ಒಂದು ಗ್ಲಾಸ್ ನೀಡಲು ಯೋಗ್ಯತೆ ಇಲ್ಲವೆ ಇವರಿಗೆ?
ಯಾದಗಿರಿ, ಜು. 23 : ಯಾದಗಿರಿ ಜಿಲ್ಲಾಧಿಕಾರಿಗಳ ಕಚೇರಿಗೆ ಬರುವ ಜನರಿಗಾಗಿ ಇಡಲಾಗಿರುವ ಕುಡಿಯುವ ನೀರಿಗೆ ಕನಿಷ್ಠ ಗ್ಲಾಸ್ ಸೌಲಭ್ಯ ನೀಡದ ಜಿಲ್ಲಾಡಳಿತ! ಬಡಜನತೆಗಾಗಿ ಒಂದು ಗ್ಲಾಸ್ ಇಡಲು ಯೋಗ್ಯತೆ ಇಲ್ಲವೆ ಇವರಿಗೆ? ಶೇಮ್.. ಶೇಮ್..
ಪ್ರತಿ ದಿನ ಜಿಲ್ಲೆಯ ವಿವಿಧ ಹಳ್ಳಿಗಳಿಂದ ತಮ್ಮ ಕೆಲ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಬರುವ ಜನರಿಗೆ ಬಾಯಾರಿಕೆಯಾದಾಗ ಕುಡಿಯಲು ಶುದ್ಧೀಕರಿಸಿದ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ, ಇಡಲಾಗಿರುವ ಕುಡಿಯುವ ನೀರಿಗೆ ಗ್ಲಾಸ್ ಸೌಲಭ್ಯ ಇಲ್ಲದ್ದರಿಂದ ಹೋಟೆಲ್ಗಳಿಗೆ ಹೋಗಿ ನೀರು ಕುಡಿಯುವುದು ಅಥವಾ ನೀರಿನ ಬಾಟಲ್ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾಲ-ಸೋಲ ಮಾಡಿಕೊಂಡು ತಮ್ಮ ಕೆಲ ಸಮಸ್ಯೆಗಳ ಪರಿಹಾರಕ್ಕೆ ಬರುವ ಜನರಿಗೆ ಜಿಲ್ಲಾಧಿಕಾರಿಯ ಅಂಗಳದಲ್ಲೇ ನೀರಿನ ಸಮಸ್ಯೆ ಎದುರಾಗಿದೆ. ಜಿಲ್ಲಾಧಿಕಾರಿಯನ್ನು ಭೇಟಿ ಮಾಡಲು ಬಂದ ಜನರು ಜಿಲ್ಲಾಧಿಕಾರಿಯ ಪ್ರವೇಶ ದ್ವಾರದಲ್ಲಿ ಗಂಟೆಗಟ್ಟಲೇ ನಿಂತು ಸುಸ್ತಾಗಿ ಉಸಪ್ಪಾ ಎಂದು ನೀರು ಕುಡಿಯಲು ಹೋದಾಗ, ಗ್ಲಾಸ್ ಸೌಲಭ್ಯ ಇಲ್ಲದೆ ಬೊಗಸೆಯಲ್ಲಿ ನೀರು ಕುಡಿಯುವ ದೃಶ್ಯ ಪ್ರತಿದಿನ ಸರ್ವೆ ಸಾಮಾನ್ಯವಾಗಿದೆ.
ಜಿಲ್ಲಾಧಿಕಾರಿಗಳ ಅಂಗಳದಲ್ಲೇ ಸಮಸ್ಯೆಗಳು ಇರುವಾಗ ನಮ್ಮ ಸಮಸ್ಯೆ ಬಗೆಹರಿಯುವುದಾದರೂ ಹೇಗೆ ಎಂಬ ಚಿಂತೆ ಜನರಲ್ಲಿ ಮನೆಮಾಡಿದೆ. ಈ ವಿಷಯ ಸಣ್ಣದೆನಿಸಬಹುದು. ಆದರೆ, ಈ ಸಣ್ಣ ವಿಷಯದ ಬಗ್ಗೆ ಅನೇಕ ಬಾರಿ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದರೂ ಗ್ಲಾಸ್ ಮಾತ್ರ ಇಡದೇ ಇರುವುದು ವಿಪರ್ಯಾಸದ ಸಂಗತಿ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹವಾನಿಯಂತ್ರಿತ ಗಾಳಿಗೆ ಕಾರ್ಯನಿರ್ವಹಿಸುತ್ತಾ ಬಿಸ್ಲೇರಿ ಬಾಟಲ್ ನೀರು ಕುಡಿಯುವ ದಪ್ಪ ಚರ್ಮದ ಅಧಿಕಾರಿಗಳಿಗೆ, ಈ ಬಡ ಜನರ ಬೊಗಸೆಯಲ್ಲಿ ನೀರು ಕುಡಿಯುವ ಸಂಕಷ್ಟ ಅವರಿಗೇನು ತಿಳಿಯಬೇಕು? ಎನ್ನುವುದು ಅನೇಕ ಗ್ರಾಮಸ್ಥರ ಪ್ರಶ್ನೆ. ಈ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.
ತಮ್ಮ ಕಚೇರಿಯ ಇನ್ನಿತರ ಕಾಮಗಾರಿಗಾಗಿ ಸಾವಿರಾರು ರುಪಾಯಿ ಖರ್ಚು ಮಾಡುವ ಜಿಲ್ಲಾಡಳಿತ ಕೇವಲ 3 ರುಪಾಯಿಯ ಪ್ಲಾಸ್ಟಿಕ್ ಗ್ಲಾಸ್ ಅಥವಾ 15 ರುಪಾಯಿಯ ಸ್ಟೀಲ್ ಗ್ಲಾಸ್ ಇಡುವ ಯೋಗ್ಯತೆ ಜಿಲ್ಲಾಡಳಿತಕ್ಕೆ ಇಲ್ಲವೆ ಎಂದು ಗುಡುಗಿದ್ದಾನೆ ತುಮಕೂರ್ ಗ್ರಾಮದ ಮಲ್ಲಪ್ಪ.
ಯಾದಗಿರಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಇಡಲಾಗಿರುವ ಕುಡಿಯುವ ನೀರಿನ ಯಂತ್ರದ ಬಳಿ ಕೂಡಲೇ ಗ್ಲಾಸ್ ವ್ಯವಸ್ಥೆ ಮಾಡುವ ಮೂಲಕ ಜಿಲ್ಲಾಧಿಕಾರಿಗಳು ಸಮಸ್ಯೆಗೆ ಸುಖಾಂತ್ಯಗೊಳಿಸುವರೇ ಎಂಬುದು ಕಾದು ನೋಡಬೇಕಾಗಿದೆ. ಕನಿಷ್ಠ ಇಷ್ಟು ಸಣ್ಣ ಸೌಲಭ್ಯ ನೀಡಲು ಅವರು ವಿಫಲರಾದರೆ ಆ ಜಾಗದಲ್ಲಿ ಇರಬೇಕಾದರೂ ಏತಕ್ಕೆ?












Click it and Unblock the Notifications