ಹೊಳವನಹಳ್ಳಿ: ಕನ್ನಡ ಲೇಖಕಿ ಡಾ ನಿರುಪಮಾ ವಿಧಿವಶ

ಅನಾರೋಗ್ಯದಿಂದ 82 ನೇ ವಯಸ್ಸಿನಲ್ಲಿ ಗುರುವಾರ ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮಧ್ಯಾಹ್ನ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆಯಿತು ಎಂದು ಅವರ ಪುತ್ರ ಬಿಆರ್ ರವೀಂದ್ರನಾಥ್ ತಿಳಿಸಿದ್ದಾರೆ. ಡಾ ನಿರುಪಮಾ ಅವರಿಗೆ ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.
ಮೂಲತಃ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯ ಡಾ. ನಿರುಪಮಾ ಅವರು ಕನ್ನಡ ಭಾಷಿಕರಾಗಿದ್ದರೂ ತೆಲುಗು, ಬಂಗಾಳಿ, ಸಂಸ್ಕೃತ ಭಾಷೆಗಳನ್ನು ಬಲ್ಲವರಾಗಿದ್ದರು. ಅವರ ನಿಜ ನಾಮಧೇಯ ಪದ್ಮಾರಾವ್. 1931ರ ಸೆಪ್ಟೆಂಬರ್ 30ರಂದು ಕೊರಟಗೆರೆಯಲ್ಲಿ ಜನಿಸಿದರು.
1974ರಲ್ಲಿ ಆರತಿ ಪಬ್ಲಿಕೇಷನ್ ಸಂಸ್ಥೆ ಹುಟ್ಟುಹಾಕಿದ ಡಾ. ನಿರುಪಮಾ, ವಿವಿಧ ಲೇಖಕಿಯರ 120ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ದಕ್ಷಿಣ ಭಾರತದ ಅತ್ಯುತ್ತಮ ಪ್ರಕಾಶಕಿ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದರು. ಜತೆಗೆ ಕಥೆ, ಕಾದಂಬರಿ, ಅನುವಾದ, ಮಕ್ಕಳ ಸಾಹಿತ್ಯ, ಕಾನೂನು, ಇತಿಹಾಸ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಸುಮಾರು 118 ಕೃತಿಗಳನ್ನು ನಿರುಪಮಾ ರಚಿಸಿದ್ದಾರೆ. ಕನ್ನಡ ಅಲ್ಲದೇ ತೆಲುಗು, ಬಂಗಾಳಿ, ಇಂಗ್ಲಿಷ್, ಹಿಂದಿ, ಸಂಸ್ಕೃತ ಭಾಷೆಗಳನ್ನು ಅವರು ಬಲ್ಲವರಾಗಿದ್ದರು.
ಮಕ್ಕಳ ಸಾಹಿತ್ಯಕ್ಷೇತ್ರದಲ್ಲಿ ನಿರುಪಮಾ ಉತ್ತಮ ಸೇವೆ ಸಲ್ಲಿಸಿದ್ದಾರೆ. 1985ರಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತನ್ನು ಹುಟ್ಟುಹಾಕಿ 2002 ರಲ್ಲಿ ಅಷ್ಟ ಭಾಷಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅದೇ ರೀತಿ ದಾಸ ಸಾಹಿತ್ಯದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅವರು 1996ರಲ್ಲಿ ಅಖಿಲ ಕರ್ನಾಟಕ ಹರಿದಾಸ ಸಾಹಿತ್ಯ ಸಂಘವನ್ನು ಸ್ಥಾಪಿಸಿದರು.
ಲೇಖಕಿಯರ ಸಂಘ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ, ಮಿಥಿಕ್ ಸೊಸೈಟಿ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳ ಸದಸ್ಯರಾಗಿ ನಿರುಪಮಾ ಕಾರ್ಯನಿರ್ವಹಿಸಿದ್ದಾರೆ. ರಾಜ್ಯೋತ್ಸವ, ಲೇಖಕಿಯರ ಸಂಘದ ಅನುಪಮ ಪ್ರಶಸ್ತಿ, ಧಾರವಾಡ ಮಕ್ಕಳ ಮನೆ ಪ್ರಶಸ್ತಿ, ಯುನಿಸೆಫ್ ಮಕ್ಕಳ ಸಾಹಿತ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳಿಗೆ ನಿರುಪಮಾ ಪಾತ್ರರಾಗಿದ್ದರು.












Click it and Unblock the Notifications