ಕಾಸರಗೋಡು : ಇಂಜಿನಿಯರ್ ಮನೆ ಮೇಲೆ ಗುಂಡಿನ ದಾಳಿ

ಬೇವಿಂಜೆ ನಿವಾಸಿಯಾಗಿರುವ ಮಹಮ್ಮದ್ ಕುಂಞ ಅವರ ಮನೆಯ ಮೇಲೆ ಗುರುವಾರ ಬೆಳಗ್ಗೆ 5.15ರ ಸುಮಾರಿಗೆ, ಬೈಕ್ ನಲ್ಲಿ ಬಂದ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಿಂದಾಗಿ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ.
ಗುಂಡಿನ ದಾಳಿ ನಡೆದ ಸಂರ್ಭದಲ್ಲಿ ಮಹಮ್ಮದ್ ಕುಂಞ ಮತ್ತು ಅವರ ಪುತ್ರ ನಮಾಜ್ ಮಾಡುತ್ತಿದ್ದರು. ಮನೆಯಲ್ಲಿದ್ದ ಉಳಿದ ಸದಸ್ಯರು ಇನ್ನೂ ಎಚ್ಚರಗೊಂಡಿರಲಿಲ್ಲ. ಆದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಮನೆಯವರು ಗುಂಡಿನ ಸದ್ದು ಕೇಳಿ ಹೊರಬಂದಾಗ ಇಬ್ಬರು, ಬೈಕ್ ನಲ್ಲಿ ಪರಾರಿಯಾಗಿರುವುದು ಕಂಡು ಬಂದಿದೆ.
ಮನೆಯ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದು, ಮನೆಯ ಕಿಟಕಿ ಗಾಜುಗಳು ಗುಂಡಿನ ದಾಳಿಯಿಂದಾಗಿ ಚೂರು ಚೂರಾಗಿವೆ. ಸ್ಥಳದಲ್ಲಿ ಖಾಲಿ ಗುಂಡುಗಳನ್ನು ಬಿಟ್ಟರೆ, ಯಾವುದೇ ಸುಳಿವು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಎರಡನೇ ಬಾರಿ : 2010ರ ಜೂನ್ 25ರಂದು ಮಹಮ್ಮದ್ ಅವರ ನಿವಾಸದ ಮೇಲೆ ಗುಂಡಿನ ದಾಳಿ ನಡೆದಿತ್ತು. ಇಂದು ಸಹ ದಾಳಿ ನಡೆದಿದ್ದು, ಇದು ಅವರ ಮೇಲೆ ನಡೆಯುತ್ತಿರುವ ಎರಡನೇ ದಾಳಿಯಾಗಿದೆ.
ಭೂಗತ ಪಾತಕಿಗಳ ಕೃತ್ಯ : ಮಹಮ್ಮದ್ ಅವರ ನಿವಾಸದ ಮೇಲೆ ಭೂಗತ ಪಾತಕಿ ರವಿ ಪೂಜಾರಿ ಸಹಚರರು ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಸ್ಥಳದಲ್ಲಿ ಯಾವುದೇ ಸುಳಿವು ದೊರೆಯದ ಕಾರಣ ಪ್ರಕರಣದ ತನಿಖೆ ನಡೆಸುವುದ ಪೊಲೀಸರಿಗೂ ಸವಾಲಾಗಿದೆ.
ಆರೋಪಿಗಳು ಸಿಕ್ಕಿಲ್ಲ : 2010ರಲ್ಲಿ ನಡೆದ ಗುಂಡಿನ ದಾಳಿಯ ಕುರಿತು ಪೊಲೀಸರಿಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಯಾವುದೇ ಮಾಹಿತಿ ದೊರಕದರೆ ಪ್ರಕರಣದ ತನಿಖೆ ಮುಗಿಸಿದ್ದರು.












Click it and Unblock the Notifications