ಮಂಡ್ಯದಲ್ಲಿ ಮತ್ತೆರಡು ಗೋಲ್ ಮಾಲ್ ಬೆಳಕಿಗೆ!

ಮಂಡ್ಯ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಶಶಿಧರ್ ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಶಿಂಷಾ ಸಹಕಾರಿ ಕೋ ಆಪರೇಟಿವ್ ಬ್ಯಾಂಕಿನಲ್ಲಿ 2 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ.
ರೈತರ ಹಣ ಕಂಡವರ ಪಾಲು : ಕೇಂದ್ರ ಸರ್ಕಾರದಿಂದ ರೈತರಿಗೆ ಸಾಲಮನ್ನಾ ಯೋಜನೆಯಡಿ ಒಟ್ಟು 2 ಕೋಟಿ 64 ಲಕ್ಷ ರೂ. ಹಣ ಬಿಡುಗಡೆಯಾಗಿತ್ತು. ಅದನ್ನು 1,112 ರೈತರಿಗೆ ಹಂಚಿಕೆ ಮಾಡಬೇಕಾಗಿತ್ತು.
ಜಿಲ್ಲಾ ಸಹಕಾರ ಬ್ಯಾಂಕ್ಗಳ ಉಪನಿಬಂಧಕ ಶಶಿಧರ್ ಬುಧವಾರ, ಶಿಂಷಾ ಬ್ಯಾಂಕಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದಾಗ, ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಅವರು ಮದ್ದೂರಿನ ಠಾಣೆಗೆ ದೂರು ನೀಡಿದ್ದಾರೆ. (ಮಂಡ್ಯ ಮುಡಾ: 5 ಕೋಟಿ ಗೋಲ್ ಮಾಲ್ 3 ಜನ ಬಲೆಗೆ)
ಆರೋಪಿಗಳು ಯಾರು : ಶಿಂಷಾ ಸಹಕಾರ ಬ್ಯಾಂಕಿನ ಅಧ್ಯಕ್ಷ ಅಪ್ಪಾಜಪ್ಪ, ಉಪಾಧ್ಯಕ್ಷ ಬೋರಯ್ಯ, ಸಿಇಓ ಲಕ್ಮಿನಾರಾಯಣ್ ಸೇರಿದಂತೆ 9 ಜನರನ್ನು ಪ್ರಕರಣದಲ್ಲಿ ಆರೋಪಿಗಳು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೆಸರಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ಪಾಜಪ್ಪ, ಬೋರಯ್ಯ, ಲಕ್ಷ್ಮಿ ನಾರಾಯಣ ಅವರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬ್ಯಾಂಕಿನ ದಾಖಲೆಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಅವುಗಳ ಪರಿಶೀಲನೆ ಮಾಡುತ್ತಿದ್ದಾರೆ.
ಮಂಡ್ಯದಲ್ಲಿ ಮತ್ತೊಂದು ಹಗರಣ : ಮಂಡ್ಯದ ಸಿಟಿ ಕೋ-ಆಪರೇಟಿವ್ ಬ್ಯಾಂಕ್ನಲ್ಲಿ 16 ಲಕ್ಷ ಹಣವನ್ನು ಗುಳುಂ ಮಾಡಿರುವ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ. ಬ್ಯಾಂಕಿನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ, ಐವರ ವಿರುದ್ಧ ನಗರದ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2008 ಮತ್ತು 2009ನೇ ಸಾಲಿನಲ್ಲಿ ರೈತರಿಗೆ ಹಂಚಲು ಬಂದಿದ್ದ ಸಾಲಮನ್ನಾದ 16 ಲಕ್ಷ ಹಣವನ್ನು ನುಂಗಿ ಹಾಕಿರುವುದು ದಾಖಲೆಗಳಿಂದ ಸಾಬೀತಾಗಿದೆ. ಗುರುವಾರ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications