಹರಿಸಿದ್ದರೆ, ಆಸ್ತಿಪಾಸ್ತಿಗೂ ಸಾಕಷ್ಟು ಹಾನಿ ಉಂಟುಮಾಡಿದೆ. ರಸ್ತೆಗಳು ಕೊಚ್ಚಿಹೋಗಿವೆ, ಬತ್ತದ ಗದ್ದೆಗಳು ಮುಳುಗಿವೆ, ಜನ ಮನೆಮಠ ಕಳೆದುಕೊಂಡು ಪರಿತಪಿಸುತ್ತಿದ್ದಾರೆ. ಇಡೀ ಮಡಿಕೇರಿ ಜಿಲ್ಲೆಯ ಮಳೆಯ ನೋಟ ಇಲ್ಲಿದೆ.
ಮಹಾವೃಷ್ಟಿಗೆ ಹೊಲಗದ್ದೆಗಳೆಲ್ಲ ಜಲಾವೃತ
ಸೂರ್ಲಬ್ಬಿಗೆ ತೆರಳುವಾಗ ಎಡಕ್ಕೆ ತಿರುಗಿದರೆ ಮುಟ್ಲು ಗ್ರಾಮದಲ್ಲಿನ ಭತ್ತದ ಗದ್ದೆಗಳು ಮಹಾಮಳೆಗೆ ಜಲಾವೃತವಾಗಿದೆ. ಜಾನುವಾರುಗಳು ಮಳೆಯ ಹೊಡೆತ ತಾಳಲಾರದೆ ಅಸುನೀಗಿವೆ.
ವಿದ್ಯುತ್ ತಂತಿ ಕಡಿತದಿಂದ ನೋ ಕರೆಂಟ್
ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಮರಗಳು ಉರುಳಿ ವಿದ್ಯುತ್ ತಂತಿಗಳು ಕತ್ತರಿಸಿ ಬಿದ್ದಿವೆ. ಇದರಿಂದಾಗಿ ಗ್ರಾಮದ ಜನರೆಲ್ಲ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.
ವಿದ್ಯುತ್ ತಂತಿ ಕಡಿತದ ಮತ್ತೊಂದು ದೃಶ್ಯ
ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾಡುಗಳಲ್ಲಿ ಮರಗಳು ಉರುಳಿಬಿದ್ದಿದ್ದು, ವಿದ್ಯುತ್ ತಂತಿಗಳು ಕತ್ತರಿಸಿಬಿದ್ದಿವೆ. ಮತ್ತೆ ದುರಸ್ತಿಯಾಗುವುದು ಇನ್ನೆಂದೋ?
ಹೊಲಗದ್ದೆಗಳಿಗೆ ಮಳೆಯ ಸಿಂಗಾರ
ಮಕ್ಕಂದೂರು ಜಿ.ಪಂ. ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಿಂದಾಗಿ ಭತ್ತದ ಬೆಳೆ ಹಾನಿಯುಂಟಾಗಿದೆ. ಬೆಳೆಗಳೆಲ್ಲ ನಾಶವಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಪರಿಹಾರಕ್ಕಾಗಿ ಸರಕಾರದ ಮೊರೆ ಹೋಗಿದ್ದಾರೆ.
ಗ್ರಾಮಸ್ಥರಿಗೆ ಕಾಳುಕಡಿಗಳ ವಿತರಣೆ
ಜಿಲ್ಲಾಡಳಿತ ಜನ-ಜಾನುವಾರು ಹಾನಿಗೆ ಸಂಬಂಧಿಸಿದಂತೆ ಆಯಾಯ ಸಂದರ್ಭಗಳಲ್ಲಿಯೂ ಪ್ರಕೃತಿ ವಿಕೋಪದಡಿ ಪರಿಹಾರ ವಿತರಿಸುತ್ತಿದೆ.
ಸಂತ್ರಸ್ತರಿಗೆ ಗಂಜಿ ಕೇಂದ್ರ
ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರನ್ನು ಸ್ಥಳಾಂತರಿಸಲು ಮಡಿಕೇರಿ ನಗರ ಸೇರಿದಂತೆ ನೆಲ್ಯಹುದಿಕೇರಿ, ಕರಡಿಗೋಡು, ಮೊಣ್ಣಂಗೇರಿ, ನಾಪೋಕ್ಲು ಮತ್ತಿತರ ಕಡೆಗಳಲ್ಲಿ ಗಂಜಿಕೇಂದ್ರ ತೆರೆದಿದೆ. ಭಾಗಮಂಡಲದಲ್ಲಿ ಬೋಟ್ ವ್ಯವಸ್ಥೆ ಮಾಡಲಾಗಿದೆ.
ಜಾನುವಾರುಗಳ ಸಾವು
ಜಾನುವಾರುಗಳು ಮಳೆಯ ಹೊಡೆತ ತಾಳಲಾರದೆ ಅಸುನೀಗಿವೆ. ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾ.ಪಂ.ವ್ಯಾಪ್ತಿಯ ಮುಟ್ಲು ಮತ್ತು ಹಮ್ಮಿಯಾಲ ಭಾಗಗಳಲ್ಲಿ ಮಹಾಮಳೆಯಿಂದ ಅಲ್ಲಿನ ನಾಗರಿಕರು ತತ್ತರಿಸಿದ್ದಾರೆ.
ಅಧಿಕಾರಿಗಳಿಂದ ಮಳೆಹಾನಿಯ ವೀಕ್ಷಣೆ
ತಹಶೀಲ್ದಾರ್ ಅನಿಲ್ ಕುಮಾರ್ ಅವರು ಮುಟ್ಲು-ಹಮ್ಮಿಯಾಲ ಭಾಗಗಳಲ್ಲಿ ಧಾರಾಕಾರ ಮಳೆಯಿಂದಾಗಿ ಭತ್ತದ ಬೆಳೆ ಹಾನಿಯಾಗಿದ್ದು, ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಿ ತಕ್ಷಣವೇ ಪರಿಹಾರ ವಿತರಿಸಲು ಕ್ರಮವಹಿಸಲಾಗುವುದು. ಹೆಚ್ಚಿನ ಸೀಮೆಎಣ್ಣೆ ವಿತರಣೆ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.
ಜಿಲ್ಲಾಡಳಿತದಿಂದ ಪರಿಹಾರ ಸಿಗುವುದೆ?
ಮಕ್ಕಂದೂರು ಜಿ.ಪಂ.ಸದಸ್ಯರಾದ ಶಾಂತೆಯಂಡ ರವಿಕುಶಾಲಪ್ಪ, ಮಡಿಕೇರಿ ತಾಲ್ಲೂಕು ತಹಶೀಲ್ದಾರ್ ಅನಿಲ್ಕುಮಾರ್, ಗಾಳಿಬೀಡು ಗ್ರಾ.ಪಂ.ಸದಸ್ಯರಾದ ಸುಭಾಸ್ ಸೋಮಯ್ಯ ಅವರು ಮಕ್ಕಂದೂರು ಜಿ.ಪಂ.ವ್ಯಾಪ್ತಿಯ ಮುಟ್ಲು, ಹಮ್ಮಿಯಾಲದ ನೆರೆ ಪೀಡಿತ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಅಳಲು ತೋಡಿಕೊಂಡ ಗ್ರಾಮಸ್ಱರು
ಮುಟ್ಲು ಗ್ರಾಮದ ಗ್ರಾಮಸ್ಥರು ಈ ವ್ಯಾಪ್ತಿಯಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದ್ದು, ವ್ಯಾಪಕ ಮಳೆಯಿಂದ ಬೆಳೆಹಾನಿಯಾಗಿದೆ. ಕೂಡಲೇ ಪರಿಹಾರ ವಿತರಿಸಬೇಕು. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಾನುವಾರುಗಳು ಮೃತಪಟ್ಟಿವೆ, ಜನರು ತತ್ತರಿಸಿದ್ದಾರೆ ಎಂದು ಅಳಲು ತೋಡಿಕೊಂಡರು.
ಅತಿವೃಷ್ಟಿಯಿಂದ ಭತ್ತ ಸರ್ವನಾಶ
ಮುಟ್ಲು-ಹಮ್ಮಿಯಾಲ ವ್ಯಾಪ್ತಿಯಲ್ಲಿ 200 ರಿಂದ 300 ಇಂಚು ಮಳೆಯಾಗಿದ್ದು, ಕಳೆದ 15 ದಿನದಲ್ಲಿ ನಾಟಿ ಮಾಡಲಾಗಿರುವ ಭತ್ತದ ಕೃಷಿ ನೀರಿನಲ್ಲಿ ಮುಳುಗಿ ನಾಶವಾಗಿದ್ದು, ತಕ್ಷಣವೇ ಪರಿಹಾರ ವಿತರಿಸುವಂತಾಗಬೇಕು. ಇಲ್ಲಿನ ಜನರ ಸಂಕಷ್ಟವನ್ನು ನಿವಾರಣೆ ಮಾಡಬೇಕು. ಕಳೆದ ಬಾರಿ ಮುಟ್ಲು, ಹಮ್ಮಿಯಾಲ ಭಾಗದಲ್ಲಿ ಭಾರಿ ಮಳೆಯಿಂದ ಹಾನಿಯಾದ ಬೆಳೆಗೆ ಪರಿಹಾರ ನೀಡಿಲ್ಲ. ಹೆಚ್ಚಿನ ಸೀಮೆ ಎಣ್ಣೆ ಸಿಗುತ್ತಿಲ್ಲ. ವಿದ್ಯುತ್ ವ್ಯತ್ಯಯದಿಂದ ಕತ್ತಲಲ್ಲಿ ಬದುಕುವಂತಾಗಿದೆ ಎಂದು ಮುಟ್ಲು ಗ್ರಾಮಸ್ಥರಾದ ಸುರೇಶ್ ತಿಳಿಸಿದರು.
ತುಂಬಿ ಹರಿಯುತ್ತಿರುವ ಜಲಧಾರೆ
ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ನದಿ, ತೊರೆ, ಹಳ್ಳಕೊಳ್ಳಗಳು, ಜಲಪಾತಗಳು ಉಕ್ಕಿ ಹರಿಯುತ್ತಿರುವುದು ಹರ್ಷ ತಂದಿದೆ.
ಅಪಾಯಕಾರಿ ರಸ್ತೆಗಳು
ಭಾರೀ ಮಳೆ ಮತ್ತು ಬಸ್ಸುಗಳ ಕಳಪೆಮಟ್ಟದಿಂದಾಗಿ ಕರ್ನಾಟಕದಲ್ಲಿ ಅಪಘಾತಗಳು ಸಂಭವಿಸುತ್ತಲೇ ಇವೆ. ಮೊದಲನೆಯದಾಗಿ ಬಸ್ಸುಗಳ ಗುಣಮಟ್ಟ ಸುಧಾರಿಸಬೇಕಾದರೆ, ಎರಡನೆಯದಾಗಿ ಇಂಥ ಗುಡ್ಡಗಾಡು ಪ್ರದೇಶದಲ್ಲಿ ಚಾಲಕರು ಜಾಗರೂಕತೆಯಿಂದ ಬಸ್ ಚಲಾಯಿಸಬೇಕಾಗಿದೆ.
ಗುಡ್ಡ ಕುಸಿತ
ಮಾದಾಪುರದಿಂದ ಸೂರ್ಲಬ್ಬಿ ರಸ್ತೆ ಮಾರ್ಗದ ಶಿರಂಗಳ್ಳಿ ಬಳಿ ರಸ್ತೆಬದಿ ಬರೆ ಕುಸಿತ ಉಂಟಾಗಿದೆ. ಗರ್ವಾಲೆ-ಸೂರ್ಲಬ್ಬಿ ನಡುವಿನ ಮಾರ್ಗ ಮಧ್ಯ ವಿದ್ಯುತ್ ಕಂಬ ಮತ್ತು ತಂತಿ ನೆಲಕುರುಳಿವೆ.
ರಸ್ತೆ ಸಂಪರ್ಕ ಸಂಪೂರ್ಣ ಕಡಿತ
ಗುಡ್ಡ ಕುಸಿತದಿಂದಾಗಿ ಹಲವಾರು ಗ್ರಾಮಗಳಲ್ಲಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಗುಡ್ಡಕುಸಿತದಿಂದಾಗಿ ರಸ್ತೆ ನಾಶ
ಭಾರೀ ಮಳೆಯಿಂದಾಗಿ ಗುಡ್ಡ ಕುಸಿದಿದ್ದು, ರಸ್ತೆಗೆ ಸಂಪೂರ್ಣ ಹಾನಿಯುಂಟಾಗಿದೆ. ಈ ರಸ್ತೆಯಲ್ಲಿ ಭಾರೀ ವಾಹನ ಚಲಾಯಿಸುವ ಸಾಹಸ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ತುಂಬಿ ಹರಿಯುತ್ತಿರುವ ನದಿ ತೊರೆ
ಕಳೆದ ವರ್ಷ ಇಂಥ ನೋಟ ನೋಡಲು ಸಿಕ್ಕಿದ್ದಿಲ್ಲ. ಈ ಬಾರಿ ಭಾರೀ ವರ್ಷಧಾರೆಯಿಂದಾಗಿ ನದೆ, ತೊರೆಗಳು ಉಕ್ಕಿ ಹರಿಯುತ್ತಿವೆ. ಹಾಗೆಯೆ, ಸಂಕಷ್ಟಗಳ ಸರಮಾಲೆಯನ್ನು ತಂದೊಡ್ಡಿವೆ.
ಕೊಚ್ಚೆ ರಸ್ತೆಯಲ್ಲಿ ಅಧಿಕಾರಿಗಳ ವೀಕ್ಷಣೆ
ಜಡಿಮಳೆ ಮತ್ತು ಗುಡ್ಡ ಕುಸಿತದಿಂದಾಗಿ ರಸ್ತೆಗಳೆಲ್ಲ ಕೆಸರುಮಯವಾಗಿವೆ. ಈ ರಸ್ತೆಗಳಲ್ಲಿ ಅಡ್ಡಾಡುವುದೇ ದುಸ್ತರವಾಗಿದೆ. ಇಂಥ ಸ್ಥಳದ ವೀಕ್ಷಣೆಗಾಗಿ ಕೊಡೆ ಹಿಡಿದುಬಂದಿರುವ ಅಧಿಕಾರಿಗಳು.
ಅಧಿಕಾರಿಗಳಿಂದ ಸಂತ್ರಸ್ತರ ವಿಚಾರಣೆ
ಬೆಟ್ಟ-ಗುಡ್ಡ, ಕಾನನಗಳಲ್ಲಿ ವಾಸಿಸುವ ಜನರು ಮನೆಯ ಬಳಿ ಯಾವ ಸಂದರ್ಭದಲ್ಲಿ ಬರೆ ಕುಸಿಯುತ್ತದೆಯೇ ಎನ್ನುವ ಆತಂಕದಲ್ಲಿ ದಿನ ದೂಡುತ್ತಿದ್ದಾರೆ.
ಅಪಾಯಕಾರಿ ತಿರುವು
ನಿರಂತರ ಮಳೆ ಮತ್ತು ರಸ್ತೆ ಹಾನಿಯಿಂದಾಗಿ ವಾಹನಗಳು ಅತ್ಯಂತ ಜಾಗರೂಕತೆಯಿಂದ ಅಪಾಯಕಾರಿ ತಿರುವುಗಳಲ್ಲಿ ಚಲಿಸುತ್ತಿವೆ.
ಅಧಿಕಾರಿಗಳಿಂದ ವೀಕ್ಷಣೆ
ಮಹಾಮಳೆಯಿಂದ ಜನ-ಜಾನುವಾರು ಹಾನಿ, ಭತ್ತದ ಗದ್ದೆಗಳು ಜಲಾವೃತವಾಗಿವೆ, ಕಾಫಿ ಬೆಳೆಗೆ ಕೊಳೆ ರೋಗ, ಹಲವು ರಸ್ತೆ ಸಂಪರ್ಕ ಕಡಿತ, ವಿದ್ಯುತ್ ವ್ಯತ್ಯಯ, ಅಲ್ಲಲ್ಲಿ ಬರೆಕುಸಿತ, ಹಲವು ಕಟ್ಟಡಗಳು ಮಳೆಯಿಂದ ಸೋರುತ್ತಿವೆ.
ಗುಡ್ಡ ಕುಸಿತದ ಮತ್ತೊಂದು ನೋಟ
ಮಹಾಮಳೆಯಿಂದಾಗಿ ಗುಡ್ಡ ಕುಸಿದಿರುವುದು. ರಸ್ತೆ ದುರಸ್ತಿ ಸದ್ಯದಲ್ಲೇ ಮಾಡುವುದಾಗಿ ಅಧಿಕಾರಿಗಳು ಜನರಿಗೆ ವಾಗ್ದಾನ ನೀಡಿದ್ದಾರೆ.