ಲೋಕಸಭೆ: ಮೋದಿ ಸಾರಥ್ಯದ ಬಿಜೆಪಿ ಟೀಂ ಪ್ರಕಟ
ನವದೆಹಲಿ, ಜುಲೈ 20: ನೀವು ಯಾವಾಗ ಬೇಕಾದರೂ ಚುನಾವಣೆ ಮಾಡಿಕೊಳ್ಳಿ ನಾವಂತೂ ರೆಡಿ ಅನ್ನುತ್ತಿದೆ ಮೋದಿ ನೇತೃಥ್ವದ ಬಿಜೆಪಿ ಲೋಕಸಭಾ ಟೀಂ. ಇತ್ತೀಚೆಗೆ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದ್ದ ಬಿಜೆಪಿ, ನಿನ್ನೆ ಸಮಗ್ರ ಚುನಾವಣಾ ಟೀಂ ಅನ್ನು ಪ್ರಕಟಿಸಿದೆ.
ಪ್ರಧಾನಿ ಅಭ್ಯರ್ಥಿ ಯಾರು ಎಂಬ ಘೋಷಣೆಯೊಂದನ್ನು ಬಾಕಿಯಿಟ್ಟು (ಅದೂ ಬಹುತೇಕ ಆಖೈರಾಗಿದೆ) ಮುಂದೆ ಕೇಂದ್ರದಲ್ಲಿ ಅಧಿಕಾರ ಹಿಡಿಯಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ Team Modi ಭರ್ಜರಿ ತಾಲೀಮು ನಡೆಸುತ್ತಿದೆ.
ಚುನಾವಣಾ ಪ್ರಚಾರಕ್ಕೆಂದು ಬಿಜೆಪಿಯಲ್ಲಿ 20 ಸಮಿತಿಗಳು ಅಸ್ತಿತ್ವಕ್ಕೆ ಬಂದಿದೆ. ಗಮನಾರ್ಹವೆಂದರೆ ಚುನಾವಣೆ ಘೋಷಣೆಗೂ ಮುನ್ನವೇ ದೇಶದ ಮೂಲೆ ಮೂಲೆಯಲ್ಲೂ 100 ಸ್ಥಳಗಳಲ್ಲಿ rallyಗಳನ್ನು ನಡೆಸಲು ತೀರ್ಮಾನಿಸಿದೆ. ಈ ಮಧ್ಯೆ, ಎಲ್ಲ 20 ಸಮಿತಿಗಳಿಗೆ ಆಯ್ಕಯಾದವರ ಪಟ್ಟಿಯನ್ನು ಭೂತಕನ್ನಡಿ ಹಾಕಿಕೊಂಡು ನೋಡಿದಾಗ ಕರ್ನಾಟಕದ ಸಂಸದ ಅನಂತ ಕುಮಾರ್ ಅವರ ಹೆಸರು ಮಾತ್ರ ಕಾಣಿಸಿಕೊಂಡಿದೆ.

ಅನಂತ್ ಕುಮಾರ್ ಒಬ್ಬರೇ ಕರ್ನಾಟಕದಿಂದ
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ನೇತೃತ್ವದ ಸಮಿತಿಯು ದೇಶಾದ್ಯಂತ ಸಮಾವೇಶಗಳನ್ನು ಆಯೋಜಿಸುವ, ಪ್ರಮುಖ ನಾಯಕರ ಪ್ರಚಾರ ಸಭೆ ಆಯೋಜಿಸುವ, ಪ್ರವಾಸ ವೇಳಾಪಟ್ಟಿ ಸಿದ್ಧಪಡಿಸುವುದು... ಇವೇ ಮುಂತಾದ ಕೆಲಸಗಳನ್ನು ನಿರ್ವಹಿಸಲಿದೆ.

ಆಗಸ್ಟ್ ನಲ್ಲಿ ಪ್ರಚಾರಕ್ಕೆ ಮಹೂರ್ತ:
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಆಡ್ವಾಣಿ, ರಾಜ್ನಾಥ್ ಸಿಂಗ್ ಮೊದಲಾದ 12 ಸದಸ್ಯರು ಕೇಂದ್ರೀಯ ಚುನಾವಣಾ ಸಮಿತಿಯ ಸದಸ್ಯರಾಗಿರಲಿದ್ದಾರೆ. ಉಳಿದಂತೆ ಪಕ್ಷದ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ, ಪಕ್ಷದ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮನೋಹರ ಜೋಶಿಗೆ ಪ್ರಣಾಳಿಕೆ ಸಮಿತಿ ನೇತೃತ್ವ
ಪಕ್ಷದ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಪ್ರಣಾಳಿಕೆ ಸಮಿತಿ ನೇತೃತ್ವ ವಹಿಸಿಕೊಳ್ಳಲಿದ್ದು, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಮೋದಿ ಆಪ್ತ ಅಮಿತ್ ಶಾ ಪ್ರಚಾರ ಸಮಿತಿ ಉಸ್ತುವಾರಿ ಹೊತ್ತುಕೊಳ್ಳಲಿದ್ದಾರೆ. ಪಕ್ಷದ ಮುನ್ನೋಟ ಕುರಿತ ಕೆಲಸಗಳು ಮತ್ತು ದಿಲ್ಲಿ ಬಿಜೆಪಿಯ ಉಸ್ತುವಾರಿಯನ್ನು ನಿತಿನ್ ಗಡ್ಕರಿ ಅವರಿಗೆ ವಹಿಸಲಾಗಿದೆ.

ರವಿಶಂಕರ್ ಪ್ರಸಾದ್ ರಿಂದ ಚಾರ್ಜ್ ಶೀಟ್
ಇದೇ ವೇಳೆ ಚುನಾವಣೆಗೂ ಮುನ್ನ ಯುಪಿಎ ಸರಕಾರದ ವೈಫಲ್ಯಗಳನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಸರಕಾರದ ಭ್ರಷ್ಟಾಚಾರ ಪ್ರಕರಣಗಳ ಕುರಿತು ಆರೋಪಪಟ್ಟಿ ಬಿಡುಗಡೆ ಮಾಡಲು ಪಕ್ಷ ನಿರ್ಧರಿಸಿದೆ. ಈ ಆರೋಪಪಟ್ಟಿ ಸಿದ್ಧಪಡಿಸುವ ಹೊಣೆಯನ್ನು ಹಿರಿಯ ನಾಯಕರಾದ ರವಿಶಂಕರ್ ಪ್ರಸಾದ್, ಗೋಪಿನಾಥ್ ಮುಂಡೆಗೆ ವಹಿಸಲಾಗಿದೆ.

ಹೊಸ ಮತದಾರರತ್ತ ಅಮಿತ್ ಷಾ ತಂಡ
ಮೋದಿ ಅವರ ಬಲಗೈ ಬಂಟ ಅಮಿತ್ ಷಾ ನೇತೃತ್ವದ ತಂಡದಲ್ಲಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು, ಪ್ರಮೋದ್ ಮಹಾಜನ್ ಪುತ್ರಿ ಪೂನಂ ಮಹಾಜನ್ ಅವರು ಕಾರ್ಯನಿರ್ವಹಿಸಲಿದ್ದು, ಈ ಸಮಿತಿಗೆ 'ಹೊಸ ಮತದಾರರನ್ನು' ಪರಿಣಾಮಕಾರಿಯಾಗಿ ತಲುಪುವ, ಸಮಾಜದ ವಿವಿಧ ವರ್ಗಗಳನ್ನು ತಲುಪುವ ಹೊಣೆ ವಹಿಸಲಾಗಿದೆ.

ಪಿಯೂಶ್ ಗೋಯಲ್- ಆನ್ ಲೈನ್ ಸಾಮಾಜಿಕ ತಾಣ
ಪಿಯೂಶ್ ಗೋಯಲ್, ರಾಜೀವ್ ಪ್ರತಾಪ್ ರೂಡಿ, ಸುಧಾ ಯಾದವ್ ಅವರು ಆನ್ ಲೈನ್ ಸಾಮಾಜಿಕ ತಾಣಗಳ ಮೂಲಕ ಮತದಾರರನ್ನು ತಲುಪುವ ಕೆಲಸಗಳನ್ನು ನಿರ್ವಹಿಸಲಿದೆ. ಇತರೆ ಸಮಿತಿಗಳು ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸುವ, ಪ್ರಚಾರ ಸಾಹಿತ್ಯ ರಚನೆ, ಮಾಧ್ಯಮ ನಿರ್ವಹಣೆ, ಜಾಹೀರಾತು ವಿಭಾಗಗಳನ್ನು ನೋಡಿಕೊಳ್ಳಲಿದೆ.












Click it and Unblock the Notifications