ಹೆಲಿಕಾಪ್ಟರ್ ಬಿದ್ದಾಗ ನೀನು ಹೋದೆ ಅಂದ್ಕೊಂಡು...!

ಈ ಸಾಹಸಿ ಸಚಿವ ಸಂತೋಷ್ ಲಾಡ್ ಗೆ ವಿಧಾನಸೌಧದಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಸಿಎಂ ಸಿದ್ರಾಮಣ್ಣನೋರು ಸಚಿವ ಲಾಡ್ ಅವರನ್ನು ಅಭಿನಂದಿಸಿದ್ರು. ಇದೆಲ್ಲಾ ಮುಗಿದ ಮೇಲೆ ವಿಧಾನಸೌಧದಲ್ಲಿ ಸಚಿವ ಲಾಡ್ ಹಾಗೂ ಜೆಡಿಎಸ್ ಶಾಸಕ ಪುಟ್ಟಣ್ಣ ಎದುರು ಬದುರಾದರು.
ಪುಟ್ಟಣ್ಣ ಲಾಡ್ ಗೆ ಖುಷಿಯಿಂದ ಕಾಲೆಳೆಯುತ್ತಾ ತಮಾಷೆಗೆ ಹರಟೆ ಹೊಡೆಯುತ್ತಾ ನಿಂತಿದ್ರಂತೆ. ಅವರ ಹರಟೆ ಏನು ಅಂತಾ ನಾವು ಕೇಳಿಸಿಕೊಂಡಾಗ, "ಈ ಪಾಪಿ ನನ್ಮಗ ಸಾಯ್ಲಿ ಅಂತಾ ಉತ್ತರಾಖಂಡಕ್ಕೆ ಕಳುಹಿಸಿದ್ದರು. ಆದರೂ ಪಾಪಿ ಚಿರಾಯು ಅಂತಾ ವಾಪಸ್ ಬಂದಿದ್ದಾನೆ" ಅಂತಾ ಪುಟ್ಟಣ್ಣ ಲಾಡ್ಗೆ ಹೇಳಿದ್ದು ಕೇಳಿಸ್ತು.
"ನನ್ನನ್ನು ಕಳಿಸಿದ್ದು ಅದಕ್ಕಲ್ಲ. ಅಲ್ಲಿಗೆ ಹೋದವರ ನಡುವೆ ಮದ್ದೂರಿನವರು 16 ಜನ ಇದ್ದಾರೆ. ನೋಡೋ ಲಾಡ್ ಅಂತಾ ಸಿದ್ರಾಮಣ್ಣ ಅಂದ್ರು. ನೀನು ಬೇರೆ ಆ ಕಡೆ ಹೋಗ್ಬೇಕು ಅಂತಾ ಹೇಳಿದ್ದೆ ಅಲ್ವಾ. ಎಷ್ಟಾದರೂ ನೀನು ನನ್ನ ಗೆಳೆಯ. ನೀನು ಅಲ್ಲಿರಬಹುದು ಎಂದು ನಾನು ಅಲ್ಲಿಗೆ ಬಂದೆ" ಎಂದು ಟಾಂಗ್ ನೀಡಿದರು ಲಾಡ್.
ಮತ್ತೆ ಲಾಡ್ ಕಾಲೆಳೆದ ಪುಟ್ಟಣ್ಣ, "ಆದರೂ ನಿನ್ನಂಥ ಪಾಪಿ ವಾಪಸ್ ಬರಬಾರದಿತ್ತು. ಹೆಲಿಕಾಪ್ಟರ್ ಪತನ ಆದಾಗೆಲ್ಲಾ ನೀನು ಹೋದೆ ಅಂದ್ಕೊಂಡು ಖುಷಿ ಪಟ್ಟೆ. ಆದ್ರೂ ಬದುಕಿ ಬಂದ್ಬಿಟ್ಟಿದ್ದೀಯಾ" ಎಂದರು.
ಆಗ ಲಾಡ್, "ನಾನು ಹಾಗೇ ಅಂದ್ಕೊಂಡಿದ್ದೆ. ನಮ್ಮ ಕಡೆಯವರು ಹೋಗ್ಬಿಟ್ಟಿದ್ದಾರೆ ಎಂದು ತಿಳಿದಾಗ ಬೇಜಾರಾಗ್ತಿತ್ತು. ಅದರ ಮಧ್ಯೆ ನೀನೇನಾದರೂ ಸಿಲುಕಿದ್ದೀಯಾ ಎಂದು ನೋಡುತ್ತಿದ್ದೆ, ನೀನೂ ಹೋಗ್ಬಿಟ್ಟಿದ್ದೀಯಾ ಅಂತಾ ಖುಷಿಯಿಂದ ನೋಡ್ತಿದ್ದೆ. ನಿನ್ನದೊಂದು ಫೋಟೋನೂ ನನ್ ಜೇಬಲ್ಲಿ ಇಟ್ಕೊಂಡಿದ್ದೆ. ಅದನ್ನೂ ಮ್ಯಾಚ್ ಮಾಡೋಕೆ ನೋಡ್ದೆ. ಅದ್ರೆ ಅದಾಗ್ಲೇ ಇಲ್ಲ ನೋಡು. ಹಾಗೆ ನಿನ್ನನ್ನು ಹುಡುಕಿ ಕೊಂಡು ಹೋಗಿದ್ದರಿಂದಲೇ ಉತ್ತರಾಖಂಡದ ತುತ್ತತುದಿಯ ದುರ್ಗಮ ಪ್ರದೇಶಕ್ಕೆ ಹೋಗುವಂತಾಯಿತು. ನಿನ್ನಂತಹ ಪಾಪಿಯಿಂದಾಗಿಯೇ ಇದೆಲ್ಲಾ ಸಾಧ್ಯವಾಯ್ತು. ನನಗೆ ಸಿಕ್ಕಿದ ಅಭಿನಂದನೆ ನಿನಗೆ ಸೇರಬೇಕು" ಅಂತಾ ನಗು ನಗುತ್ತಾ ಹೇಳಿದ್ರು.
ಅಷ್ಟರಲ್ಲಾಗಲೇ ಕೈಯಲ್ಲಿದ್ದ ಕಾಫಿ ಗ್ಲಾಸ್ ಖಾಲಿಯಾಗಿತ್ತು. ಆಮೇಲೆ ಇಬ್ಬರೂ ಪರಸ್ಪರ ಹೆಗಲ ಮೇಲೆ ಕೈಹಾಕಿಕೊಂಡು ಪರಿಷತ್ ಒಳಗೆ ಹೋದರು. (ಕೃಪೆ : ಪಬ್ಲಿಕ್ ಟಿವಿ)












Click it and Unblock the Notifications