ಯಾತ್ರೆಗೆ ಹೋಗುವ ಮುನ್ನ ಡೀಟೇಲ್ಸ್ ಕೊಡಿ, ಪ್ಲೀಸ್
ಬೆಂಗಳೂರು, ಜುಲೈ3- 'ಹಿಮಾಲಯ ಸುನಾಮಿ- ನಾನು ಕಣ್ಣಾರೆ ಕಂಡ ದೊಡ್ಡ ಪ್ರಕೃತಿ ದುರಂತ' ಎಂದು ವಾರ್ತಾ ಸಚಿವ ಸಂತೋಷ್ ಲಾಡ್ ಅವರು ಉದ್ಘರಿಸಿದ್ದಾರೆ. ಉತ್ತರಖಂಡದಲ್ಲಿ ಮಹಾಮಳೆಯಿಂದ ತೀರ್ಥಯಾತ್ರೆಗೆ ಹೊರಟವರ ಬದುಕುಗಳು ಛಿದ್ರಗೊಳ್ಳುತ್ತಿದ್ದಂತೆ ಯುವ ಸಚಿವ ಲಾಡ್ 'ನಾನಿದ್ದೇನೆ, ನಿಮ್ಮ ನೆರವಿಗೆ' ಎಂದು ಸೀದಾ ದುರಂತ ಸ್ಥಳಕ್ಕೇ ಹಾರಿದ್ದರು.
ಒಂದು ವಾರಕ್ಕೂ ಹೆಚ್ಚು ಕಾಲ ಅಲ್ಲಿದ್ದು, ಅಳಿದುಳಿದ ಭಕ್ತರನ್ನು ವಾಪಸ್ ಕರೆತರುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿರುವ ಸಚಿವ ಲಾಡ್ ಅವರು 'ಉತ್ತರಾಖಂಡ ದುರಂತದಿಂದ ನಾವು ಸಾಕಷ್ಟು ಪಾಠ ಕಲಿಯಬೇಕಿದೆ' ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಹುರುಪಿನಲ್ಲಿದ್ದ ಯುವ ಸಚಿವ ಸಂತೋಷ್ ಲಾಡ್ ಅವರು ಜನಸೇವೆ ಮಾಡುವುದಕ್ಕೆ ತಮಗೆ ದೊರೆತ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು, ಸೈ ಎನಿಸಿಕೊಂಡಿದ್ದಾರೆ.

15 ಸಾವಿರ ಮಂದಿ ಸಾವು
ಸಂತೋಷ್ ಲಾಡ್ ಹೇಳುವ ಪ್ರಕಾರ ಉತ್ತರಾಖಂಡ ದುರಂತದಲ್ಲಿ ಕನಿಷ್ಟ 15 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ವರದಿಗಾರರ ಕೂಟ ಬುಧವಾರ ಏರ್ಪಡಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಅಲ್ಲಿನ ಅನುಭವಗಳನ್ನು ಅವರು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಅತ್ಯುತ್ತಮ ಸಲಹೆ
ಇದೇ ವೇಳೆ ಅವರು ಅತ್ಯುತ್ತಮವಾದ ಸಲಹೆಯೊಂದನ್ನೂ ನೀಡಿದ್ದಾರೆ. ಏನಪ್ಪಾ ಅಂದರೆ ಇನ್ನು ಮುಂದೆ ಉತ್ತರ ಭಾರತಕ್ಕೆ ತೀರ್ಥಯಾತ್ರೆಗೆಂದು ತೆರಳುವವರು ರಾಜ್ಯ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸಬೇಕು ಎಂದು ಹೇಳಿದ್ದಾರೆ.

ಆಪತ್ಕಾಲದಲ್ಲಿ ಬಹಳ ಜರೂರತ್ತು
ಕಡ್ಡಾಯವಾಗಿ ತಮ್ಮ ಹೆಸರು, ಕುಟುಂಬದ ವಿವರ, ದೂರವಾಣಿ ಸಂಖ್ಯೆ, ಈ-ಮೇಲ್ ವಿಳಾಸ ಮುಂತಾದ ವಿವರಗಳನ್ನು ಇಲಾಖೆಯಲ್ಲಿ ದಾಖಲು ಮಾಡಿಸಿ, ಪುಣ್ಯ ಕಟ್ಟಿಕೊಳ್ಳಿ ಇಂತಹ ಆಪತ್ಕಾಲದಲ್ಲಿ ಅದರ ಜರೂರತ್ತು ಬಹಳವಾಗುತ್ತದೆ ಎಂದು ಸಚಿವ ಲಾಡ್ ಕೋರಿದ್ದಾರೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಮನವರ ಗಮನಕ್ಕೆ ತರುವುದಾಗಿಯೂ ಅವರು ಹೇಳಿದರು.

ನಾನು ಕಂಡ ಅತೀ ದೊಡ್ಡ ದುರಂತ
ಬದರೀನಾಥ, ಕೇದಾರನಾಥ, ಗೌರಿಕುಂಡ, ಜೋಷಿಮಠ್ ಮುಂತಾದ ಸ್ಥಳಗಳಿಂದ 500ಕ್ಕೂ ಹೆಚ್ಚು ಕನ್ನಡಿಗರನ್ನು ಸಂಪರ್ಕಿಸಿ ಪತ್ತೆ ಹಚ್ಚಿ ಅವರನ್ನು ಬೆಂಗಳೂರಿಗೆ ಕರೆತರಲಾಗಿದೆ ಎಂದರು. ನಿಜಕ್ಕೂ ಅದು ಹಿಮಾಲಯನ್ ಸುನಾಮಿಯೇ ಆಗಿತ್ತು. ನಾನು ಮತ್ತು ಜಗತ್ತು ಕಂಡ ಅತೀ ದೊಡ್ಡ ದುರಂತ ಇದು ಎಂದೇ ಹೇಳಬಹುದು. ಅಲ್ಲಿನ ಬೆಟ್ಟಗಳು ಐಸ್ ಕ್ರೀಂ ಕಪ್ಪಿನ ಕೋನಾಕಾರದಲ್ಲಿವೆ.

ಲಾಡ್ ಅನುಭವ
ಹೀಗಾಗಿ ಅಂತಹ ಕಷ್ಟಕರವಾದ ಪ್ರದೇಶದಲ್ಲಿ ಹೆಲಿಕಾಪ್ಟರ್ ಹಾರಾಟ ಮಾಡುವುದು ತುಂಬಾ ಕಷ್ಟದ ಕೆಲಸ. ನಾವು ಬದರೀನಾಥಕ್ಕೆ ಹೆಲಿಕಾಪ್ಟರ್ನಲ್ಲಿ ಬರುವಾಗಲೂ ಇದೇ ರೀತಿಯ ಆತಂಕ ಕಾಡುತ್ತಲೇ ಇತ್ತು. ಅಲ್ಲಿ ಮೋಡಗಳು, ಕೈಗೆ ಸಿಗುತ್ತಿತ್ತು ಎಂದು ತಮ್ಮ ಅನುಭವ ಹೇಳಿಕೊಂಡರು.












Click it and Unblock the Notifications