ಮಠದ ಮೇಲೆ ಐಟಿ ದಾಳಿ : ಯಾರು ಏನು ಹೇಳಿದರು?
ಬೆಂಗಳೂರು, ಜು.18 : ಕರ್ನಾಟದಲ್ಲಿ ನಡೆದ ಆದಾಯ ತರಿಗೆ ಇಲಾಖೆ ಆದಿಕಾರಿಗಳ ದಾಳಿಗೆ ರಾಜಕೀಯ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಪಕ್ಷರಹಿತವಾಗಿ ಒಕ್ಕಲಿಗ ಸಮುದಾಯದ ರಾಜಕೀಯ ನಾಯಕರು ದಾಳಿಯನ್ನು ಖಂಡಿಸುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಡಿ.ವಿ.ಸದಾನಂದಗೌಡ, ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮುಂತಾದ ನಾಯಕರು ಮಠದ ಮೇಲೆ ದಾಳಿ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಮಠಗಳು ಗೌರವದ ಪ್ರತೀಕವಾಗಿರುತ್ತವೆ. ಅವುಗಳ ಮೇಲೆ ದಾಳಿ ನಡೆಸುವುದು ಸರಿಯಾದ ಕ್ರಮವಲ್ಲ. ಇದರಿಂದ ಒಂದು ಸಮುದಾಯದ ಜನರಿಗೆ ನೋವು ಉಂಟಾಗುತ್ತದೆ ಎಂದು ರಾಜಕೀಯ ನಾಯಕರು ದಾಳಿಯನ್ನು ಖಂಡಿಸಿದ್ದಾರೆ. (ಆದಿಚುಂಚನಗಿರಿ ಮಠದ ಮೇಲೆ ಐಟಿ ದಾಳಿ)
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಮಠಗಳು ಹೆಚ್ಚಿನ ಸೇವೆ ಸಲ್ಲಿಸುತ್ತವೆ. ಅಂತಹವುಗಳ ಮೇಲೆ ದಾಳಿ ಮಾಡುವುದು ಸರಿಯಲ್ಲ. ಇದರಿಂದ ಮಠದ ಸ್ವಾಮೀಜಿಗಳಿಗೆ ನಾವು ಅಗೌರವ ತೋರಿಸಿದಂತಾಗುತ್ತದೆ ಎಂದು ನಾಯಕರು ಹೇಳಿದ್ದಾರೆ. ದಾಳಿಗೆ ವಿವಿಧ ನಾಯಕರ ಪ್ರತಿಕ್ರಿಯೆ ಏನು ನೋಡೋಣ.

ಕುತಂತ್ರದ ಕ್ರಮ
ಮಠದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ನಡೆದಿರುವ ಹಿಂದೆ ಕುತಂತ್ರ ಅಡಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಹೊರ ದೇಶಗಳಿಂದಲೂ ಭಕ್ತರು ಕರೆ ಮಾಡಿ ಈ ಕುರಿತು ವಿಚಾರಿಸುತ್ತಿದ್ದಾರೆ. ಇದು ಧಾರ್ಮಿಕ ಭಾವನೆ ಕೆರಳಿಸುವಂತಹ ಕೃತ್ಯ ಎಂದು ಅವರು ಖಂಡಿಸಿದ್ದಾರೆ.

ಸಮಾಜದ ಮೇಲೆ ಕೆಟ್ಟ ಪರಿಣಾಮ
ಆದಿಚುಂಚನಗಿರಿ ಮಠ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದೆ. ಇಂತಹ ಮಠದ ಮೇಲೆ ಐಟಿ ದಾಳಿ ನಡೆದಿರುವುದು ಸರಿಯಲ್ಲ. ಇದರಿಂದ ಸೇವಾಕ್ಷೇತ್ರಕ್ಕೆ ತೊಂದರೆ ಉಂಟಾಗಿದೆ. ಇದರಿಂದ ಸಮಾಜಕ್ಕೆ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಅಪಾಯಕಾರಿ ಬೆಳೆವಣಿಗೆ
ಮಠಗಳ ಮೇಲೆ ಐಟಿ ದಾಳಿ ಮಾಡುವುದು ಅಪಾಯಕಾರಿ ಬೆಳವಣಿಗೆ. ಸಮಾಜಕ್ಕೆ ಒಳಿತು ಬಯಸುವ ಮಠಗಳ ಮೇಲೆ ದಾಳಿ ಮಾಡಬಾರದು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇಂತಹ ದಾಳಿಗಳು ನಡೆದರೆ, ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ, ಖಂಡಿಸುವುದಾಗಿ ಶಿವಕುಮಾರ್ ತಿಳಿಸಿದರು.

ಸ್ವಾಭಿಮಾನ ಕೆಣಕುವ ಕೃತ್ಯ
ಮಠಗಳ ಮೇಲೆ ದಾಳಿ ಆದಾಯ ತೆರಿಗೆ ದಾಳಿ ನಡೆಸುವುದು ಒಂದು ಸಮುದಾಯದ ಸ್ವಾಭಿಮಾನವನ್ನು ಕೆಣುಕುವ ಕೃತ್ಯ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಈ ದಾಳಿಗೆ ಕೇಂದ್ರ ಸರ್ಕಾರದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸಚಿವರು ಕಾರಣ ಎಂದು ರವಿ ದೂರಿದ್ದಾರೆ.

ಕೇಂದ್ರ ಸರ್ಕಾರದ ಕುತಂತ್ರ
ಮಠಗಳ ಮೇಲೆ ಐಟಿ ದಾಳಿ ನಡೆಸುವುದು ಕೇಂದ್ರ ಸರ್ಕಾರದ ಕುತಂತ್ರ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಆರೋಪಿಸಿದ್ದಾರೆ. ಆದಿಚುಂಚನಗಿರಿ ಮಠ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿದೆ. ಅಂತಹ ಮಠದ ಮೇಲೆ ದಾಳಿ ಮಾಡಿ ಕೇಂದ್ರ ಸರ್ಕಾರ ಜನರ ಭಾವನೆಗೆ ಧಕ್ಕೆ ತಂದಿದೆ ಎಂದು ಅವರು ಖಂಡಿಸಿದ್ದಾರೆ.

ರಾಜಕೀಯ ಕೈವಾಡ
ಆದಿಚುಂಚನಗಿರಿ ಮಠದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವ ಹಿಂದೆ ರಾಜಕೀಯ ಕೈವಾಡವಿದೆ ಎಂದು ಜೆಡಿಎಸ್ ಶಾಸಕ ಚೆಲುವರಾಯಸ್ವಾಮಿ ದೂರಿದ್ದಾರೆ. ಇದು ಮಠ ಮಾನ್ಯಗಳ ಧಾರ್ಮಿಕ ಭಾವನೆಗೆ ಚ್ಯುತಿ ತರುವಂತಹ ಕೆಲಸ. ಒಂದು ಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ದ್ವೇಷ ಸಾಧಿಸಲು ದಾಳಿ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.












Click it and Unblock the Notifications