ಭಾರತವನ್ನು ಕಾಡುವ 25 ಭ್ರಷ್ಟಾಚಾರ ಪ್ರಕರಣಗಳು
ಬೆಂಗಳೂರು, ಜೂ.23: ಭಾರತದಲ್ಲಿ ಹಗರಣಗಳಿಗೇನು ಕಮ್ಮಿಯಿಲ್ಲ. ವಂಚನೆ, ಭ್ರಷ್ಟಾಚಾರ ಬಹು ಕೋಟಿ ಹಗರಣಗಳು ಭಾರತವನ್ನು ಅಶಾಂತಿಯುಕ್ತ ರಾಷ್ಟ್ರಗಳ ಪಟ್ಟಿಯಲ್ಲೂ ಸ್ಥಾನ ಪಡೆಯುವಂತೆ ಮಾಡಿರುವುದು ನಿಜ.
ಸ್ವಾತಂತ್ರ್ಯ ಪೂರ್ವದಲ್ಲಿ ಭ್ರಷ್ಟಾಚಾರ ಒಂದು ರೀತಿ ಕಾಡಿದರೆ, ಸ್ವಾತಂತ್ರ್ಯ ನಂತರವೂ ಹಗರಣಗಳು, ಭ್ರಷ್ಟತೆಯ ಬಣ್ಣ ಬದಲಾಗಲಿಲ್ಲ ಬದಲಿಗೆ ಇನ್ನಷ್ಟು ಬಲಿಷ್ಠವಾಗಿ ಹೆಮ್ಮರವಾಗಿ ಬೆಳೆದುಬಿಟ್ಟಿದೆ.
ಭಾರತದ ಇತಿಹಾಸವನ್ನು ಅವಲೋಕಿಸಿದರೆ ಸ್ವಾತಂತ್ರ್ಯ ನಂತರ ಭಾರತವನ್ನು ಪರಿ ಪರಿಯಾಗಿ ಕಾಡಿದ, ಕಾಡುತ್ತಿರುವ ಪ್ರಮುಖ ಹಗರಣಗಳು ಅಥವಾ ಭ್ರಷ್ಟಾಚಾರ ಪ್ರಕರಣಗಳನ್ನು ಒಟ್ಟುಗೂಡಿಸಿ ಆಯ್ದ 25 ಟಾಪ್ ಪ್ರಕರಣಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.. ನಿಮ್ಮ ಕಣ್ಣಿಗೆ ಬೇರೆ ಯಾವುದಾದರೂ ಪ್ರಮುಖ ಹಗರಣ ಬಿದ್ದರೆ ತಿಳಿಸಿ ಮುಂದಿನ ಸರಣಿಯಲ್ಲಿ ಖಂಡಿತ ಸೇರಿಸಿಕೊಳ್ಳುತ್ತೇವೆ... ಮಾಹಿತಿ ಕೃಪೆ: ನಿತಿ ಸೆಂಟ್ರಲ್.ಕಾಂ
#1 ಅಗಸ್ಟಾ ವೆಸ್ಟ್ ಲ್ಯಾಂಡ್ ಡೀಲ್
ಸುಮಾರು 75.5 ಕೋಟಿ ರು ಮೌಲ್ಯದ ಹೆಲಿಕಾಪ್ಟರ್ ಅವ್ಯವಹಾರ ಒಪ್ಪಂದ ಹಲವು ಬೆಚ್ಚಿ ಬೀಳುವ ಸಂಗತಿಗಳನ್ನು ಹೊರಹಾಕಿದೆ. ಇಟಾಲಿಯ ಸಂಸ್ಥೆ ಫಿನ್ನಾ ಮೆಕಾನಿಕಾ ಸಂಸ್ಥೆ ಮೇಲೆ ಮಾಡಿದ ಹೂಡಿಕೆ ಬೇನಾಮಿ ಎಂಬುದು ಸಾಬೀತಾಯಿತು. ಅಗಸ್ಟಾ ವೆಸ್ಟ್ ಲ್ಯಾಂಡ್ ಚಾಪರ್ ಡೀಲ್ ಮಾಹಿತಿ ನೀಡಲು ಇಟಲಿ ಸರ್ಕಾರ ನಿರಾಕರಿಸಿತು. ತನಿಖೆ ಮುಂದುವರೆದಿದೆ.
#2 ವೋಡಾಫೋನ್ ತೆರಿಗೆ ಬಾಕಿ
ಸುಮಾರು 11,000 ಕೋಟಿ ರು ತೆರಿಗೆ ಬಾಕಿ ಪ್ರಕರಣ ಇದಾಗಿದ್ದು, 2013 ರ ಅತಿದೊಡ್ದ ಹಗರಣ ಎನಿಸಿದೆ. ಕೇಂದ್ರ ಸಚಿವ ಕಪಿಲ್ ಸಿಬಲ್ ಅವರ ಹೆಸರು ಕೂಡಾ ಇದರಲ್ಲಿ ಕೇಳಿ ಬಂದಿತ್ತು.
#3 ಶಾರದಾ ಚಿಟ್ ಫಂಡ್
ಶಾರದಾ ಸಮೂಹದ ಚಿಟ್ ಫಂಡ್ ಅವ್ಯವಹಾರ ಸುಮಾರು 20,000 ಕೋಟಿ ಅವ್ಯವಹಾರ ಎನ್ನಲಾಗಿದೆ. ಪಶ್ಚಿಮ ಬಂಗಾಳದ ಬ್ಲೇಡ್ ಕಂಪನಿ ಸ್ಥಾಪಕರು ಸದ್ಯ ಜೈಲಿನಲ್ಲಿದ್ದಾರೆ. ತನಿಖೆ ಮುಂದುವರೆದಿದೆ.
#4 ರೈಲ್ವೆ ಇಲಾಖೆ ಲಂಚ
ಕೇಂದ್ರ ಸಚಿವ ಪವನ್ ಕುಮಾರ್ ಬನ್ಸಾಲ್ ಹಾಗೂ ಅವರ ಅಳಿಯ ವಿಜಯ್ ಸಿಂಗ್ಲಾ ಅವರು 90 ಲಕ್ಷ ಲಂಚ ಪಡೆದು ರೈಲ್ವೆ ಬೋರ್ಡ್ ಸದಸ್ಯರ ನೇಮಕದಲ್ಲಿ ಅವ್ಯವಹಾರ ಎಸಗಿದ ಆರೋಪ ಎದುರಾಗಿತ್ತು. ಪವನ್ ಕುಮಾರ್ ಬನ್ಸಾಲ್ ಹುದ್ದೆ ತೊರೆಯಬೇಕಾಯಿತು. ಸಿಬಿಐ ತನಿಖೆ ಮುಂದುವರೆಸಿದೆ.
#5 ಕಲ್ಲಿದ್ದಲು ಹಗರಣ
ಸುಮಾರು 1,85,591 ಕೋಟಿ ಅವ್ಯವಹಾರ ಯುಪಿಎ ಸರ್ಕಾರಕ್ಕೆ ಕಪ್ಪುಚುಕ್ಕೆಯಾಗಿದೆ. 155 ಎಕರೆ ಗಣಿಯನ್ನು ಬೇಕಾದ ಕಂಪನಿಗಳಿಗೆ ಹಂಚಿಕೆ ಮಾಡಿದ ಆರೋಪ ಹಾಗೂ ಕಡಿಮೆ ಬೆಲೆಗೆ ಬಿಡ್ಡಿಂಗ್ ಮಾಡಿದ ಆರೋಪ ಸರ್ಕಾರದ ಮೇಲೆ ಹೊರೆಸಲಾಗಿದೆ.
ಇತ್ತೀಚೆಗೆ ಸಚಿವ ದಾಸರಿ ನಾರಾಯಣ ರಾವ್ ಹಾಗೂ ಸಂಸದ ನವೀನ್ ಜಿಂದಾಲ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.#6 ಟೆಟ್ರಾ ಹಗರಣ
ಭಾರತ್ ಅರ್ಥ್ ಮೂವರ್ಸ್ ಲಿ ಹಾಗೂ ಟೆಟ್ರಾ ವೆಕ್ಟ್ರಾ ಮೋಟರ್ಸ್ ನಿರ್ಮಿತ 7000 ಟ್ರಕ್ ಗಳನ್ನು ಭಾರತೀಯ ಸೇನೆ ಸೇರ್ಪಡೆಗೊಳಿಸಿದ ಅವ್ಯವಹಾರ ಇದಾಗಿದೆ.
ಜನರಲ್ ವಿಕೆ ಸಿಂಗ್ ಅವರು ಟ್ರಕ್ ಖರೀದಿಗೆ ಲಂಚ ಆಫರ್ ಬಂದಿತ್ತು ಎಂದು ವಿಷಯ ಬಹಿರಂಗಗೊಳಿಸಿದಾಗ ಈ ಪ್ರಕರಣ ಹೊರಗೆ ಬಂದಿತ್ತು. ಸುಮಾರು 750 ಕೋಟಿ ರು ಅವ್ಯವಹಾರ ಎಂದು ಅಂದಾಜಿಸಲಾಗಿದೆ.#7 ಉ.ಪ್ರ ಎನ್ ಆರ್ ಎಚ್ ಎಂ ಹಗರಣ
2012ರಲ್ಲಿ ಉತ್ತರ ಪ್ರದೇಶದಲ್ಲಿ ಮಾಯಾವತಿ ಸರ್ಕಾರ ಇದ್ದಾಗ ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್(NHRM) ಯೋಜನೆಯನ್ನು ದುರ್ಬಳಕೆ ಮಾಡಿಕೊಂಡು 10,000 ಕೋಟಿ ರು ನಷ್ಟ ಉಂಟು ಮಾಡಿದ ಆರೋಪ ಇದಾಗಿದೆ.
ಹಿರಿಯ ವೈದ್ಯಾಧಿಕಾರಿಗಳ ನಿಗೂಢ ಕೊಲೆ, ಸಿಬಿಐ ತನಿಖೆ, 2012ರ ಫೆಬ್ರವರಿಯಲ್ಲಿ ಸ್ವತಃ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಾಯಾವತಿ ಸರ್ಕಾರವನ್ನು ದೂಷಿಸಿದರೂ ಪ್ರಕರಣ ಹಾಗೆ ಉಳಿಯಿತು#8 ಅಂತರಿಕ್ಷ್ ದೇವಾಸ್ ಡೀಲ್
ಅಂತರೀಕ್ಷ್ ಕಾರ್ಪೊರೇಷನ್ ಹಾಗೂ ದೇವಾಸ್ ಮಲ್ಟಿಮೀಡಿಯಾ ಜೊತೆ ಇಸ್ರೋ ಮಾಜಿ ಮುಖ್ಯಸ್ಥ ಜಿ ಮಾಧವನ್ ನಾಯರ್ ಹಾಗೂ ಮೂವರು ವಿಜ್ಞಾನಿಗಳು ಅಕ್ರಮ ಒಪ್ಪಂದ ಮಾಡಿಕೊಂಡು ಎಸ್ ಬ್ಯಾಂಡ್ ಟ್ರಾಸ್ ಸ್ಪಾಂಡರ್ ಗಳ(ಜಿಸ್ಯಾಟ್ 6, 6 ಎ ಉಪಗ್ರಹಕ್ಕೆ ಸಂಬಂಧಿಸಿದ)ನ್ನು ದೇವಾಸ್ ಕಂಪನಿಗೆ ಪ್ರಸಾರಕ್ಕೆ ನೀಡಿದ ಆರೋಪ ನಾಯರ್ ಗ್ಯಾಂಗ್ ಮೇಲಿದೆ. 2011ರಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು.
#9 2ಜಿ ತರಂಗಾಂತರ ಹಗರಣ
2010ರ 2ಜಿ ಹಗರಣ : 2ನೇ ಜನರೇಷನ್ ತರಂಗಗುಚ್ಛಗಳನ್ನು ಹಂಚಿಕೆ ಮಾಡುವಲ್ಲಿ ಮಾಡಿದ ಅವ್ಯವಹಾರ ಇದಾಗಿದೆ. ಸುಮಾರು 176,000 ಕೋಟಿ ರು ಅವ್ಯವಹಾರ ಇದಾಗಿದ್ದು, ಸಿಬಿಐ ತನಿಖೆಯಿಂದ ಅವ್ಯವಹಾರ ಮೊತ್ತ 30,984 ಕೋಟಿ ರು ಎಂದು ತಿಳಿದು ಬಂದಿದೆ.
ಡಿಎಂಕೆ ಮುಖಂಡ ಎ. ರಾಜಾ, ಎಂಕೆ ಕನಿಮೋಳಿ, ರಾಜಕೀಯ ಲಾಬಿಗಾರ್ತಿ ನೀರಾ ರಾಡಿಯಾ ಹೆಸರು ಆರೋಪ ಪಟ್ಟಿಯಲ್ಲಿ ಕೇಳಿ ಬಂದಿತ್ತು. ರಾಜಾ ತಲೆದಂಡ ಕೂಡಾ ಆಗಿದೆ. ತನಿಖೆ ಮುಂದುವರೆದಿದೆ.#10 ಕಾಮನ್ ವೆಲ್ತ್ ಹಗರಣ
2010ರ ಕಾಮನ್ ವೆಲ್ತ್ ಹಗರಣ ಆಯೋಜಕ ಸಮಿತಿ ಚೇರ್ಮನ್ ಸುರೇಶ್ ಕಲ್ಮಾಡಿ ತಲೆದಂಡಕ್ಕೆ ಕಾರಣವಾಯಿತು. ಕ್ರೀಡಾಕೂಟದ ಪರಿಕರ ಖರೀದಿ, ಆಯೋಜನೆ ಗುತ್ತಿಗೆ ನೀಡುವಲ್ಲಿ 141 ಕೋಟಿ ಅವ್ಯವಹಾರ ನಡೆದಿರುವ ಆರೋಪವನ್ನು ಕಲ್ಮಾಡಿ ಎದುರಿಸಿದ್ದರು. ಸದ್ಯಕ್ಕೆ ಕಲ್ಮಾಡಿ ಜಾಮೀನು ಪಡೆದು ಹೊರ ಬಂದಿದ್ದಾರೆ.
#11 ವೋಟಿಗಾಗಿ ನೋಟು
2008ರಲ್ಲಿ ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಸರ್ಕಾರ ಸಂಸದರಿಗೆ ಲಂಚ ನೀಡಿ ಜು.22,2008ರಲ್ಲಿ ನಡೆದ ಮತದಾನವನ್ನು ಗೆದ್ದಿದೆ ಎಂದು ಆರೋಪಿಸಲಾಗಿತ್ತು. ಇಂಡೋ ಯುಎಸ್ ಅಣು ಒಪ್ಪಂದ ವಿರೋಧಿಸಿ ಎಡಪಕ್ಷಗಳು ಯುಪಿಎಗೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಂಡಿತ್ತು.
#12 ಷೇರುಪೇಟೆ ಹಗರಣ
2001ರಲ್ಲಿ ಹೂಡಿಕೆದಾರರಿಗೆ ಕಳ್ಳ ಮಾರ್ಗ ಹಾಕಿಕೊಟ್ಟು ಕೋಲ್ಕತ್ತಾ ಷೇರು ಪೇಟೆಯನ್ನು ಅಲ್ಲಾಡಿಸಿದ ಕೇತನ್ ಪಾರೇಖ್ k-10 ಸೂಚ್ಯಂಕ ಎಂದು ತನ್ನದೇ ಬದಲಿ ವ್ಯವಸ್ಥೆ ಸ್ಥಾಪಿಸಿ ಸುಮಾರು 1 ಲಕ್ಷ ಕೋಟಿ ರು ದೋಚಿದ್ದ ಎಂದು ಆರೋಪಿಸಲಾಗಿದೆ.
#13 ಆಹಾರ ಧಾನ್ಯ ಉ.ಪ್ರ ಹಗರಣ
2002 ಹಾಗೂ 2010 ರಲ್ಲಿ ಕಾಣಿಸಿಕೊಂದ ಆಹಾರ ಧಾನ್ಯ ಹಗರಣದ ಮೊತ್ತ ಸುಮಾರು 35,000 ಕೋಟಿ ರು ದಾಟುತ್ತದೆ. ಅಂತ್ಯೋದಯ ಅಣ್ಣ ಯೋಜನೆ, ಜವಹಾರ್ ರೋಜ್ ಗಾರ್ ಯೋಜನೆ, ಮಧ್ಯಾಹ್ನದ ಬಿಸಿಯೂಟಕ್ಕೆ ಮೀಸಲಾದ ಪಡಿತರ ಧಾನ್ಯ ಕಾಳಸಂತೆ ಸೇರುವಂತೆ ಭ್ರಷ್ಟರು ಮಾಡಿದರು.
ಭಾರತ ನೇಪಾಳ ಗಡಿಯಲ್ಲಿ 1.17 ಕೋಟಿ ರು ಮೌಲ್ಯದ ಆಹಾರ ಧಾನ್ಯ, ಬಾಂಗ್ಲಾದೇಶ ಗಡಿಯಲ್ಲಿ 60.62 ಲಕ್ಷ ಮೌಲ್ಯದ ಧಾನ್ಯಗಳನ್ನು ಜಪ್ತಿ ಮಾಡಲಾಯಿತು.
#14 ಸತ್ಯಂ ಕಂಪ್ಯೂಟರ್ ಹಗರಣ
2009ರಲ್ಲಿ ಬೆಳಕಿಗೆ ಬಂದ ಸತ್ಯಂ ಕಂಪ್ಯೂಟರ್ ಸರ್ವೀಸಸ್ ಹಗರಣ ಭಾರತ ಕಂಡ ಅತಿ ದೊಡ್ಡ ಕಾರ್ಪೊರೇಟ್ ಹಗರಣವಾಗಿದೆ. ಕಂಪನಿಯ ಆರ್ಥಿಕ ದಾಖಲೆಗಳನ್ನು ತಿದ್ದಿದ್ದಲ್ಲದೆ ಸ್ವಜನ ಪಕ್ಷಪಾತ ಮಾಡಿದ ಆರೋಪದ ಮೇಲೆ ಚೇರ್ಮನ್ ರಾಮಲಿಂಗ ರಾಜು ಜೈಲು ಸೇರಬೇಕಾಯಿತು. 2009ರ ಜ.7ರಂದು ರಾಜು ರಾಜೀನಾಮೆ ನೀಡಿದರು. ಸುಮಾರು 1.47 ಬಿಲಿಯನ್ ಡಾಲರ್ ಮೊತ್ತದ ಅವ್ಯವಹಾರ ಇದಾಗಿದೆ.
#15 ತಾಜ್ ಕಾರಿಡಾರ್ ಹಗರಣ
2002-2003 ರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಹಾಗೂ ಸಚಿವ ನಾಸಿಮುದ್ದೀನ್ ಸಿದ್ದಿಕಿ ಅವರು ಈ ಹಗರಣದ ಪ್ರಮುಕ ಆರೋಪಿಗಳಾಗಿ ಹೆಸರಿಸಲಾಗಿದೆ. ತಾಜ್ ಮಹಲ್ ಬಳಿ ಪ್ರವಾಸಿಗರ ಸೌಲಭ್ಯಕ್ಕಾಗಿ ಮೀಸಲಿಟ್ಟ ಹಣ ದುರುಪಯೋಗವಾಗಿತ್ತು.
#16 ಮೇವು ಹಗರಣ
1996ರಲ್ಲಿ ಜಾನುವಾರುಗಳಿಗೆ ಮೇವು, ಔಷಧಿ ಒದಗಿಸಲು ಇಟ್ಟಿದ್ದ 950 ಕೋಟಿ ರು ನುಂಗಿ ಹಾಕಿದ ಆರೋಪ ಪಶು ಸಂಗೋಪಣೆ ಇಲಾಖೆ ಹಾಗೂ ಬಿಹಾರದ ಅಂದಿನ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಮೇಲೆ ಬಂದಿತ್ತು. ಸಿಎಂ ಹುದ್ದೆಗೆ ರಾಜೀನಾಮೆ ನೀಡಿ ಲಾಲೂ ಕೆಳಗಿಳಿಯಬೇಕಾಯಿತು.
#17 ಟೆಲಿಕಾಂ ಹಗರಣ
1996ರಲ್ಲಿ ಕೇಂದ್ರ ಸಂವಹನ ಖಾತೆಯ ಮಾಜಿ ರಾಜ್ಯ ಸಚಿವ ಸುಖರಾಮ್ ಅವರು ಹೈದರಾಬಾದ್ ಕಂಪನಿಯಿಂದ ಟೆಲಿಕಾಂ ಉಪಕರಣ ಖರೀದಿ ಸಂಬಂಧ ಇಲಾಖೆಗೆ 1.6 ಕೋಟಿ ರು ನಷ್ಟ ಉಂಟು ಮಾಡಿದ್ದರು.
#18 ಯೂರಿಯಾ ಹಗರಣ
1996ರ ಯೂರಿಯಾ ಹಗರಣ ದೇಶದಾಂದ್ಯಂತ ರೈತರ ಬವಣೆಯನ್ನು ಮೊದಲ ಬಾರಿಗೆ ತೆರೆದಿಟ್ಟಿತ್ತು. ರಾಸಾಯನಿಕ ಗೊಬ್ಬರಗಳ ಅಭಾವ, ಉದ್ಯಮಿಗಳ ಕೈ ಹಿಡಿತದಲ್ಲಿರುವ ನ್ಯಾಷನಲ್ ಫರ್ಟಿಲೈಜರ್ ಲಿ. ಸರ್ಕಾರ 133 ಕೋಟಿ ರು ನೀಡಿ ಯೂರಿಯಾ ಆಮದು ಮಾಡಿಕೊಂಡಿದ್ದು ಅದು ಎಂದಿಗೂ ಯಾರಿಗೂ ತಲುಪುದೇ ಹಾಳಾಗಿದ್ದು ಈಗ ಇತಿಹಾಸ
#19 ಹವಾಲ ಹಗರಣ
1992 ರಲ್ಲಿ ಷೇರುಮಾರುಕಟ್ಟೆ ಸುರಕ್ಷತೆ ಹಗರಣ, ಹರ್ಷದ್ ಮೆಹ್ತಾ ಅವರು ಬ್ಯಾಂಕ್ ಹಾಗೂ ಸ್ಟಾಕ್ ಮಾರುಕಟ್ಟೆಯಲ್ಲಿ ಮೂಡಿಸಿದ ಸಂಚಲನದಿಂದಾಗಿ ಎಸಿಸಿಯಂಥ ಷೇರುಗಳು 500 ರು ಮೌಲ್ಯದಿಂದ 10,000ಕ್ಕೇರಿತ್ತು. ಸುಮಾರು 10,000 ಕೋಟಿ ಮೌಲ್ಯದ ಹಗರಣ ಇದಾಗಿದೆ.
#20 ಏರ್ ಬಸ್ ಹಗರಣ
90 ರ ದಶಕದ ಪ್ರಮುಖ ಹಗರಣ ಇಂಡಿಯನ್ ಏರ್ ಲೈನ್ಸ್ ನ ಬುಡ ಅಲ್ಲಾಡಿಸಿತ್ತು. ಬೋಯಿಂಗ್ ಏರ್ ಬಸ್ ಖರೀದಿ ಸಂಬಂಧ ಸುಮಾರು 2,000 ಕೋಟಿ ಮೌಲ್ಯದ ಅವ್ಯವಹಾರ ನಡೆದಿದೆ ಎನ್ನಲಾಗಿತ್ತು. ಎ 320 ಏರ್ ಲೈನರ್ ಅಪಘಾತದ ನಂತರ ಈ ಪ್ರಕರಣ ಹೆಚ್ಚುಕಾಲ ಹೊಗೆಯಾಡಿತ್ತು.
#21 ಬೊಫೋರ್ಸ್ ಹಗರಣ
1980-90 ರ ದಶಕದ ಅತಿದೊಡ್ದ ಹಗರಣ ಇದಾಗಿದೆ.ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರ ಮೇಲೆ ಲಾಭ ಪಡೆದ ಆರೋಪ ಹೊರೆಸಲಾಗಿತ್ತು. 155 ಎಂಎಂ ಫಿರಂಗಿ ಗಳನ್ನು ಬೊಫೋರ್ಸ್ ಎಬಿ ಕಂಪನಿಯಿಂದ ಖರೀದಿಸಲು ಕಿಕ್ ಬ್ಯಾಕ್ ಪಡೆದ ಆರೋಪ ಗಾಂಧಿ ಕುಟುಂಬವನ್ನು ಅಲುಗಾಡಿಸಿತ್ತು.
ಸ್ವೀಡಿಷ್ ಮೂಲದ ಕಂಪನಿ 640 ಮಿಲಿಯನ್ ರು(12 ಮಿಲಿಯನ್ ಯುಎಸ್ ಡಾಲರ್) ಮೊತ್ತದ ಕಿಕ್ ಬ್ಯಾಖ್ ಅನ್ನು ಹಿರಿಯ ರಾಜಕಾರಣಿಅಗ್ಳಿಗೆ ನೀಡಿದ ಬಗ್ಗೆ ಮಾಹಿತಿ ಹೊರ ಬಿದ್ದಿತ್ತು. ವಿಶ್ವನಾಥ್ ಪ್ರತಾಪ್ ಸಿಂಗ್ ಅವರು ರಕ್ಷಣಾ ಸಚಿವರಾಗಿದ್ದ ಕಾಲದಲ್ಲಿ ಈ ಹಗರಣ ಬೆಳಕಿಗೆ ಬಂದಿತ್ತು.
#22 ಸೈಂಟ್ ಕಿಟ್ಸ್ ವಂಚನೆ
ಮಾಜಿ ಪ್ರಧಾನಿ ವಿಪಿ ಸಿಂಗ್ ಅವರ ಪುತ್ರ ಅಜಯ್ ಸಿಂಗ್ ಅವರ ಸೈಂಟ್ ಕಿಟ್ಸ್ ನಲ್ಲಿನ ಫಸ್ಟ್ ಟ್ರಸ್ಟ್ ಕಾರ್ಫ್ ಖಾತೆಗೆ ಹಣ ಜಮಾವಣೆಯಾಗಿರುವ ಬಗ್ಗೆ ಅಪಸ್ವರ ಎದ್ದಿತ್ತು. ಸುಮಾರು 21 ಮಿಲಿಯನ್ ಡಾಲರ್ ಹಣ ಜಮೆಯಾಗಿತ್ತು.
#23 ಸಬ್ ಮೆರಿನ್ ಹಗರಣ
ಸುಮಾರು 420 ಕೋಟಿ ರು ಮೌಲ್ಯದ ಈ ಹಗರಣ 1987ರಲ್ಲಿ ದೇಶವನ್ನು ಬೆಚ್ಚಿ ಬೀಳಿಸಿತ್ತು. ಜರ್ಮನ್ನಿನ ಸಬ್ ಮೆರಿನ್ ತಯಾರಿಕಾ ಸಂಸ್ಥೆ ಕಪ್ಪು ಪಟ್ಟಿಗೆ ಸೇರಿದ್ದು ಬಿಟ್ಟರೆ ಪ್ರಕರಣ ಹಳ್ಳ ಹಿಡಿಯಿತು.
#24 1981ರ ಅಂತುಲೆ ಟ್ರಸ್ಟ್
ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಎಆರ್ ಅಂತುಲೆ ಅವರು ರಾಜ್ಯದ ಸಂಪನ್ಮೂಲ ಹಾನಿ ಜೊತೆಗೆ ವಾಣಿಜ್ಯೋದ್ದೇಶಕ್ಕಾಗಿ 30ಕೋಟಿ ರು.ಗೂ ಅಧಿಕ ಮೊತ್ತ ಹಾಳುಗೆಡವಿದ ಆರೋಪ ಎದುರಿಸಬೇಕಾಯಿತು.
#25, 1948 ಜೀಪ್ ಹಗರಣ
ಸ್ವಾತಂತ್ರ್ಯ ಸಿಕ್ಕಿದ ಸಂಭ್ರಮ ಮರೆ ಮಾಚುವಂತೆ ಮಾಡಿದ ಮೊದಲ ಹಗರಣ. ಆಗ ಬ್ರಿಟನ್ನಿಗೆ ಭಾರತದ ಹೈಕಮಿಷನರ್ ಆಗಿದ್ದ ವಿಕೆ ಕೃಷ್ಣ ಅವರು ನಿಯಮಗಳನ್ನು ಉಲ್ಲಂಘಿಸಿ 80 ಲಕ್ಷ ಗುತ್ತಿಗೆಗೆ ಸಹಿಸ ಹಾಕಿದ್ದರು. ವಿದೇಶಿ ಕಂಪನಿಯ ಮೂಲಕ ಭಾರತೀಯ ಸೇನೆಗೆ ಜೀಪು ಖರೀದಿ ಡೀಲ್ ಇದಾಗಿತ್ತು.
ಕೇವಲ 155 ಜೀಪುಗಳು ಮಾತ್ರ ಕಾಣಿಸಿಕೊಂಡಿದ್ದನ್ನು ಪ್ರಧಾನಿ ನೆಹರೂ ಅವರೇ ಒಪ್ಪಿಕೊಂಡರು. ಆಗಿನ ಗೃಹ ಸಚಿವ ಗೋವಿಂದ ವಲ್ಲಭ್ ಪಂತ್ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಸೆ.30,1955ಕ್ಕೆ ಈ ಪ್ರಕರಣದ ನ್ಯಾಯಾಂಗ ತನಿಖೆಗೆ ತೆರೆ ಎಳೆದರು. ಅನಂತಶಯನ ಅಯ್ಯಂಗಾರ್ ಅವರ ಸಮಿತಿ ತನಿಖೆಗೆ ಶಿಫಾರಸು ಮಾಡಿದ್ದು ಬರೀ ಕಾಗದದಲ್ಲಿ ಉಳಿಯಿತು.